ಕನ್ನಡಪ್ರಭ ವಾರ್ತೆ ಕೋಲಾರ ಕೋಲಾರದ ಗಲ್ಪೇಟೆಯ ನಿವಾಸಿ ಲೆಪ್ಟಿನೆಂಟ್ ಕರ್ನಲ್ ಅಮರನಾಥ್ (೫೪) ಮೇಘಾಲಯದ ಶಿಲ್ಲಾಂಗ್ನಲ್ಲಿ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಮೃತರ ದೇಹವನ್ನು ವೈದ್ಯಕೀಯ ಆಸ್ಪತ್ರೆಗೆ ದಾನ ಮಾಡುವ ಮೂಲಕ ಅವರ ಕುಟುಂಬದವರು ಹೃದಯವಂತಿಕೆ ಮೆರೆದಿದ್ದಾರೆ. ಸೇನೆಗೆ ಸಾಮಾನ್ಯ ಯೋಧನಾಗಿ ಸೇರಿದ್ದ ಲೆ.ಕ.ಅಮರನಾಥ್, ಸೇನಾ ಅಧಿಕಾರಿಯೊಬ್ಬರು ಅವರನ್ನು ಅಪಮಾನಿಸಿದ ಕಾರಣವನ್ನು ಸವಾಲಾಗಿ ಸ್ವೀಕರಿಸಿ ಲೆಪ್ಟಿನೆಂಟ್ ಕರ್ನಲ್ ಅಧಿಕಾರಿ ಹುದ್ದೆಗೆ ಏರುವ ಛಲ ಹೊತ್ತು ಸಾಧಿಸಿ ತೋರಿಸಿದ್ದರು.ಮೃತರು. ಪತ್ನಿ ಜ್ಯೋತಿ ಹಾಗೂ ಮಗ ಚೇತನ್, ತಾಯಿ ರತ್ನಮ್ಮ ಸಹೋದರ ಪೊಲೀಸ್ ಅಧಿಕಾರಿ ವಂದೇ ಮಾತರಂ ಸೋಮಶಂಕರ್, ಸಾರಿಗೆ ಸಂಸ್ಥೆ ಅಧಿಕಾರಿ ರಮೇಶ್, ಸಹೋದರಿ ಅರಣ್ಯ ಇಲಾಖೆ ಉದ್ಯೋಗಿ ವಿಜಯಲಕ್ಷ್ಮಿ ಸೇರಿದಂತೆ ಅಪಾರ ಸಂಖ್ಯೆ ಬಂಧುಗಳು, ಸ್ನೇಹಿತರನ್ನು ಅಗಲಿದ್ದಾರೆ. ಘಟನೆ ವಿವರ:-ಲೆ.ಕ.ಅಮರನಾಥ್ ಮೇಘಾಲಯದ ಶಿಲ್ಲಾಂಗ್ನಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಇತ್ತೀಚೆಗೆ ಸಿಕಂದರಾಬಾದ್ಗೆ ವರ್ಗಾವಣೆಯಾದ ಹಿನ್ನೆಲೆಯಲ್ಲಿ ಇಡೀ ಕುಟುಂಬ ಛತ್ತೀಸ್ಗಡಕ್ಕೆ ತೆರಳಿತ್ತು. ಗುರುವಾರವಷ್ಟೇ ಕುಟುಂಬವನ್ನು ಕೋಲಾರಕ್ಕೆ ವಾಪಸ್ ಕಳುಹಿಸಿ, ತಾವು ವರ್ಗಾವಣೆ ಆದೇಶ ಪತ್ರ ಪಡೆಯಲು ಶುಕ್ರವಾರ ತಮ್ಮ ಸ್ನೇಹಿತರೊಂದಿಗೆ ಶಿಲ್ಲಾಂಗ್ಗೆ ತೆರಳಿದ್ದರು. ಅಲ್ಲಿ ಟ್ರಕ್ಕಿಂಗ್ ಸಹ ಹೋಗಿದ್ದರೆನ್ನಲಾಗಿದೆ.
ಕುಟುಂಬದ ೮-೧೦ ಮಂದಿ ಮಾತ್ರ ಮೇಘಾಲಯದ ಶಿಲ್ಲಾಂಗ್ನಲ್ಲಿ ಹೋಗಿ, ಅಂತಿಮ ದರ್ಶನ ಪಡೆದಿದ್ದು, ಯುಗಾದಿ ಸಂಭ್ರಮದಲ್ಲಿ ಭಾಗವಹಿಸಬೇಕಾಗಿದ್ದ ಅಮರನಾಥ್ ಅವರ ಕುಟುಂಬ ಇಂದು ಕಣ್ಣೀರಿನಲ್ಲಿ ಮುಳುಗುವಂತಾಗಿದೆ. ಅವರ ತಾಯಿ ರತ್ನಮ್ಮ ಅನಾರೋಗ್ಯಕ್ಕೆ ತುತ್ತಾಗಿದ್ದು, ಮಗನ ಸಾವಿನ ವಿಷಯವನ್ನು ಅವರಿಗೂ ತಿಳಿಸಿಲ್ಲ ಎನ್ನಲಾಗಿದೆ.