ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಗುದ್ದಲಿ ಪೂಜೆ ಬಳಿಕ ಮಾತನಾಡಿದ ಶಾಸಕರು, ‘ಸರ್ಕಾರದ ಸುತ್ತೋಲೆಯಂತೆ ಗ್ರಾಮದ ಸಮುದಾಯ ಭವನಗಳಿಗೆ 20 ಲಕ್ಷ ನೀಡಲಾಗುತ್ತಿದ್ದು, ಸದ್ಯಕ್ಕೀಗ 5 ಲಕ್ಷ ರು. ಅನುದಾನ ಬಿಡುಗಡೆಯಾಗಿದೆ’ ಎಂದರು. ಅಂಬೇಡ್ಕರ್ ಭವನದ ಬಳಿ ಉದ್ಯಾನವನ ಆಗಬೇಕು ಎಂಬ ಬೇಡಿಕೆ ಇಟ್ಟಿದ್ದೀರ. ಶಾಸಕರ ಅಥವಾ ಇತರೆ ಯೋಜನೆಗಳಲ್ಲಿ ಉದ್ಯಾನಕ್ಕೆ ಅನುದಾನ ಕೊಡಿಸುತ್ತೇನೆ. ಗ್ರಾಮೀಣ ಪ್ರದೇಶದಲ್ಲಿ ಸಮುದಾಯ ಭವನ ಕಟ್ಟುವುದು ಮುಖ್ಯವಲ್ಲ. ಭವನ ಉಪಯೋಗವಾಗಬೇಕಿದೆ. ಇತರೆಡೆಯಂತೆ ಇದು ಶಿಥಿಲಾವಸ್ಥೆಗೆ ಹೋಗಬಾರದು. ಮಾಡ್ರಹಳ್ಳಿ ಸಮುದಾಯ ಭವನ ರಾಷ್ಟ್ರೀಯ ಹೆದ್ದಾರಿ ಬಳಿಯಿದೆ. ಸರಿಯಾಗಿ ಬಳಕೆ ಮಾಡಿಕೊಳ್ಳಿ’ ಎಂದು ಸಲಹೆ ನೀಡಿದರು.
ಮೈಸೂರು ಭಾಗದವರೇ ಆದ ಡಾ.ಎಚ್.ಸಿ.ಮಹದೇವಪ್ಪ ಸಮಾಜ ಕಲ್ಯಾಣ ಸಚಿವರಾಗಿದ್ದಾರೆ. ಹೆಚ್ಚಿನ ಅನುದಾನ ತಂದು ಗ್ರಾಮೀಣ ಭಾಗಕ್ಕೆ ಅನುಕೂಲ ಮಾಡಿಕೊಡುವುದಾಗಿ ಹೇಳಿದರು.ಗ್ರಾಮದ ದಲಿತ ಮುಖಂಡ ಸುಭಾಷ್ ಮಾಡ್ರಹಳ್ಳಿ ಮಾತನಾಡಿದರು. ಈ ಸಮಯದಲ್ಲಿ ಎಪಿಎಂಸಿ ಅಧ್ಯಕ್ಷ ಆರ್.ಎಸ್.ನಾಗರಾಜು, ಹಾಪ್ಕಾಮ್ಸ್ ನಿರ್ದೇಶಕ ನೀಲಕಂಠಪ್ಪ, ತಾಪಂ ಮಾಜಿ ಅಧ್ಯಕ್ಷ ಎಚ್.ಎನ್. ಬಸವರಾಜು, ಗ್ರಾಮದ ಮುಖಂಡ ಚನ್ನಪ್ಪ, ನಾಗಪ್ಪ, ಚಾಮುಂಡರಾಜು, ಮಾಡ್ರಹಳ್ಳಿ ಚಂದ್ರು, ರಂಗಸ್ವಾಮಿ, ಮಾಯಿ ಸೇರಿದಂತೆ ಗ್ರಾಮಸ್ಥರು ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಸ್ಥರು ಹಲವರಿದ್ದರು.
ಸರ್ಕಾರಿ ಕಾರ್ಯಕ್ರಮದಲ್ಲಿ ಕೈ ಚಿಹ್ನೆ,ಕಾಂಗ್ರೆಸ್ ನಾಯಕರ ಫೋಟೋ: ಕಿಡಿ
ಗುಂಡ್ಲುಪೇಟೆ: ‘ಅಂಬೇಡ್ಕರ್ ಭವನಕ್ಕೆ ಗುದ್ದಲಿ ಪೂಜೆ ಮಾಡಿದ್ದಕ್ಕೆ ಸ್ವಾಗತಾರ್ಹ, ಆದರೆ ಸಾರ್ವಜನಿಕರ ತೆರಿಗೆ ಹಣದಲ್ಲಿ ಮಾಡ್ರಹಳ್ಳಿ ಗ್ರಾಮದಲ್ಲಿ ಶುಕ್ರವಾರ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಚಿಹ್ನೆ ಹಾಗೂ ಕಾಂಗ್ರೆಸ್ ನಾಯಕರ ಬ್ಯಾನರ್ ಹಾಕಿಕೊಂಡು ಶಂಕುಸ್ಥಾಪನೆ ಮಾಡಿದ್ದು ಸರೀನಾ ಶಾಸಕರೇ’ ಎಂದು ಬಿಜೆಪಿ ಮುಖಂಡ ಹಾಗೂ ಗ್ರಾಪಂ ಮಾಜಿ ಅಧ್ಯಕ್ಷ ಮಾಡ್ರಹಳ್ಳಿ ನಾಗೇಂದ್ರ ಅವರು ಶಾಸಕರು ಹಾಗೂ ಜಿಲ್ಲಾಡಳಿತವನ್ನು ಪ್ರಶ್ನಿಸಿದ್ದಾರೆ.ತಾಲೂಕಿನ ಅಧಿಕಾರಿಗಳು ಕಾಂಗ್ರೆಸ್ ಹಾಗೂ ಸ್ಥಳೀಯ ಶಾಸಕರ ಏಜೆಂಟರಂತೆ ವರ್ತಿಸಿದ್ದಾರೆ. ಸರ್ಕಾರಿ ಕಾರ್ಯಕ್ರಮಗಳಲ್ಲಿ ಪಕ್ಷದ ಚಿಹ್ನೆ ಹಾಗೂ ಪಕ್ಷದ ನಾಯಕರ ಫೋಟೋ ಬಳಸಿದ್ದು ಖಂಡನೀಯ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.