ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಳಚೌಕಿ ಪ್ರದೇಶದಲ್ಲಿರುವ ಶ್ರೀ ಪಾಂಡಿರಾಜ ಪೆರ್ಗಡೆ ಮನೆಯ ಮುಂಭಾಗದಲ್ಲಿರುವ ಅಪರೂಪದ ಶಿಲಾಶಾಸನವನ್ನು ಪ್ರಾಚ್ಯಸಂಚಯ ಸಂಶೋಧನ ಕೇಂದ್ರ-ಉಡುಪಿ ತಂಡ ಅಧ್ಯಯನ ನಡೆಸಿದ್ದು, ಇದು ಕ್ರಿ.ಶ. 1616ರ ಕಾಲಘಟ್ಟಕ್ಕೆ ಸೇರಿರುವ ಅಪ್ರಕಟಿತ ಶಿಲಾಶಾಸನವಾಗಿರಬಹುದೆಂದು ಪ್ರಾಥಮಿಕ ಅಧ್ಯಯನದಲ್ಲಿ ತಿಳಿದು ಬಂದಿದೆ.ಧರ್ಮಚಾವಡಿ ಹೆಗ್ಗಡತಿ ಎಂಬ ಹೆಸರಿನ ಮನೆಯ ಹೊರಭಾಗದಲ್ಲಿ ಸಂರಕ್ಷಿಸಲಾಗಿರುವ ಈ ಶಾಸನವು ಹಿಂದೆ ದುಗ್ಗಲ್ಲಾಯ ದೈವಗುಂಡದ ಸಮೀಪದಲ್ಲಿದ್ದು, ಬಳಿಕ ಮನೆ ವಿಸ್ತರಣೆ ವೇಳೆ ಸುರಕ್ಷಿತವಾಗಿ ಹೊರಭಾಗದಲ್ಲಿ ನಿಲ್ಲಿಸಲಾಗಿದೆ ಎಂದು ಪಾಂಡಿರಾಜ ಪೆರ್ಗಡೆ ಹಾಗೂ ರವಿರಾಜ ಪೆರ್ಗಡೆ ಮಾಹಿತಿ ನೀಡಿದ್ದಾರೆ.ಶಾಸನಕ್ಕೆ ಸಂಬಂಧಿಸಿದ ಯಾವುದೇ ಅಧಿಕೃತ ದಾಖಲೆಗಳು ಲಭ್ಯವಿಲ್ಲದ ಹಿನ್ನೆಲೆಯಲ್ಲಿ ಆಯುರ್ವೇದ ವೈದ್ಯ ಡಾ. ಪಿ. ಸತ್ಯನಾರಾಯಣ ಭಟ್ ಅವರ ಪ್ರಾಥಮಿಕ ಮಾಹಿತಿಯ ಮೇರೆಗೆ ಪ್ರಾಚ್ಯಸಂಚಯ ಸಂಶೋಧನ ಕೇಂದ್ರದ ಅಧ್ಯಯನ ನಿರ್ದೇಶಕ ಪ್ರೊ. ಎಸ್. ಎ. ಕೃಷ್ಣಯ್ಯ ಅವರು ಸಂಶೋಧನಾ ತಂಡದೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅಧ್ಯಯನದಲ್ಲಿ ಇತಿಹಾಸ ಮತ್ತು ಪುರಾತತ್ತ್ವ ಸಂಶೋಧನಾರ್ಥಿ ಶಶಾಂತ್ ಪಳ್ಳಿ ಹಾಗೂ ಇತಿಹಾಸ ಆಸಕ್ತರಾದ ಕೇಶವ ಡೋಂಗ್ರೆ ಮತ್ತು ಯದುಗೋಪನ್ ಕೆ.ಆರ್. ಸಹಕರಿಸಿದ್ದರು.