ಎಲ್‌ಪಿಜಿ: ಜನರ ದಾರಿ ತಪ್ಪಿಸುತ್ತಿರುವ ವಿಪಕ್ಷ

KannadaprabhaNewsNetwork |  
Published : Mar 15, 2026, 02:15 AM IST
ಪ್ರಹ್ಲಾದ ಜೋಶಿ | Kannada Prabha

ಸಾರಾಂಶ

ದೇಶದಲ್ಲಿ ಎಲ್‌ಪಿಜಿ, ಕೆರೋಸಿಯನ್, ಎ-ಟಿಎ, ಪೆಟ್ರೋಲ್ ಡೀಸೆಲ್ ಅಭಾವವಿಲ್ಲ. ನಾವು ಸಾಕಷ್ಟು ಶೇಖರಣೆ ಮಾಡಿದ್ದೇವೆ. ವಿದೇಶದಲ್ಲಿ ಏನಾಗುತ್ತಿದೆ ಎಂಬುವುದು ಇಡೀ ವಿಶ್ವಕ್ಕೆ ಗೊತ್ತಿದೆ. ಎಲ್‌ಪಿಜಿ ಅಭಾವ ದೇಶದಲ್ಲಿ ಎಲ್ಲಿಯೂ ಆಗಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಹುಬ್ಬಳ್ಳಿ:

ವಿಶ್ವವೇ ಯುದ್ಧದ ಬಿಕ್ಕಟ್ಟು ಎದುರಿಸುತ್ತಿದೆ. ಉತ್ತಮವಾದ ರಾಜತಾಂತ್ರಿಕತೆ, ವಿದೇಶಾಂಗ ನೀತಿಯಿಂದ ಭಾರತದಲ್ಲಿ ಯಾವುದೇ ಸಮಸ್ಯೆ ಎದುರಾಗಿಲ್ಲ. ಎಲ್‌ಪಿಜಿ ಅಭಾವದ ಬಗ್ಗೆ ವಿರೋಧ ಪಕ್ಷಗಳು ಜನರಲ್ಲಿ ಆತಂಕ ಸೃಷ್ಟಿಸಿ, ದಾರಿತಪ್ಪಿಸುವ ಕೆಲಸ ಮಾಡುತ್ತಿರುವುದು ಸರಿಯಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಿಡಿಕಾರಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಎಲ್‌ಪಿಜಿ, ಕೆರೋಸಿಯನ್, ಎ-ಟಿಎ, ಪೆಟ್ರೋಲ್, ಡೀಸೆಲ್ ಅಭಾವವಿಲ್ಲ. ನಾವು ಸಾಕಷ್ಟು ಶೇಖರಣೆ ಮಾಡಿದ್ದೇವೆ. ವಿದೇಶದಲ್ಲಿ ಏನಾಗುತ್ತಿದೆ ಎಂಬುವುದು ಇಡೀ ವಿಶ್ವಕ್ಕೆ ಗೊತ್ತಿದೆ. ಎಲ್‌ಪಿಜಿ ಅಭಾವ ದೇಶದಲ್ಲಿ ಎಲ್ಲಿಯೂ ಆಗಿಲ್ಲ. ವಿರೋಧ ಪಕ್ಷದವರು ಆತಂಕ ಸೃಷ್ಟಿಸುತ್ತಿದ್ದು, ಇದರಿಂದ ಜನರು ಗ್ಯಾಸ್ ಸಿಲಿಂಡರ್‌ಗಳ ಹೆಚ್ಚು ಬುಕ್ ಮಾಡುತ್ತಿದ್ದಾರೆ. ವಾಣಿಜ್ಯ ಗ್ಯಾಸ್ ಸಿಲಿಂಡರ್ ಹೆಚ್ಚು ಬುಕ್ ಆಗಿದ್ದು, ಸೀಮಿತವಾಗಿ ನೀಡಲು ಸೂಚಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಭಾರತ ಸುರಕ್ಷಿತವಾಗಿದೆ. ಇದು ಹೆಮ್ಮೆಯ ಸಂಗತಿ. ಬಿಕ್ಕಟ್ಟಿನ ಸಮಯದಲ್ಲಿ ವಿರೋಧ ಪಕ್ಷದವರು ಸಹಕಾರ ನೀಡಬೇಕು. ಆದರೆ, ರಾಹುಲ್ ಗಾಂಧಿ ಅಧಿವೇಶದಲ್ಲಿ ಎಲ್‌ಪಿಜಿ ಬಗ್ಗೆ ಮಾತನಾಡಿ ಓಡಿ ಹೋದರು. ಇದು ಬೇಜವಾಬ್ದಾರಿ ನಡೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸುಳ್ಳು ಹೇಳಿ ಜನರ ದಾರಿ ತಪ್ಪಿಸುತ್ತಿದೆ. ಇವರು ರಾಜಕೀಯ ದುರುದ್ದೇಶದಿಂದ ಜನರು ಆತಂಕಗೊಂಡು ಬುಕ್ಕಿಂಗ್ ಹೆಚ್ಚು ಮಾಡಿಕೊಳ್ಳುತ್ತಿದ್ದಾರೆ. ಕೇಂದ್ರ ಸರ್ಕಾರ ಉತ್ತಮವಾಗಿ ನಿರ್ವಹಣೆ ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರ ವಿರುದ್ಧ ಪ್ರತಿಭಟನೆ ಮಾಡುವಂತೆ ಹೇಳಿಕೆ ನೀಡಿದ್ದಾರೆ. ಇದು ನೈತಿಕ ಅಧಃಪತನದ ಪರಾಕಾಷ್ಠೆ ಹಾಗೂ ಬೇಜವಾಬ್ದಾರಿ ಹೇಳಿಕೆಯಾಗಿದೆ ಎಂದು ಹರಿಹಾಯ್ದರು.

ದೇಶದಲ್ಲಿ ಕೆರೋಸಿನ್ ಶೇಖರಣೆ ಹೆಚ್ಚಿಸಲಾಗಿದೆ. ಸದ್ಯ 33 ಕೋಟಿ ಎಲ್‌ಪಿಜಿ ಸಂಪರ್ಕ ಮಾಡಲಾಗಿದೆ. ಪ್ರಮುಖ ದೇಶಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಅಭಾವ ಎದುರಾಗಿದ್ದು, ಭಾರತದಲ್ಲಿ ಎಲ್ಲಿಯೂ ಆಗಿಲ್ಲ. ಇರಾನನಿಂದಲೂ 2-3 ಶೀಪ್‌ಗಳು ಭಾರತಕ್ಕೆ ಬಂದಿವೆ. ಆಸ್ಟ್ರೇಲಿಯಾ, ಆಫ್ರಿಕಾ, ಕೆನಡಾ, ರಷ್ಯಾದಿಂದ ಗ್ಯಾಸ್ ತರಿಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಕರ್ನಾಟಕ ಸಿಲಿಂಡರ್ ಅಭಾವದ ಬಗ್ಗೆ ಮಾತನಾಡುವ ಸಿದ್ದರಾಮಯ್ಯ ಅವರು, ಪೆಟ್ರೋಲ್‌, ಡೀಸೆಲ್‌ ದರ ಹೆಚ್ಚಿಸಿ ಜನರಿಗೆ ಹೊರೆಯಾಗುವಂತೆ ಮಾಡಿದ್ದಾರೆ. ವಿಶ್ವದಲ್ಲಿ ಏನಾದರೂ ಪ್ರಧಾನಿ ನರೇಂದ್ರ ಮೋದಿ ಕಾರಣ ಎಂದು ಆರೋಪಿಸುತ್ತಿದ್ದಾರೆ. ಇದು ಬೇಜವಾಬ್ದಾರಿ ಹೇಳಿಕೆಗಳು. ದೇಶದಲ್ಲಿ ಎಲ್ಲವೂ ಸರಿಯಿದ್ದು, ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲಿಂಗರಾಜ ಪಾಟೀಲಗೆ ವಿಜಯೇಂದ್ರ, ಜೋಶಿ ಸಮಾಧಾನ
ಉತ್ತಮ ಶಿಕ್ಷಕರಾಗಲು ಪಾಠದ ಜ್ಞಾನದ ಜತೆಗೆ ಮಾನವೀಯ ಮೌಲ್ಯಗಳು ಅಗತ್ಯ