ಕನ್ನಡಪ್ರಭ ವಾರ್ತೆ, ಹನೂರು
ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಐದು ದಿನಗಳ ಕಾಲ ನಡೆಯಲಿರುವ ಮಹಾಶಿವರಾತ್ರಿ ಜಾತ್ರಾ ಮಹೋತ್ಸವಕ್ಕೆ ಪಾದಯಾತ್ರೆಯ ಮೂಲಕ ಹಾಗೂ ವಾಹನಗಳ ಮೂಲಕ ರಾಜ್ಯದ ವಿವಿಧ ಜಿಲ್ಲೆಗಳಿಂದ ಹಾಗೂ ನೆರೆಯ ತಮಿಳುನಾಡು ರಾಜ್ಯದಿಂದ 10 ಲಕ್ಷಕ್ಕೂ ಹೆಚ್ಚು ಭಕ್ತಾದಿಗಳು ಆಗಮಿಸುವ ನಿರೀಕ್ಷೆ ಇರುವುದರಿಂದ ಜಾತ್ರೆಗೂ ಹತ್ತು ದಿನಗಳ ಮುನ್ನವೇ ಸಿದ್ಧತೆಗಳನ್ನು ಕೈಗೊಂಡಿದ್ದಾರೆ.
ಪ್ಲಾಸ್ಟಿಕ್ ನಿಷೇಧ: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆಯ ಮೂಲಕ ಬರುವ ಭಕ್ತಾದಿಗಳಿಗೆ ದಾನಿಗಳು ಪ್ಲಾಸ್ಟಿಕ್ ಬಾಟಲ್ ನೀರು, ಹಣ್ಣು, ಜ್ಯೂಸ್ ವಿತರಣೆ ಮಾಡುತ್ತಿದ್ದಾರೆ. ಪ್ರಸ್ತುತ ಶಿವರಾತ್ರಿ ಜಾತ್ರಾ ಮಹೋತ್ಸವದಿಂದ ತಾಳುಬೆಟ್ಟದಿಂದ ಮಲೆ ಮಹದೇಶ್ವರ ಬೆಟ್ಟದ ವರೆಗೆ ಪ್ಲಾಸ್ಟಿಕ್ ನೀರಿನ ಬಾಟಲ್ ವಿತರಣೆ ಮಾಡುವುದನ್ನು ನಿರ್ಬಂಧ ವಿಧಿಸಲಾಗಿದೆ. ಈಗಾಗಲೇ ತಾಳು ಬೆಟ್ಟದಲ್ಲಿ ತೆರೆದಿರುವ ಚೆಕ್ಪೋಸ್ಟ್ ನಲ್ಲಿ ಪ್ಲಾಸ್ಟಿಕ್ ನೀರಿನ ಬಾಟಲ್ ತರುವ ವಾಹನಗಳನ್ನು ತಡೆಯಲು ಹೆಚ್ಚಿನ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಭಕ್ತಾದಿಗಳು ಸಹ ಪ್ಲಾಸ್ಟಿಕ್ ಬಳಕೆ ಮಾಡದೆ ಪ್ಲಾಸ್ಟಿಕ್ ಮುಕ್ತ ಮಲೆ ಮಹದೇಶ್ವರ ಬೆಟ್ಟವನ್ನು ಮಾಡಲು ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.ಪಾದಯಾತ್ರಿಕರಿಗೆ ಪ್ರತ್ಯೇಕ ಕ್ಯೂ ಲೈನ್:
ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ಕನಕಪುರ ರಾಮನಗರ ಮಂಡ್ಯ ಮೈಸೂರು ಚಾಮರಾಜನಗರ ತಮಿಳುನಾಡಿನಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತಾದಿಗಳು ಪಾದಯಾತ್ರೆಯ ಮೂಲಕ ಶಿವರಾತ್ರಿ ಜಾತ್ರಾ ಮಹೋತ್ಸವಕ್ಕೆ ಆಗಮಿಸುವುದು ವಿಶೇಷ. ಈ ಹಿನ್ನೆಲೆ ಪ್ರಾಧಿಕಾರದ ಕಚೇರಿ ಸಮೀಪದ ಅರಳಿ ಮರದ ಮುಂಭಾಗದಿಂದ ಪ್ರತ್ಯೇಕ ಕ್ಯೂ ಲೈನ್ ನಿರ್ಮಾಣ ಮಾಡಿ ರಾಜಗೋಪುರ ಮುಖ್ಯದ್ವಾರ ಹಾಗೂ 250 ಟಿಕೆಟ್ ಕೌಂಟರ್ ಮೂಲಕ ಉಚಿತ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.ವಿಶ್ರಾಂತಿಗಾಗಿ ನೆರಳಿನ ವ್ಯವಸ್ಥೆ:
ಪಾದಯಾತ್ರೆಯ ಮೂಲಕ ಶ್ರೀ ಕ್ಷೇತ್ರಕ್ಕೆ ಬರುವ ಭಕ್ತಾದಿಗಳು ವಿಶ್ರಾಂತಿ ತೆಗೆದುಕೊಳ್ಳಲು ರಾಜಗೋಪುರದ ಬಲ ಭಾಗದಲ್ಲಿ ನೆರಳಿನ ವ್ಯವಸ್ಥೆ ಕಲ್ಪಿಸಲಾಗಿದೆ.ಈಗಾಗಲೇ ಸ್ವಚ್ಛತಾ ಕಾರ್ಯಗಳು ಪೂರ್ಣಗೊಂಡಿದ್ದು ಶುದ್ಧ ಕುಡಿಯುವ ನೀರು, ನೆರಳಿನ ವ್ಯವಸ್ಥೆ ಕಲ್ಪಿಸಲಾಗಿದೆ. ಇದಲ್ಲದೆ ಮಲೆ ಮಹದೇಶ್ವರ ಸ್ವಾಮಿಯ ದರ್ಶನ ಪಡೆಯಲು ಬರುವ ಭಕ್ತಾದಿಗಳಿಗೂ ಪ್ರತಿ ಗೇಟ್ ನಲ್ಲಿಯೂ ನೆರಳಿನ ವ್ಯವಸ್ಥೆ ಕಲ್ಪಿಸಲಾಗಿದೆ.ತುರ್ತು ಚಿಕಿತ್ಸೆ ಕೇಂದ್ರ ಪ್ರಾರಂಭ:
ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ಬರುವ ಪಾದಯಾತ್ರಿಕರಿಗೆ ರಾಜಗೋಪುರದ ಬಲ ಭಾಗ ನೆರಳಿನ ವ್ಯವಸ್ಥೆ ಕುಡಿಯುವ ನೀರಿನ ಜೊತೆಗೆ ತುರ್ತು ಚಿಕಿತ್ಸಾ ಆರೋಗ್ಯ ಕೇಂದ್ರವನ್ನು ಪ್ರಾರಂಭಿಸಿ ಚಿಕಿತ್ಸೆಯನ್ನು ನೀಡಲು ಕ್ರಮವಹಿಸಲಾಗಿದೆ. ಇದಲ್ಲದೆ ವಿಶೇಷವಾಗಿ ವಿಶ್ರಾಂತಿ ಪಡೆಯುವ ಭಕ್ತಾದಿಗಳಿಗೆ ಪ್ರಾಧಿಕಾರದ ವತಿಯಿಂದ ಬಿಸಿಬೇಳೆ ಬಾತ್ ಹಾಗೂ ಮೊಸರನ್ನ ವಿತರಣೆ ಮಾಡಲು ಕ್ರಮ ವಹಿಸಲಾಗಿದೆ.ಕುಡಿಯುವ ನೀರಿನ ವ್ಯವಸ್ಥೆ:
ಭಕ್ತಾದಿಗಳಿಗೆ ತಾಳು ಬೆಟ್ಟದಿಂದ ಮಲೆ ಮಹದೇಶ್ವರ ಬೆಟ್ಟದವರೆಗೆ 15 ಕಡೆ ಕುಡಿಯುವ ನೀರಿನ ಟ್ಯಾಂಕ್ ಇಟ್ಟು ನೀರು ಪೂರೈಕೆ ಮಾಡಲಾಗುತ್ತಿದೆ. ಮೊಬೈಲ್ ಶೌಚಾಲಯ ನಿರ್ಮಾಣ ಮಾಡಲು ಅರಣ್ಯ ಇಲಾಖೆಯ ಅನುಮತಿಗಾಗಿ ಪತ್ರ ಬರೆಯಲಾಗಿದೆ. ಅನುಮತಿ ಸಿಕ್ಕ ನಂತರ ಆನೆ ತಲೆದಿಂಬ, ರಂಗಸ್ವಾಮಿ ಒಡ್ಡು ಹಾಗೂ ತಾಳಬೆಟ್ಟ ತಿರುವಿನಲ್ಲಿ ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕ ಆರು ಮೊಬೈಲ್ ಶೌಚಾಲಯ ಪ್ರಾರಂಭಿಸಲು ಕ್ರಮ ವಹಿಸಲಾಗಿದೆ.ಡಾರ್ಮೆಟ್ರಿ ರಸ್ತೆಗೆ ಡಾಂಬರೀಕರಣ:
ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ಪ್ರಯುಕ್ತ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಹರಕೆ ಹೊತ್ತ ಭಕ್ತಾದಿಗಳು ಪರ ಮಾಡುವುದು ಸಂಪ್ರದಾಯ. ಅದರಂತೆ ಡಾರ್ಮೆಟ್ರಿ ರಸ್ತೆ ಹದಗೆಟ್ಟಿರುವುದರಿಂದ ಅಭಿವೃದ್ಧಿ ಪಡಿಸಲಾಗುತ್ತಿದೆ ಗುರುವಾರದಿಂದ ಡಾಂಬರೀಕರಣ ಕಾಮಗಾರಿ ಪ್ರಾರಂಭವಾಗಲಿದ್ದು ಪರ ಮಾಡುವ ಭಕ್ತಾದಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ.ಮಲೆ ಮಹದೇಶ್ವರ ಬೆಟ್ಟಕ್ಕೆ ಆಗಮಿಸಿದ ನಂತರ ಕೊಳ್ಳೇಗಾಲ ಚೆಕ್ ಪೋಸ್ಟ್ ನಿಂದ ಜೆಎಸ್ಎಸ್ ಮಠದ ರಸ್ತೆಯ ಮೂಲಕ ಶ್ರೀ ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿ ಪ್ರಗತಿಯಲ್ಲಿ ಇರುವುದರಿಂದ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ರಸ್ತೆಯನ್ನು ಸಮತಟ್ಟು ಮಾಡಿ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಗುವುದು ಜಾತ್ರೆ ಮುಗಿದ ನಂತರ ಸಿಸಿ ರಸ್ತೆ ಕಾಮಗಾರಿ ಮುಂದುವರಿಸಲಾಗುವುದು ಎಂದು ಕಾರ್ಯದರ್ಶಿ ಅವರು ತಿಳಿಸಿದರು.
ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆಯ ಮೂಲಕ ತೆರಳುತ್ತಿದ್ದ ಪಾದಯಾತ್ರಿಕನ ಮೇಲೆ ಕಳೆದ ತಿಂಗಳು ಚಿರತೆ ದಾಳಿ ಮಾಡಿದ ಪರಿಣಾಮ ಭಕ್ತ ಮೃತಪಟ್ಟಿದ್ದ. ಈ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಪ್ರಾಧಿಕಾರದ ವತಿಯಿಂದ ತಾಳುಬೆಟ್ಟದಿಂದ ಮಲೆ ಮಹದೇಶ್ವರ ಬೆಟ್ಟದವರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಜೊತೆಗೆ 50 ಗೃಹ ರಕ್ಷಕ ದಳದ ಸಿಬ್ಬಂದಿನಿಯೋಜನೆ ಮಾಡಲಾಗಿದೆ.ದಸರಾ ಮಾದರಿ ದೀಪಾಲಂಕಾರ:
ನಾಡ ಹಬ್ಬ ದಸರಾ ಮಾದರಿಯಲ್ಲಿಯೇ ಮಹದೇಶ್ವರ ಬೆಟ್ಟದಲ್ಲಿ 5 ದಿನಗಳ ಕಾಲ ನಡೆಯಲಿರುವ ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ಪ್ರಯುಕ್ತ ಮಲೆ ಮಹದೇಶ್ವರ ಬೆಟ್ಟದ ಮಾಸ್ಟರ್ ಪ್ಲಾನ್ ಆವರಣ 108 ಅಡಿ ಮಹದೇಶ್ವರ ಪ್ರತಿಮೆ ಕೊಳ್ಳೇಗಾಲ ಚೆಕ್ ಪೋಸ್ಟ್ ಹಾಗೂ ತಾಳು ಬೆಟ್ಟದಲ್ಲಿ ವಿಶೇಷ ದೀಪಾಲಂಕಾರ ವ್ಯವಸ್ಥೆ ಮಾಡಲು ಕ್ರಮವಹಿಸಲಾಗಿದೆ. ಫೆಬ್ರವರಿ ಎಂಟರಿಂದಲೇ ವಿನೂತನ ಮಾದರಿಯಲ್ಲಿ ದೀಪಾಲಂಕಾರ ಪ್ರಾರಂಭವಾಗಲಿದೆ.