ಲೋಕಾರ್ಪಣೆಗೆ ಸಿದ್ಧಗೊಂಡ ಭವ್ಯ ಸಿಗಂದೂರು ಸೇತುವೆ

KannadaprabhaNewsNetwork | Updated : Jun 23 2025, 01:02 PM IST

ಶರಾವತಿ ನದಿಯ ಹಿನ್ನೀರಿನಲ್ಲಿ ನಿರ್ಮಿಸಲಾಗಿರುವ ಬಹುನಿರೀಕ್ಷಿತ ಸಿಗಂದೂರು ಸೇತುವೆ ಇದೀಗ ಮುಗಿಯುವ ಹಂತದಲ್ಲಿದ್ದು, ಲೋಕಾರ್ಪಣೆಗೆ ಸಿದ್ಧವಾಗಿದೆ.

ಪ್ರದೀಪ್ ಮಾವಿನ ಕೈ

 ಬ್ಯಾಕೋಡು :  ಶರಾವತಿ ನದಿಯ ಹಿನ್ನೀರಿನಲ್ಲಿ ನಿರ್ಮಿಸಲಾಗಿರುವ ಬಹುನಿರೀಕ್ಷಿತ ಸಿಗಂದೂರು ಸೇತುವೆ ಇದೀಗ ಮುಗಿಯುವ ಹಂತದಲ್ಲಿದ್ದು, ಲೋಕಾರ್ಪಣೆಗೆ ಸಿದ್ಧವಾಗಿದೆ. ಸುಮಾರು 423 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ಸೇತುವೆಯು, ಈ ಭಾಗದ ಜನರ ದಶಕಗಳ ಕನಸನ್ನು ನನಸಾಗಿಸಿದೆ. ಇದು ಕರ್ನಾಟಕದ ಅತಿ ಉದ್ದದ ಒಳನಾಡು ಕೇಬಲ್-ಸ್ಟೇಡ್ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಈ ಸೇತುವೆಯು ಅಂಬಾರಗೋಡ್ಲು ಮತ್ತು ಕಳಸವಳ್ಳಿ (ತುಮರಿ) ಗ್ರಾಮಗಳನ್ನು ಸಂಪರ್ಕಿಸಲಿದೆ. ಇಷ್ಟು ದಿನ ಶರಾವತಿ ಹಿನ್ನೀರನ್ನು ದಾಟಲು ಲಾಂಚ್‌ಗಳನ್ನೇ ಅವಲಂಬಿಸಬೇಕಾಗಿದ್ದು, ಇದು ಹೆಚ್ಚು ಸಮಯ ತೆಗೆದುಕೊಳ್ಳುವ ಮತ್ತು ತುರ್ತು ಸಂದರ್ಭಗಳಲ್ಲಿ ಇಲ್ಲಿ ಸಂಚಾರ ಮಾಡುವುದು ಸಮಸ್ಯೆಯಾಗಿತ್ತು. ಈಗ ಈ ಸೇತುವೆ ಸಂಚಾರಕ್ಕೆ ಮುಕ್ತವಾಗುವುದರೊಂದಿಗೆ, ಸಾಗರದಿಂದ ಸಿಗಂದೂರಿಗೆ ಪ್ರಯಾಣದ ಸಮಯ ಸುಮಾರು ಒಂದು ಗಂಟೆ ಕಡಿಮೆಯಾಗಲಿದೆ. ಇದು ಸ್ಥಳೀಯ ನಿವಾಸಿಗಳಿಗೆ, ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಭಕ್ತರಿಗೆ ಮತ್ತು ಪ್ರವಾಸಿಗರಿಗೆ ಅಪಾರ ಅನುಕೂಲವನ್ನು ಕಲ್ಪಿಸಲಿದೆ.

ಸೇತುವೆಯು ಹನ್ನೊಂದು ಪಿಲ್ಲರ್ ಗಳನ್ನು ಹೊಂದಿದ್ದು, ಸುಮಾರು 2.25 ಕಿಲೋಮೀಟರ್ ಉದ್ದದ ಈ ಸೇತುವೆಯು, ಕೇಬಲ್-ಸ್ಟೇಡ್ ತಂತ್ರಜ್ಞಾನವನ್ನು ಬಳಸಿ ನಿರ್ಮಿಸಲಾಗಿದೆ. ಇದು ''''''''ಎಕ್ಸ್‌ಟ್ರಾಡೋಸ್ಡ್ ಬ್ಯಾಲೆನ್ಸ್ಡ್ ಕ್ಯಾಂಟಿಲಿವರ್ ಸೇತುವೆ'''''''' ವಿನ್ಯಾಸವನ್ನು ಹೊಂದಿದ್ದು, ರಾಜ್ಯದಲ್ಲಿ ಇಂತಹ ಮೊದಲನೆಯ ಸೇತುವೆಯಾಗಿದೆ. ಇದರ ನಿರ್ಮಾಣವು ಭಾರತೀಯ ಎಂಜಿನಿಯರಿಂಗ್ ಸಾಮರ್ಥ್ಯಕ್ಕೆ ಉತ್ತಮ ಉದಾಹರಣೆಯಾಗಿದೆ. ಸೇತುವೆಯಲ್ಲಿ ಡಾಂಬಾರು ಮತ್ತು ಬಣ್ಣ ಬಳಿಯುವ ಅಂತಿಮ ಹಂತದ ಕೆಲಸಗಳು ಈಗಾಗಲೇ ಪೂರ್ಣಗೊಂಡಿವೆ.

ದಶಕಗಳ ಕನಸು ನನಸು:

ಸಿಗಂದೂರು ಸೇತುವೆ ನಿರ್ಮಾಣದ ಕುರಿತಾದ ಚರ್ಚೆ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪನವರ ಕಾಲದಿಂದಲೂ ನಡೆದುಕೊಂಡು ಬಂದಿದ್ದು, ಶರಾವತಿ ಹಿನ್ನೀರಿನಲ್ಲಿ ಸೇತುವೆ ನಿರ್ಮಾಣದ ಅಗತ್ಯತೆಯನ್ನು ಅವರ ಅವಧಿಯಲ್ಲೇ ಗುರುತಿಸಲಾಗಿತ್ತು.

ಆದರೆ, ರಾಜಕೀಯ ಇಚ್ಛಾಶಕ್ತಿಯ ಕೊರತೆ ಮತ್ತು ಇತರ ಕಾರಣಗಳಿಂದಾಗಿ ಈ ಯೋಜನೆ ಹಲವಾರು ದಶಕಗಳ ಕಾಲ ನನೆಗುದಿಗೆ ಬಿದ್ದಿತ್ತು. ಸಿಗಂದೂರು ಸೇತುವೆ ಕಾಮಗಾರಿಯು 2019ರಲ್ಲಿ ಪ್ರಾರಂಭವಾಗಿದ್ದು, ಇದಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಇಚ್ಛಾಶಕ್ತಿ ಮತ್ತು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ಪ್ರಯತ್ನಗಳು ಮುಖ್ಯ ಕಾರಣವಾಗಿವೆ. ಕೇಂದ್ರ ಭೂ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಅವರು ಸೇತುವೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಸಂಸದ ಬಿ.ವೈ. ರಾಘವೇಂದ್ರ ಅವರ ನಿರಂತರ ಪ್ರಯತ್ನದ ಫಲವಾಗಿ ಈ ಯೋಜನೆಗೆ ಕೇಂದ್ರದಿಂದ ಅನುದಾನ ದೊರೆತಿದೆ.

ಸೇತುವೆ ಕಾಮಗಾರಿ ಬಹುತೇಕ ಮುಕ್ತಾಯಗೊಂಡಿರುವುದರಿಂದ, ಉದ್ಘಾಟನೆಗೆ ಕ್ಷಣಗಣನೆ ಶುರುವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ ಮೂಲಕ ಉದ್ಘಾಟಿಸುವ ಸಾಧ್ಯತೆಯಿದ್ದು, ಗಡ್ಕರಿ ಮತ್ತು ಇತರೆ ಗಣ್ಯರು ಸ್ಥಳದಲ್ಲಿ ಉಪಸ್ಥಿತರಿರುವ ನಿರೀಕ್ಷೆಯಿದೆ. ಈ ಸೇತುವೆಯು ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿಗೆ ಹೊಸ ಮೈಲಿಗಲ್ಲು ಸ್ಥಾಪಿಸಲಿದ್ದು, ಆರ್ಥಿಕ ಮತ್ತು ಪ್ರವಾಸಿ ಚಟುವಟಿಕೆಗಳಿಗೆ ಉತ್ತೇಜನ ನೀಡಲಿದೆ. ಪ್ರಸ್ತುತ ಬಳಕೆಯಲ್ಲಿರುವ ಲಾಂಚ್‌ಗಳನ್ನು ತುರ್ತು ಪರಿಸ್ಥಿತಿಗಳಿಗಾಗಿ ಮತ್ತು ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರಿಸುವ ಚರ್ಚೆ ನಡೆದಿದೆ ಎಂದು ಬಲ್ಲ ಮೂಲಗಳು ಹೇಳುತ್ತವೆ.

ಹಲವು ವರ್ಷಗಳಿಂದ ಈ ಸೇತುವೆಯ ಬೇಡಿಕೆ ಇತ್ತು. ವಿವಿಧ ಸರ್ಕಾರಗಳ ಅವಧಿಯಲ್ಲಿ ಯೋಜನೆ ರೂಪಿಸಿದರೂ, ಕಾಮಗಾರಿ ವಿಳಂಬವಾಗಿತ್ತು. ಈಗ ಪೂರ್ಣ ಹಂತದಲ್ಲಿದ್ದು, ಈ ಭಾಗದ ಜನರ ದೀರ್ಘಕಾಲದ ಕನಸು ನನಸಾದಂತಾಗಿದೆ. ಸಿಗಂದೂರು ಸೇತುವೆ ಕೇವಲ ಒಂದು ನಿರ್ಮಾಣವಲ್ಲ, ಬದಲಿಗೆ ಶಿವಮೊಗ್ಗ ಮತ್ತು ಉಡುಪಿ ಜಿಲ್ಲೆಗಳ ನಡುವಿನ ಅಭಿವೃದ್ಧಿ ಮತ್ತು ಸಂಪರ್ಕದ ಸಂಕೇತವಾಗಿದೆ.

ಸೇತುವೆ ವಿಶೇಷತೆಗಳು:

* ಸುಮಾರು 2.25 ಕಿಲೋಮೀಟರ್ ಉದ್ದದ ಈ ಸೇತುವೆ ಶರಾವತಿ ನದಿಯ ಭೋರ್ಗರೆವ ಪ್ರವಾಹವನ್ನು ತಡೆದುಕೊಳ್ಳುವ ಸಾಮರ್ಥ್ಯದೊಂದಿಗೆ ವಿನ್ಯಾಸಗೊಳಿಸಲಾಗಿದೆ.

*ಇದು ಶಿವಮೊಗ್ಗ ಮತ್ತು ಉಡುಪಿ ಜಿಲ್ಲೆಗಳ ನಡುವಿನ ಪ್ರಮುಖ ಸಂಪರ್ಕ ಕೊಂಡಿಯಾಗಿದೆ.

*ಮಲೆನಾಡಿನಿಂದ ಕರಾವಳಿ ಕಡೆಗೆ ಪ್ರಯಾಣಿಸಲು ಶರಾವತಿ ನದಿಯನ್ನು ಲಾಂಚ್ ಮೂಲಕ ದಾಟಬೇಕಿತ್ತು. ಈ ಸೇತುವೆಯ ನಿರ್ಮಾಣದಿಂದಾಗಿ ಪ್ರಯಾಣದ ಸಮಯ ಗಣನೀಯವಾಗಿ ಕಡಿಮೆಯಾಗುತ್ತದೆ. ವಾಹನ ಸವಾರರು ನೇರವಾಗಿ ನದಿಯನ್ನು ದಾಟಲು ಸಾಧ್ಯವಾಗುವುದರಿಂದ ಸಮಯ ಉಳಿತಾಯವಾಗಲಿದೆ.

*ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ: ಸಿಗಂದೂರು ದೇವಸ್ಥಾನವು ಪ್ರಸಿದ್ಧ ಯಾತ್ರಾ ಸ್ಥಳವಾಗಿದ್ದು, ಪ್ರತಿದಿನ ಸಾವಿರಾರು ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ಸೇತುವೆಯ ನಿರ್ಮಾಣದಿಂದಾಗಿ ಭಕ್ತರು ಸುಲಭವಾಗಿ ದೇವಸ್ಥಾನವನ್ನು ತಲುಪಲು ಸಾಧ್ಯವಾಗುತ್ತದೆ. ಇದು ವ್ಯಾಪಾರ, ವಾಣಿಜ್ಯ ಮತ್ತು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿ ಈ ಭಾಗದ ಆರ್ಥಿಕತೆಗೆ ಚೈತನ್ಯ ತುಂಬಲಿದೆ. ಸ್ಥಳೀಯ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಸಿಗಲಿದ್ದು, ಉದ್ಯೋಗಾವಕಾಶಗಳು ಹೆಚ್ಚಲಿವೆ.

*ಪ್ರಸ್ತುತ ಅತಿಯಾದ ವಾಹನ ದಟ್ಟಣೆಯಿಂದಾಗಿ ಲಾಂಚ್‌ನಲ್ಲಿ ವಾಹನಗಳನ್ನು ಸಾಗಿಸುವುದು ಕಷ್ಟಕರವಾಗಿತ್ತು. ಸೇತುವೆಯ ನಿರ್ಮಾಣದಿಂದಾಗಿ ಈ ಸಂಚಾರ ದಟ್ಟಣೆ ಸಂಪೂರ್ಣವಾಗಿ ನಿವಾರಣೆಯಾಗಲಿದೆ. ಸರಕು ಸಾಗಣೆಯೂ ಸುಲಭವಾಗಲಿದ್ದು, ವ್ಯವಹಾರಗಳು ಸರಾಗವಾಗಿ ನಡೆಯಲಿವೆ.

*ಬೇಸಿಗೆಯಲ್ಲಿ ಲಿಂಗನಮಕ್ಕಿ ಜಲಾಶಯದಲ್ಲಿ ನೀರು ಕಡಿಮೆಯಾದಾಗ ಲಾಂಚ್‌ನಲ್ಲಿ ವಾಹನಗಳನ್ನು ದಾಟಿಸಲು ಕಷ್ಟವಾಗುತ್ತಿತ್ತು. ಸೇತುವೆ ಇರುವುದರಿಂದ ವರ್ಷದ ಎಲ್ಲಾ ದಿನಗಳಲ್ಲೂ ಸುರಕ್ಷಿತವಾಗಿ ನದಿ ದಾಟಲು ಸಾಧ್ಯವಾಗುತ್ತದೆ. ಇದು ಸ್ಥಳೀಯ ನಿವಾಸಿಗಳಿಗೆ ಮತ್ತು ಪ್ರವಾಸಿಗರಿಗೆ ಹೆಚ್ಚಿನ ಭದ್ರತೆಯನ್ನು ಒದಗಿಸುತ್ತದೆ.

ಕೊನೆಯ ಹಂತದ ಡಾಂಬರೀಕರಣ ಬಾಕಿ ಇದ್ದು, ಮೂರು ಕಡೆಗಳಲ್ಲಿ ಸಂದು ಬೆಸೆಯುವ ಕೆಲಸ ಬಾಕಿ ಇದೆ. ಸ್ವಲ್ಪ ಮಳೆ ಕಡಿಮೆಯಾದರೆ ಐದಾರು ದಿನಗಳಲ್ಲಿ ಕೆಲಸ ಪೂರ್ತಿಯಾಗಲಿದೆ. ಒಟ್ಟಾರೆ ಜುಲೈ ತಿಂಗಳ ಆರಂಭದಲ್ಲಿ ಸೇತುವೆ ಸೇವೆಗೆ ದಕ್ಕಲಿದೆ.

-ಪೀರ್ ಪಾಷ. ಸೇತುವೆ ಉಸ್ತುವಾರಿ ಎಂಜಿನಿಯರ್.

ಹಲವು ವರ್ಷಗಳ ನಂತರ ಒಂದು ಅದ್ಭುತ ಕನಸು ಇಂದು ನಮ್ಮೆದುರಿಗೆ ನನಸಾಗಿ ನಿಂತಿರುವುದು ಅತ್ಯಂತ ಸಂತಸದ ವಿಷಯವಾಗಿದೆ. ವಿದ್ಯಾರ್ಥಿ ಜೀವನದ ಬಹುಪಾಲು ದಿನಗಳನ್ನು ಹಾಸ್ಟೆಲ್ ನಲ್ಲಿಯೇ ಕಳೆಯುತ್ತಿದ್ದ ನಮಗೆ ಊರಿಗೆ ಬರುವುದು ಒಂದು ಸಾಹಸದ ವಿಷಯವಾಗಿತ್ತು ಆದರೆ ಇನ್ನುಮುಂದೆ ಬೇಕೆನಿಸಿದಾಗ ಮನೆಗೆ ಬಂದು ಹೋಗಬಹುದು. ಅದರ ಜೊತೆಗೆ ನಮ್ಮ ಶರಾವತಿ ಹಿನ್ನೀರಿನ ಜನರ ಜೀವನಕ್ಕೆ ಒಂದು ಬೆಳಕಾಗಿ ಈ ಸೇತುವೆಯು ಭಾಂಧವ್ಯದ ಕೊಂಡಿಯನ್ನು ಹೊರ ಜಗತ್ತಿನೊಂದಿಗೆ ಬೆಸೆಯುತ್ತದೆ.

-ದೀಕ್ಷಾ ತಿಮ್ಮಪ್ಪ ಕಮಗಾರು, ಎಂಬಿಎ ವಿದ್ಯಾರ್ಥಿನಿ

Read more Articles on