ಕನ್ನಡಪ್ರಭ ವಾರ್ತೆ ಮಣಿಪಾಲಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಾರ್ಷಿಕ ಪ್ರಮುಖ ಕಾರ್ಯಕ್ರಮವಾದ ಮಣಿಪಾಲ ಉದ್ಯಮಶೀಲತಾ ಶೃಂಗಸಭೆಯ 7ನೇ ಆವೃತ್ತಿಗೆ ಶನಿವಾರ ಕುಲಸಚಿವ ಡಾ. ಪಿ.ಗಿರಿಧರ್ ಕಿಣಿ ಚಾಲನೆ ನೀಡಿದರು.ನಂತರ ಅವರು ಉದ್ಯಮಶೀಲತೆಯ ಉತ್ತೇಜನಕ್ಕಾಗಿ ಮಾಹೆಯು ಒದಗಿಸುವ ಬೆಂಬಲ ಮತ್ತು ಸೌಲಭ್ಯಗಳನ್ನು ವಿಸ್ತೃತವಾಗಿ ತಿಳಿಸಿದರು. ಮಣಿಪಾಲದ ಉದಾಹರಣೆ ಮತ್ತು ಅದರ ಸಂಸ್ಥಾಪಕ ಡಾ. ಟಿಎಂಎ ಪೈ ಅವರ ದೃಷ್ಟಿಕೋನವನ್ನು ಉಲ್ಲೇಖಿಸುವ ಮೂಲಕ ಉದ್ಯಮಶೀಲತೆಯ ಮಹತ್ವವನ್ನು ಒತ್ತಿ ಹೇಳಿದರು.ಎಂಐಟಿ ಮಣಿಪಾಲದ ನಿರ್ದೇಶಕ ಕಮಾಂಡರ್ (ಡಾ.) ಅನಿಲ್ ರಾಣಾ, ಮಾಹೆಯ ಯೋಜನೆ ಮತ್ತು ಮೇಲ್ವಿಚಾರಣೆಯ ನಿರ್ದೇಶಕ ಡಾ. ರವಿರಾಜ ಎನ್.ಎಸ್., ಮಾಹೆಯ ಕಾರ್ಪೊರೇಟ್ ಸಂಬಂಧಗಳ ನಿರ್ದೇಶಕ ಡಾ. ಹರೀಶ್ ಕುಮಾರ್ ಎಸ್., ಮಣಿಪಾಲ್ ಡಾಟ್ ನೆಟ್ ಮುಖ್ಯ ತಂತ್ರಜ್ಞಾನ ಅಧಿಕಾರಿ ಡಾ. ಪ್ರಶಾಂತ್ ಭಟ್, ಶೃಂಗಸಭೆಯ ಸಂಚಾಲಕ ಹಾಗೂ ಎಂಯುಟಿಬಿಐ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಸಂತೋಷ ರಾವ್ ಸಮಾರಂಭದಲ್ಲಿ ಉಪಸ್ಥಿತರಿದ್ದರು.ಈ ಶೃಂಗಸಭೆಯನ್ನು ಮಣಿಪಾಲ್ ಇನ್ಕ್ಯುಬೇಟರ್ಗಳು, ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ), ಮಾಹೆಯ ವಿವಿಧ ಆವಿಷ್ಕಾರ ಮತ್ತು ಉದ್ಯಮಶೀಲತೆಯ ಪೋಷಕ ಘಟಕಗಳು ಜಂಟಿಯಾಗಿ ಆಯೋಜಿಸಿದ್ದು, ಎಂಐಟಿ ವಾಣಿಜ್ಯೋದ್ಯಮ ಸೆಲ್ (ಇ-ಸೆಲ್) ಕಾರ್ಯಗತಗೊಳಿಸಿದೆ.ಫೆ.10ರಿಂದ 13ರ ವರೆಗೆ ಹಲವಾರು ಕಾರ್ಯಾಗಾರಗಳು ಮತ್ತು ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿದೆ. ಶೃಂಗಸಭೆಯನ್ನು ಫೆ.14ರಂದು ಮಾಹೆಯ ಸಹ ಕುಲಾಧಿಪತಿಗಳಾದ ಡಾ.ಎಚ್.ಎಸ್. ಬಲ್ಲಾಳ್ ಉದ್ಘಾಟಿಸಲಿದ್ದು, ಬೋಟ್ ಸಂಸ್ಥೆಯ ಸಹ-ಸಂಸ್ಥಾಪಕ ಅಮನ್ ಗುಪ್ತಾ ದಿಕ್ಸೂಚಿ ಭಾಷಣವನ್ನು ಮಾಡಲಿದ್ದಾರೆ.ಫೆ.15ರಂದು ಎಂಬಿಎ ಚಾಯ್ ವಾಲಾ ಸಂಸ್ಥಾಪಕ ಪ್ರಫುಲ್ ಬಿಲ್ಲೋರ್ ಅವರೊಂದಿಗೆ ‘ಚಾಯ್ ಪೆ ಚರ್ಚಾ’ ನಡೆಯಲಿದೆ. 16ರಂದು ಆವಿಷ್ಕಾರ ಮೇಳದೊಂದಿಗೆ ಶೃಂಗಸಭೆ ಸಮಾರೋಪಗೊಳ್ಳಲಿದೆ. ಈ ಶೃಂಗಸಭೆಯಲ್ಲಿ ಸಂಶೋಧಕರ ಮತ್ತು ಸ್ಟಾರ್ಟಪ್ಗಳ 100ಕ್ಕೂ ಹೆಚ್ಚು ಆವಿಷ್ಕಾರಗಳು ಮತ್ತು ಉತ್ಪನ್ನಗಳನ್ನು ಪ್ರದರ್ಶಿಸಲಾಗುವುದು.