ನರಗುಂದ: ಪಂಚ ತತ್ವಗಳ ಮೂಲಕ ಜಗತ್ತಿಗೆ ಆಧ್ಯಾತ್ಮಿಕ ಬೆಳಕನ್ನು ಪಸರಿಸಿದ ಹಾಗೂ ಸತ್ಯ, ಅಹಿಂಸೆ, ಶಾಂತಿ, ಸೌಹಾರ್ದತೆಯ ಸಂದೇಶ ನೀಡಿ ಸಮಾಜಕ್ಕೆ ನೈತಿಕ ಮಾರ್ಗ ತೋರಿಸಿದವರು ಜೈನಧರ್ಮದ 24ನೇ ಮತ್ತು ಕೊನೆಯ ತೀರ್ಥಂಕರ ಭಗವಾನ್ ಮಹಾವೀರರು ಎಂದು ಶಾಂತಲಿಂಗ ಶ್ರೀಗಳು ಹೇಳಿದರು.
ಅವರು ತಾಲೂಕಿನ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದಲ್ಲಿ ಶ್ರೀ ಗುರು ಬ್ರಹ್ಮಾನಂದ ಶಿವಾನುಭವ ಧರ್ಮಸಂಸ್ಥೆ, ಶ್ರೀ ದೊರೆಸ್ವಾಮಿ ಜನಕಲ್ಯಾಣ ಮತ್ತು ಶಿಕ್ಷಣ ಟ್ರಸ್ಟ್ ಆಶ್ರಯದಲ್ಲಿ ಹಮ್ಮಿಕೊಂಡಿದ್ದ 369ನೇ ಮಾಸಿಕ ಶಿವಾನುಭವ ಹಾಗೂ ಮಹಾವೀರರ ಜಯಂತ್ಯುತ್ಸವ ಸಮಾರಂಭದಲ್ಲಿ ಮಾತನಾಡಿ, ಮಹಾವೀರರು ಸಂಸಾರದ ಆಸೆ-ಆಕಾಂಕ್ಷೆಗಳನ್ನು ತೊರೆದು ಅಧ್ಯಾತ್ಮ ಮಾರ್ಗದಲ್ಲಿ ಸಾಗಿದರು. ತಮ್ಮ ಜೀವನದುದ್ದಕ್ಕೂ ಮಾನವಕುಲವನ್ನು ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ಯುವ ಮಾರ್ಗ ತೋರಿಸಿದರು. ಮಹಾವೀರರು 5 ಮುಖ್ಯ ತತ್ವಗಳನ್ನು ನೀಡಿದ್ದರು, ಅವುಗಳನ್ನು ಪಂಚಶೀಲ ತತ್ವಗಳು ಎಂದೂ ಕರೆಯಲಾಗುತ್ತದೆ. ಅವು ಸರ್ವಕಾಲಿಕವಾಗಿವೆ ಎಂದರು.ಡಾ. ವೀರೇಶ ಸತ್ತಿಗೇರಿ ಸನ್ಮಾನ ಸ್ವೀಕರಿಸಿ ಮಾತನಾಡಿ, ನಮ್ಮ ದೇಶ ಯುವಕರಿಂದ ಕೂಡಿದೆ. ಅಂತಹ ಯುವ ಜನತೆ ಆರೋಗ್ಯದ ಕಡೆ ಗಮನ ಹರಿಸುತ್ತಿಲ್ಲ, ಬದಲಾಗಿ ಯುವಕರು ದುಶ್ಚಟಕ್ಕೆ ತುತ್ತಾಗಿ ಶರೀರವನ್ನು ರೋಗಗಳ ತವರೂರನ್ನಾಗಿ ಪರಿವರ್ತಿಸಿಕೊಳ್ಳುತ್ತಿದ್ದಾರೆ. ಆದ್ದರಿಂದ ಯುವಕರು ಇಂತಹ ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಸಚ್ಛಾರಿತ್ರ್ಯವಂತರಾಗಿ ದೇಶದ ಭವಿಷ್ಯ ರೂಪಿಸಬೇಕಾಗಿದೆ ಎಂದು ಹೇಳಿದರು.
ಭಾರತೀಯ ಅಂಚೆ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತರಾದ ಶಿರೋಳದ ಈರಪ್ಪ ಕುಪ್ಪಸ್ತ ಹಾಗೂ ಈರಪ್ಪ ತಿಗಡಿ ಮತ್ತು ಪಿಎಚ್ಡಿ ಪದವಿ ಪಡೆದ ಡಾ. ವೀರೇಶ ಸತ್ತಿಗೇರಿ ಅವರನ್ನು ಶ್ರೀಮಠದಿಂದ ಸತ್ಕರಿಸಲಾಯಿತು.ಮಂಗಳಾ ಪಾಟೀಲ, ಸಾಹಿತಿ ಡಾ. ವಿ.ವಿ. ಹಿರೇಮಠ, ನ್ಯಾಯವಾದಿ ಸುವರ್ಣ ಅಕ್ಕಿ, ತೇಜಸ್ವಿನಿ ಶಿರಿಯಪ್ಪಗೌಡ್ರ, ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಸುಕನ್ಯಾ ಸಾಲಿ, ದಾಕ್ಷಾಯಿಣಿ ಶಿವಪ್ಪಯ್ಯನಮಠ, ಪದ್ಮಾವತಿ ಗಾಣಿಗೇರ, ಭಾವನಾ ಪಾಟೀಲ ಉಪಸ್ಥಿತರಿದ್ದರು.
ಶಿಕ್ಷಕ ಮಹಾಂತೇಶ ಹಿರೇಮಠ ಸ್ವಾಗತಿಸಿದರು. ಪ್ರೊ. ಆರ್.ಕೆ. ಐನಾಪುರ ಕಾರ್ಯಕ್ರಮ ನಿರೂಪಿಸಿದರು.