ಪುತ್ತೂರು: ಮನುಕುಲಕ್ಕೆ ಮೌಲ್ಯಯುತವಾದ ತತ್ವ ಸಿದ್ಧಾಂತಗಳ ಮೂಲಕ ಸಹಬಾಳ್ವೆಗೆ ಒತ್ತು ನೀಡುವ ಮೂಲಕ ಸಮಾಜದ ಉನ್ನತಿಗೆ ಶ್ರಮಿಸಿದ ಶಕ್ತಿ ಭಗವಾನ್ ಮಹಾವೀರ ಎಂದು ಪುತ್ತೂರು ತಹಸೀಲ್ದಾರ್ ಎಸ್.ಬಿ.ಕೂಡಲಗಿ ಅಭಿಪ್ರಾಯಪಟ್ಟರು.ಪುತ್ತೂರು ತಾಲೂಕು ಆಡಳಿತ ಸೌಧದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಸೋಮವಾರ ನಡೆದ ಪುತ್ತೂರು ತಾಲೂಕು ಮಟ್ಟದ ಭಗವಾನ್ ಮಹಾವೀರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪುತ್ತೂರು ಜೈನ್ ಮಿಲನ್ ಅಧ್ಯಕ್ಷ ಸತೀಶ್ ಪಡಿವಾಳ್ ಅವರು ಮಾತನಾಡಿ, ನೀನು ಬದುಕು. ಇತರರನ್ನು ಬದುಕಲು ಬಿಡು ಎಂಬ ಚಿಂತನೆಯ ಜೈನಧರ್ಮದ ತತ್ವ ಜೈನಸಮಾಜದಲ್ಲಿ ಇಂದಿಗೂ ಹಾಸುಹೊಕ್ಕಾಗಿದೆ. ದೇಶದಲ್ಲಿ ಕೇವಲ ಶೇ. 0.09 ರಷ್ಟಿರುವ ಜೈನರು ಅತ್ಯಂತ ಹೆಚ್ಚು ತೆರಿಗೆ ಪಾವತಿಸುವ ಸಮಾಜವಾಗಿದೆ. ಮಹಾವೀರ ದೇವರ ಜನ್ಮದಿನ ಎಂದು ನಾವು ಆಚರಿಸುತ್ತಿರುವ ಈ ಜಯಂತಿ ಕಾರ್ಯಕ್ರಮ 2024 ನೇ ವರ್ಷದ್ದಾಗಿದೆ. ಅಂದಿನಿಂದ ಇಂದಿಗೂ ಅವರ ಉಪದೇಶಗಳನ್ನು ಪಾಲಿಸುತ್ತಾ ಬಂದಿರುವ ಜೈನಸಮಾಜದ ಯೋಚನೆಗಳು ಹಾಗೂ ಚಿಂತನೆಗಳು ಧಾರ್ಮಿಕತೆಯಡಿಯಲ್ಲಿ ಬೆಳದುಕೊಂಡು ಬಂದಿದೆ ಎಂದರು.ಕಾರ್ಯಕ್ರಮದ ವೇದಿಕೆಯಲ್ಲಿ ಡಿವೈಎಸ್ಪಿ ಪ್ರಮೋದ್ ಕುಮಾರ್, ನಗರಸಭಾ ಪೌರಾಯುಕ್ತೆ ವಿದ್ಯಾ ಎಸ್ ಕಾಳೆ, ಕ್ಷೇತ್ರ ಶಿಕ್ಷಣಾಧಿಕಾರಿ ವಿಷ್ಣುಪ್ರಸಾದ್ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಜೈನ್ ಮಿಲನ್ ಪುತ್ತೂರು ಇದರ ಪದಾಧಿಕಾರಿಗಳಾದ ಯಶೋಧರ್ ಜೈನ್, ರಾಜಶೇಖರ್ ಜೈನ್, ವಿ.ಕೆ.ಜೈನ್, ಅಶೋಕ್ ಜೈನ್, ಅಕ್ರಮಸಕ್ರಮ ಸಮಿತಿ ಸದಸ್ಯ ರಾಮಣ್ಣ ಪಿಲಿಂಜ, ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ, ಉಪತಹಸೀಲ್ದಾರ್ ರವಿಕುಮಾರ್, ಸಮಾಜಕಲ್ಯಾಣ ಇಲಾಖೆಯ ಅಧಿಕಾರಿ ಕೃಷ್ಣ, ಕಂದಾಯ ಇಲಾಖೆಯ ಪ್ರಮೋದ್ ಕುಮಾರ್, ಗೋಪಾಲ್ ಭಾಗವಹಿಸಿದ್ದರು. ಕಂದಾಯ ಇಲಾಖೆಯ ದಯಾನಂದ ಡಿ.ಟಿ ಕಾರ್ಯಕ್ರಮ ನಿರೂಪಿಸಿದರು.