ಜಾತಿ ಗಣತಿ ವಿರೋಧ ನಿಲುವಿಗೆ ಮಹಾಸಭಾ ಬದ್ಧ

KannadaprabhaNewsNetwork | Published : Oct 8, 2024 1:15 AM

ಜಾತಿ ಗಣತಿಗೆ ಹಿಂದಿನಿಂದಲೂ ವೀರಶೈವ ಲಿಂಗಾಯತ ಮಹಾಸಭಾ ವಿರೋಧ ಇದೆ. ಈಗಲೂ ಅದೇ ನಿಲುವಿಗೆ ಬದ್ಧ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಅ.ಭಾ.ವೀ.ಲಿಂ.ಮ. ರಾಷ್ಟ್ರೀಯ ಅಧ್ಯಕ್ಷ, ಶಾಸಕ ಡಾ.ಶಿವಶಂಕರಪ್ಪ ಹೇಳಿಕೆ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಜಾತಿ ಗಣತಿಗೆ ಹಿಂದಿನಿಂದಲೂ ವೀರಶೈವ ಲಿಂಗಾಯತ ಮಹಾಸಭಾ ವಿರೋಧ ಇದೆ. ಈಗಲೂ ಅದೇ ನಿಲುವಿಗೆ ಬದ್ಧ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಹೇಳಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿಗಣತಿಗೆ ನಮ್ಮದು ಹಿಂದಿನಿಂದಲೂ ವಿರೋಧ ಇದೆ. ಈಗಲೂ ಅದೇ ನಿಲುವಿಗೆ ಬದ್ಧ. ಸರ್ಕಾರ ಪತನವಾದರೂ ಜಾತಿಗಣತಿ ಮಾಹಿತಿ ಬಹಿರಂಗಪಡಿಸಬೇಕು ಎಂದು ಹಿಂದುಳಿದ ವರ್ಗಗಳ ಮುಖಂಡ, ವಿಧಾನ ಪರಿಷತ್ತು ಸದಸ್ಯ ಬಿ.ಕೆ. ಹರಿಪ್ರಸಾದ್ ಹೇಳಿಕೆಗೆ ಅವರು ಪ್ರತಿಕ್ರಿಯಿಸಿದರು. ಯಾರು ಏನೇ ಹೇಳಿದರೂ ಜಾತಿ ಗಣತಿಗೆ ಮಹಾಸಭಾ ವಿರೋಧ ಇದೆ ಎಂದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೀಡಿರುವಂತಹ ಬೆಂಬಲದ ಹೇಳಿಕೆಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

ಖಾಸಗಿ ಬಸ್ ನಿಲ್ದಾಣದ ಲೋಕಾರ್ಪಣೆ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ ಒಂದು ಕಡೆ ಯಡಿಯೂರಪ್ಪ ಬಣ, ಇನ್ನೊಂದು ಕಡೆ ಯತ್ನಾಳ್ ಬಣ ಎಂದು ಇರುವುದು ಜನರು ನೋಡಿದ್ದಾರೆ. ಕಾಂಗ್ರೆಸ್‌ನಲ್ಲಿ ಅಂತಹದ್ದು ಯಾವುದೂ ಇಲ್ಲ. ನಮ್ಮದು ಶಿಸ್ತಿನ ಪಕ್ಷ ಎಂದರು.

ದಾವಣಗೆರೆಯ ಮಾಜಿ ಸಂಸದ ಸಿದ್ದೇಶ್ವರ ಅವರು ಮಾಜಿ ಸಚಿವ ರವೀಂದ್ರನಾಥ್ ಬಗ್ಗೆ ಏನೇನೋ ಮಾತನಾಡಿದ್ದಾರೆ. ಹಿರಿಯರು ಎಂಬ ಗೌರವವೂ ಇಲ್ಲದಂತೆ ಮಾತನಾಡಿದ್ದಾರೆ. ನಮ್ಮ ಕಾಂಗ್ರೆಸ್‌ನಲ್ಲಿ ಆ ರೀತಿ ಮಾತನಾಡುವುದಿಲ್ಲ ಎಂದರು.

ಬಿಜೆಪಿ ಅವಧಿಯಲ್ಲಿ ಖಾಸಗಿ ಬಸ್ ನಿಲ್ದಾಣದ ವಿನ್ಯಾಸ ಬದಲಿಸಿ, ಅಂದವನ್ನು ಹಾಳು ಮಾಡಿದ್ದಾರೆ. ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಭೈರತಿ ಬಸವರಾಜ್ ಸಾಕಷ್ಟು ದುಡ್ಡು ಹೊಡೆದರು. ಅದಕ್ಕೆ ಇಲ್ಲಿನ ಬಿಜೆಪಿಯ ಸಂಸದರು ಸಹ ಸಹಕಾರ ನೀಡಿದರು. ನಮ್ಮಲ್ಲಿ ಅಂಥದ್ದಕ್ಕೆ ಅವಕಾಶ ಇಲ್ಲ ಎಂದು ಶಾಸಕರು ತಿಳಿಸಿದರು.

- - - -7ಕೆಡಿವಿಜಿ42ಃ: ಡಾ.ಶಾಮನೂರು ಶಿವಶಂಕರಪ್ಪ