ವರ್ಣ, ವರ್ಗರಹಿತ ಸಮಾಜ ಸ್ಥಾಪನೆ ಮಹಾತ್ಮ ಗಾಂಧೀಜಿ ಕನಸು: ಡಾ.ವೀರೇಶ ಬಡಿಗೇರ

KannadaprabhaNewsNetwork |  
Published : Oct 06, 2025, 01:01 AM IST
4ಎಚ್‌ ಪಿಟಿ4- ಕನ್ನಡ ವಿಶ್ವವಿದ್ಯಾಲಯದ ಕ್ರಿಯಾಶಕ್ತಿ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಮಹಾತ್ಮಾ ಗಾಂಧಿ ಜಯಂತಿ ದಿನಾಚರಣೆಯಲ್ಲಿ ಹಸ್ತಪ್ರತಿಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ವೀರೇಶ ಬಡಿಗೇರ ಮಾತನಾಡಿದರು. | Kannada Prabha

ಸಾರಾಂಶ

ವರ್ಣ, ವರ್ಗರಹಿತ ಸಮಾಜ ಸ್ಥಾಪನೆ ಮಹಾತ್ಮ ಗಾಂಧೀಜಿ ಕನಸಾಗಿತ್ತು. ಸ್ವದೇಶಿ ಚಳವಳಿ, ಸ್ವಾವಲಂಬನೆ, ಗೃಹ ಕೈಗಾರಿಕೆಗಳು ಮುಂಚೂಣಿಗೆ ಬರಬೇಕು.

ಹೊಸಪೇಟೆ: ವರ್ಣ, ವರ್ಗರಹಿತ ಸಮಾಜ ಸ್ಥಾಪನೆ ಮಹಾತ್ಮ ಗಾಂಧೀಜಿ ಕನಸಾಗಿತ್ತು. ಸ್ವದೇಶಿ ಚಳವಳಿ, ಸ್ವಾವಲಂಬನೆ, ಗೃಹ ಕೈಗಾರಿಕೆಗಳು ಮುಂಚೂಣಿಗೆ ಬರಬೇಕು. ದುಡಿಯುವ ವರ್ಗಗಳು ಯಾರಿಗೂ ಅಧೀನರಾಗದೇ ದುಡಿದು ಬದುಕುವಂತಾಗಬೇಕು ಎಂದು ಗಾಂಧೀಜಿ ಯಾವಾಗಲೂ ಚಿಂತಿಸುತ್ತಿದ್ದರು ಎಂದು ಹಸ್ತಪ್ರತಿಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ವೀರೇಶ ಬಡಿಗೇರ ತಿಳಿಸಿದರು.

ಕನ್ನಡ ವಿಶ್ವವಿದ್ಯಾಲಯದ ಕ್ರಿಯಾಶಕ್ತಿ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಮಹಾತ್ಮಾ ಗಾಂಧಿ ಜಯಂತಿ ದಿನಾಚರಣೆಯಲ್ಲಿ ಗಾಂಧೀಜಿ- ಸ್ವತಂತ್ರ ಭಾರತದ ಪರಿಕಲ್ಪನೆ ಎಂಬ ವಿಷಯ ಕುರಿತು ಉಪನ್ಯಾಸ ನೀಡಿ ಮಾತನಾಡಿದರು. ಲಾಲ್‌ ಬಹದ್ದೂರ್ ಶಾಸ್ತ್ರಿ ಹಸಿರು ಕ್ರಾಂತಿಯ ಮೂಲಕ "ಜೈ ಜವಾನ್‌ ಜೈ ಕಿಸಾನ್ " ಎಂದು ಹೇಳಿದರೆ, ಗಾಂಧೀಜಿಯವರು ರೈತರೇ ಈ ದೇಶದ ಬೆನ್ನೆಲುಬು ಎನ್ನುತ್ತಾರೆ. ಸಬಲ, ಸ್ವತಂತ್ರ, ಸ್ವಾವಲಂಬಿಗಳಾಗಿ ತಮಗೆ ಬೇಕಾದ ವಸ್ತುಗಳನ್ನು ಭಾರತೀಯರು ತಾವೇ ಉತ್ಪಾದಿಸಿಕೊಳ್ಳಬೇಕು ಎಂಬುದು ಇವರಿಬ್ಬರ ಕನಸಾಗಿತ್ತು ಎಂದರು.ಸತ್ಯವೇ ಗಾಂಧೀಜಿಯವರ ಉಸಿರಾಗಿತ್ತು. ಸತ್ಯವಾದ ನಡವಳಿಕೆ, ಸತ್ಯವಾದ ಬದುಕು, ಸ್ವತಂತ್ರ ಆಲೋಚನೆ, ಅಧೀನರಹಿತ ಬದುಕು ಇವೆಲ್ಲವೂ ಸತ್ಯದ ತಳಹದಿ ಎಂದು ಗಾಂಧೀಜಿಯವರು ನಂಬಿದ್ದರು. ನೇಯುವುದು, ನೂಲುವುದನ್ನು ಭಾರತದ ಆತ್ಮಸಾಕ್ಷಿಯಾಗಿ ಮಾಡುತ್ತೇನೆ ಎಂದು ಗಾಂಧಿ ಹೇಳುತ್ತಿದ್ದರು. ಗಾಂಧಿ, ಶಾಸ್ತ್ರಿ, ಅಂಬೇಡ್ಕರ್ ಅವರಂತಹ ಮಹಾತ್ಮರು ನಮಗೆ ಸ್ವಾತಂತ್ರ, ಬದುಕು, ಸಂವಿಧಾನ, ಹಕ್ಕುಗಳನ್ನು ಕೊಟ್ಟಿದ್ದಾರೆ. ಇಂತಹ ಮಹಾತ್ಮರನ್ನು ಸ್ಮರಿಸಿ ಅವರ ಭಾವಚಿತ್ರಕ್ಕೆ ಹಾರ ಹಾಕುವ ಬದಲು ಅವರ ಜೀವನದ ಮೌಲ್ಯ ಆದರ್ಶಗಳನ್ನು ನಮ್ಮ ಬದುಕಿನ ಜೀವನದ ಭಾಗವಾಗಿ ಅಳವಡಿಸಿಕೊಳ್ಳಬೇಕು ಎಂದರು.

ಎನ್‌ಎಸ್‌ಎಸ್ ಘಟಕದ ಸಂಯೋಜನಾಧಿಕಾರಿ ಡಾ.ಎ.ಶ್ರೀಧರ ಅಧ್ಯಕ್ಷತೆ ಮಾತನಾಡಿ, ಹಿಂದ್ ಸ್ವರಾಜ್ ಮತ್ತು ಮೈ ಎಕ್ಸ್ಪೆರಿಮೆಂಟ್ ವಿತ್‌ಟ್ರೂತ್‌ ಗಾಂಧಿಯವರ ಬಹಳ ಪ್ರಮುಖ ಕೃತಿಗಳಾಗಿವೆ. ಗ್ರಾಮ ಸ್ವರಾಜ್ಯದ ಕಲ್ಪನೆಯೊಂದಿಗೆ ಆಧುನಿಕತೆಗೂ ಪ್ರಾಮುಖ್ಯತೆ ನೀಡಿದ್ದರು. ಆದರೆ ಆಧುನಿಕತೆ ದಾಸರಾಗಬಾರದು ಎಂಬುದು ಗಾಂಧಿಯವರ ಅಭಿಪ್ರಾಯವಾಗಿತ್ತು ಎಂದರು.

ಗಾಂಧಿ ಭಾವಚಿತ್ರಕ್ಕೆ ಗಣ್ಯರು ಪುಷ್ಪ ಅರ್ಪಿಸಿದರು. ಆರ್.ವಿ. ದೇಶಪಾಂಡೆ, ಉಪಕುಲಸಚಿವ ಬಿ.ಗುರುಬಸಪ್ಪ ನಿರ್ವಹಿಸಿದರು. ಮಾಹಿತಿ ಕೇಂದ್ರದ ಮುಖ್ಯಸ್ಥೆ ಶಕುಂತಲಾ ಚೌಡನಾಯ್ಕ, ಕುಲಪತಿಯವರ ಆಪ್ತ ಕಾರ್ಯದರ್ಶಿ ಎ.ಎಂ. ಕೃಪಾಶಂಕರ್, ಎಂಜಿನಿಯರ್ ಚಂದ್ರಶೇಖರಪ್ಪ, ಡಾ.ಪಿ. ಕೃಷ್ಣಮೂರ್ತಿ, ನಿವೃತ್ತ ಉಪನಿರ್ದೇಶಕಿ ಡಾ.ಡಿ. ಮೀನಾಕ್ಷಿ, ವಿದ್ಯಾರ್ಥಿ, ಸಿಬ್ಬಂದಿ ಮತ್ತಿತರರಿದ್ದರು.

ಎನ್‌ಎಸ್‌ಎಸ್ ಘಟಕದ ಸಂಯೋಜನಾಧಿಕಾರಿ ಡಾ.ಎ.ಶ್ರೀಧರ ನೇತೃತ್ವದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ವಿಶ್ವವಿದ್ಯಾಲಯದ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೀದಿ ನಾಟಕದ ಮೂಲಕ ಹೆಲ್ಮೆಟ್‌ ಪ್ರಾಮುಖ್ಯತೆಯ ಮನವರಿಕೆ
ಸಮಾಜಕ್ಕೆ ನಿವೃತ್ತರ ಮಾರ್ಗದರ್ಶನ ಅಗತ್ಯ: ಬಸವರಾಜು