ಲೋಕಕಲ್ಯಾಣಕ್ಕೆ ಬೆನಕೊಂಡಿ ಮನೆತನದಿಂದ ಮಹಾರುದ್ರಯಾಗ

KannadaprabhaNewsNetwork | Published : May 14, 2024 1:02 AM

ಸಾರಾಂಶ

ಮಲೇಬೆನ್ನೂರು-ಕುಂಬಳೂರು ಮಧ್ಯೆ ಇರುವ ವೀರಭದ್ರೇಶ್ವರ ದೇವಾಲಯದಲ್ಲಿ ಹಮ್ಮಿಕೊಂಡ 3 ದಿನದ ಮಹಾರುದ್ರಯಾಗದ ಸಮಾರೋಪದಲ್ಲಿ ಗುರುಗಳು, ಗಣ್ಯರು ಪಾಲ್ಗೊಂಡಿದ್ದರು.

ಕನ್ನಡಪ್ರಭ ವಾರ್ತೆ ಮಲೇಬೆನ್ನೂರು

ಪ್ರಚಾರಕ್ಕೆ ಹೋಮ ಮಾಡದೇ ಸರ್ವರ ಕಲ್ಯಾಣಕ್ಕೆ ಮಹಾರುದ್ರಯಾಗ ಮಾಡುವ ವ್ಯಕ್ತಿಗಳು ವಿರಳ ಎಂದು ಶಿಕಾರಿಪುರ ತಾಲೂಕು ಕಡೆನಂದಿಹಳ್ಳಿ ಮಠದ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

ಮಲೇಬೆನ್ನೂರು-ಕುಂಬಳೂರು ಮಧ್ಯೆ ಇರುವ ವೀರಭದ್ರೇಶ್ವರ ದೇವಾಲಯದಲ್ಲಿ ಹಮ್ಮಿಕೊಂಡ 3 ದಿನದ ಮಹಾರುದ್ರಯಾಗದ ಸಮಾರೋಪದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚಿಸಿ, ಪ್ರಾಚೀನ ಕಾಲದಲ್ಲಿ ಋಷಿಮುನಿಗಳು ಯಜ್ಞ ನಡೆಸಿ, ಭಗವಂತನನ್ನು ಸಾಕ್ಷಾತ್ಕಾರ ಮಾಡಿಕೊಳ್ಳುತ್ತಿದ್ದರು. ದ್ವಾಪಾರ ಯುಗದಲ್ಲಿ ಯಜ್ಞಗಳ ಮೂಲಕ ಪರಮಾತ್ಮನ ಒಲಿಸುವಿಕೆ ಆರಂಭವಾಯಿತು. ಪ್ರಸ್ತುತ ಲೋಕಕಲ್ಯಾಣಕ್ಕೆ ಹಾಗೂ ಸಮೃದ್ಧಿ ಮಳೆ ಬೆಳೆಗೆ ಬೆನಕೊಂಡಿ ಮನೆತನವು ದಾನ ಮಾಡುವುದರೊಂದಿಗೆ ಈ ಮಹಾರುದ್ರಹೋಮ ನಡೆಸಿ ಮಾದರಿಯಾಗಿದೆ ಎಂದು ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿದರು.

ಕೋಡಿಯಾಲ ಹೊಸಪೇಟೆಯ ಬಾಲಯೋಗಿ ಜಗದೀಶ್ವರ ಸ್ವಾಮೀಜಿ ಮಾತನಾಡಿ, ಉತ್ತರ ಕರ್ನಾಟಕದ ಹೋಮವನ್ನು ಮಧ್ಯೆ ಕರ್ನಾಟಕಕ್ಕೆ ತಂದ ಕೀರ್ತಿ ಬೆನಕೊಂಡಿ ಮನೆತನಕ್ಕೆ ಸಲ್ಲುತ್ತದೆ. ಬರೀ ಒಂದು ಸಮುದಾಯಕ್ಕೆ ಮೀಸಲಾದ ಯಜ್ಞವು ವೀರಶೈವರಿಗೆ ಸಾಧ್ಯವಾಗಿದೆ ಎಂದರು. ಉತ್ತರದಲ್ಲಿನ ಗಂಗಾರತಿಯು ಜಾತಿ ರಹಿತ ಕಾರ್ಯವಾಗಲು ಮಧ್ಯೆ ಕರ್ನಾಟಕದಲ್ಲಿ ತುಂಗಾರತಿ ಮಾಡಲಾಗಿದೆ ಎಂದು ತಿಳಿಸಿದರು.

ಮಾಜಿ ಶಾಸಕ ಎಚ್.ಎಸ್.ಶಿವಶಂಕರ್ ಮಾತನಾಡಿ, ಬಡವರ ಉದ್ಧಾರಕ್ಕೆ, ಜನರ ಹಿತಕ್ಕಾಗಿ, ವರುಣನ ಕೃಪೆಗೆ ಯಜ್ಞ ಮಾಡುವ ಕಾರ್ಯ ಸುಲಭದ ಕಾರ್ಯವಲ್ಲ, ನಾನು ಅಂತಸ್ತು, ಅಧಿಕಾರ ಅನುಭವಿಸಿದ್ದೇನೆ. ಅಂಥಹ ಬೆನಕೊಂಡಿ ಮನೆತನದ ಚಿದಾನಂದಪ್ಪನವರಿಗೆ ನನ್ನ ಅಧಿಕಾರ ತ್ಯಾಗ ಮಾಡಿ ರಾಜಕೀಯದ ಶಕ್ತಿ ನೀಡಲು ಸಿದ್ಧನಿದ್ದೇನೆ. ದೇವರನ್ನೇ ಸಂಪರ್ಕಿಸುವ ಸಾಧನವಾಗಿ ಮಧ್ಯೆ ಕರ್ನಾಟಕದಲ್ಲಿ ಈ ಯಜ್ಞವು ಯಶಸ್ವಿಯಾಗಿದೆ ಎಂದರು.

ರಾಕ್ಷಸರನ್ನು ಹೊಗಳುವ ಕಾಲವಿದು, ಹೆಸರು ಹಾಕಿಸಲೆಂದೇ ದಾನ ಮಾಡುವ ಜನರಿದ್ದಾರೆ. ಆದರೆ ಹಣವಂತರು, ಗುಣವಂತರು ಜನಕಲ್ಯಾಣದ ಕಾರ್ಯ ಮಾಡಿದಲ್ಲಿ ಪುಣ್ಯ ಲಭಿಸಲಿದೆ ಎಂದರು.

ಬಿಜೆಪಿ ಲೋಕಸಭಾ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ್ ಮಾತನಾಡಿ, ರುದ್ರಹೋಮದಲ್ಲಿ ಭಾಗವಹಿಸಿದ್ದು, ಇಷ್ಟಾರ್ಥ ನೆರವೇರಿಸಿಕೊಳ್ಳಲು ಪ್ರೇರಣೆಯಾಗಿದೆ ಎಂದರು.

ವೀರಭದ್ರೇಶ್ವರ ಚಾರಿಟಬಲ್ ಟ್ರಸ್ಟ್‌ನ ಅಧ್ಯಕ್ಷ ಬಿ.ಪಂಚಣ್ಣ, ಉಪಾಧ್ಯಕ್ಷ ಬಿ.ಚಿದಾನಂದಪ್ಪ, ನಾಗೇಶಣ್ಣ, ಶಂಭುಲಿಂಗಪ್ಪ, ರುದ್ರೇಶ್ ಹಾಗೂ ಪುರೋಹಿತರಾದ ಶಾಂತಯ್ಯ, ನಾಗರಾಜಯ್ಯ, ದ್ವಾರುಕಾಸ್ವಾಮಿ, ಬೆನಕಯ್ಯಶಾಸ್ತ್ರಿ ಹಾಗೂ ಸಾವಿರಾರು ಭಕ್ತರಿದ್ದರು.

Share this article