ಕುಸಿದ ಮೆಕ್ಕೆಜೋಳ ಬೆಲೆ, ಆರಂಭವಾಗದ ಖರೀದಿ ಕೇಂದ್ರ

KannadaprabhaNewsNetwork |  
Published : Nov 10, 2025, 01:45 AM IST
ಪೋಟೊ ಕ್ಯಾಪ್ಸನ್:ಡಂಬಳ ಹೋಬಳಿಯ ಕದಾಂಪುರ ಗ್ರಾಮಸ್ಥರಿಗೆ ಕಣ ಇಲ್ಲದೆ ಇರುವ ಕಾರಣ ಮುಖ್ಯ ರಸ್ತೆಯಲ್ಲಿಯೆ ಗೋವಿನ ಜೋಳ ರೈತರು  ಹಾಕಿ ಒಕ್ಕಲಿಮಾಡುತ್ತಿರುವುದು. | Kannada Prabha

ಸಾರಾಂಶ

ಕೇಂದ್ರ ಸರ್ಕಾರ ಪ್ರಸಕ್ತ ವರ್ಷ ಬೆಂಬಲ ಬೆಲೆಯಲ್ಲಿ ಕ್ವಿಂಟಲ್‌ ಮೆಕ್ಕೆಜೋಳಕ್ಕೆ ₹2400 ಘೋಷಣೆ ಮಾಡಿದೆ. ಇಷ್ಟು ದರ ಮಾರುಕಟ್ಟೆಯಲ್ಲಿ ಸಿಕ್ಕರೆ ರೈತರ ಸಂತಸಕ್ಕೆ ಪಾರವೇ ಇರುವುದಿಲ್ಲ.

ರಿಯಾಜಅಹ್ಮದ ದೊಡ್ಡಮನಿ

ಡಂಬಳ: ಈ ಬಾರಿ ಮೆಕ್ಕೆಜೋಳ ಬೆಲೆ ಪಾತಾಳಕ್ಕೆ ಕುಸಿದಿದ್ದು, ಬೆಳೆಗಾರರು ಚಿಂತೆಗೀಡಾಗಿದ್ದಾರೆ. ಇನ್ನೊಂದೆಡೆ ಸರ್ಕಾರ ಬೆಂಬಲ ಬೆಲೆಯಡಿ ಖರೀದಿ ಕೇಂದ್ರ ಪ್ರಾರಂಭಿಸದಿರುವುದು ಅನ್ನದಾತರನ್ನು ಕಂಗಾಲಾಗುವಂತೆ ಮಾಡಿದೆ.

ಕೇಂದ್ರ ಸರ್ಕಾರ ಪ್ರಸಕ್ತ ವರ್ಷ ಬೆಂಬಲ ಬೆಲೆಯಲ್ಲಿ ಕ್ವಿಂಟಲ್‌ ಮೆಕ್ಕೆಜೋಳಕ್ಕೆ ₹2400 ಘೋಷಣೆ ಮಾಡಿದೆ. ಇಷ್ಟು ದರ ಮಾರುಕಟ್ಟೆಯಲ್ಲಿ ಸಿಕ್ಕರೆ ರೈತರ ಸಂತಸಕ್ಕೆ ಪಾರವೇ ಇರುವುದಿಲ್ಲ. ಆದರೆ, ಮಾರುಕಟ್ಟೆಯಲ್ಲಿ ಆವಕ ಹೆಚ್ಚಳವಾಗಿದೆ ಎನ್ನುವ ಕಾರಣ ಮುಂದೆ ಮಾಡಿ, ಮಧ್ಯವರ್ತಿಗಳು ಹಾಗೂ ದಲ್ಲಾಳಿಗಳು ಮೆಕ್ಕೆಜೋಳ ಬೆಲೆ ಪಾತಾಳಕ್ಕೆ ಇಳಿಸಿದ್ದಾರೆ.

ಗದಗ, ಮುಂಡರಗಿ, ಶಿರಹಟ್ಟಿ, ನರಗುಂದ ಮಾರುಕಟ್ಟೆಯಲ್ಲಿ ಲಕ್ಷಾಂತರ ಕ್ವಿಂಟಲ್‌ಗೂ ಅಧಿಕ ಮೆಕ್ಕೆಜೋಳ ಆವಕವಾಗಿದೆ. ಇದರಿಂದ ಮಾರುಕಟ್ಟೆಯಲ್ಲಿ ಕ್ವಿಂಟಲ್‌ಗೆ ಮೆಕ್ಕೆಜೋಳ ₹2400 ಇದ್ದ ಬೆಲೆ ದಿಢೀರನೆ ₹1700ಕ್ಕೆ ಕುಸಿದಿದೆ. ಇಷ್ಟು ಕಡಿಮೆ ದರಕ್ಕೆ ಮಾರಿದರೆ ಮಾಡಿದ ಖರ್ಚು ಸಹ ಬರದಂತಾಗಿ, ರೈತರು ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಾರೆ.

ಮಾರಾಟಕ್ಕೆ ಹರಸಾಹಸ: ಇನ್ನು ಕೆಲವು ರೈತರು ಕಡಿಮೆ ಬೆಲೆಗೆ ಮಾರುಕಟ್ಟೆಯಲ್ಲಿ ಮೆಕ್ಕೆಜೋಳ ಮಾರುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಮೆಕ್ಕೆಜೋಳ ಮಾರಾಟ ಮಾಡಲು ರೈತರು ಹರಸಾಹಸ ಪಡುವ ಸ್ಥಿತಿ ನಿರ್ಮಾಣವಾಗಿದೆ. ದಲ್ಲಾಳಿ ಅಂಗಡಿಯಲ್ಲಿ ಮೆಕ್ಕೆಜೋಳ ಮಾರಾಟ ಮಾಡಲು ಸರದಿಯಲ್ಲಿ ಹಗಲು-ರಾತ್ರಿ ನಿಲ್ಲಬೇಕು. ಮೆಕ್ಕೆಜೋಳ ಹೊತ್ತು ತಂದ ಟ್ರ್ಯಾಕ್ಟರ್‌ನಲ್ಲಿಯೇ ಮಲಗಿ ಉತ್ಪನ್ನವನ್ನು ಕಾಯಬೇಕು. ಅಂತಹ ದುಸ್ಥಿತಿ ರೈತರದ್ದಾಗಿದೆ. ಇದಕ್ಕಾಗಿ ರೈತರು ಟ್ರ್ಯಾಕ್ಟರ್ ಬಾಡಿಗೆ ಹೆಚ್ಚುವರಿಯಾಗಿ ಕೊಡಬೇಕಾಗುತ್ತದೆ. ರೈತರ ಸ್ಥಿತಿ ಹೇಳತೀರದಾಗಿದೆ.

ಸರ್ಕಾರಗಳ ನಿರ್ಲಕ್ಷ್ಯ: ಸಂಸದರು ಮತ್ತು ವಿಧಾನಸಭೆ ಸದಸ್ಯರು ರೈತರ ಹಿತ ಕಾಪಾಡುವಲ್ಲಿ ಸಂಪೂರ್ಣ ವಿಫಲವಾದ ಹಿನ್ನೆಲೆಯಲ್ಲಿ ರೈತರು ತೊಂದರೆಯಲ್ಲಿ ಸಿಲುಕಿಕೊಳ್ಳುವಂತಾಗಿದೆ. ಮಾರುಕಟ್ಟೆಯಲ್ಲಿ ಬೆಂಬಲ ಬೆಲೆಗಿಂತಲೂ ಕಡಿಮೆ ದರಕ್ಕೆ ಕುಸಿತವಾದ ತಕ್ಷಣ ಬೆಂಬಲ ಬೆಲೆ ಖರೀದಿ ಕೇಂದ್ರ ತೆರೆಯಬೇಕೆಂಬ ನಿಯಮವಿದೆ. ಆದರೆ, ಮಾರುಕಟ್ಟೆಯಲ್ಲಿ ಮೆಕ್ಕೆಜೋಳ ದರ ಕುಸಿತವಾಗಿದೆ. ಆದರೂ ಇದುವರೆಗೂ ಬೆಂಬಲ ಬೆಲೆ ಕೇಂದ್ರ ತೆರೆಯದೇ ಇರುವುದು ರೈತರ ಕೆಂಗಣ್ಣಿಗೆ ಕಾರಣವಾಗಿದೆ.ಉಗ್ರ ಹೋರಾಟ: ಎಥೆನಾಲ್ ತಯಾರಿಸುವ ಸಕ್ಕರೆ ಕಾರ್ಖಾನೆಗಳು ರೈತರಿಂದ ನೇರವಾಗಿ ಮೆಕ್ಕೆಜೋಳ ಖರೀದಿಸಲು ಮುಂದಾಗಬೇಕು. ಮೆಕ್ಕೆಜೋಳ ದರ ಕುಸಿತದಿಂದ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ತಕ್ಷಣ ಕೇಂದ್ರ ಮತ್ತು ರಾಜ್ಯ ಸರ್ಕಾರ, ಸಚಿವರು, ಶಾಸಕರು ಬೆಂಬಲ ಬೆಲೆ ಕೇಂದ್ರ ತೆರೆಯುವ ಕ್ರಮಕ್ಕೆ ಮುಂದಾಗಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಅನಿವಾರ್ಯ ಎಂದು ಜಿಲ್ಲಾ‌ ರೈತ ಸಂಘದ ಅಧ್ಯಕ್ಷ ಶಂಕರಗೌಡ ಜಾಯನಗೌಡರ ತಿಳಿಸಿದರು.

ಖರೀದಿ ಕೇಂದ್ರ: ಸರ್ಕಾರದಿಂದ ಸೂರ್ಯಕಾಂತಿ, ಶೇಗಾ ಬೆಂಬಲ ಬೆಲೆಯಡಿ ಖರೀದಿಗೆ ಆದೇಶವಾಗಿದೆ. ಅದೇ ರೀತಿ ಗೋವಿನಜೋಳ ಖರೀದಿಸಲು ಸರ್ಕಾರದ ಆದೇಶ ಬಂದ ತಕ್ಷಣ ಬೆಂಬಲ ಬೆಲೆಯಡಿ ಖರೀದಿ ಕೇಂದ್ರ ಆರಂಭಿಸಲಾಗುವುದು ಎಂದು ಮುಂಡರಗಿ ಎಪಿಎಂಸಿ ಕಾರ್ಯದರ್ಶಿ ರಾಘವೇಂದ್ರ ಜೆ. ತಿಳಿಸಿದರು.

PREV

Recommended Stories

ಇಂದು ಹಂಡ್ಲಿ ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ
ಯಯೂದಿ ತತ್ವಗಳಿಗೂ, ಗೀತೆಗೂ ಸಾಮ್ಯತೆ ಇದೆ: ಪ್ರೊ.ಆ್ಯಲನ್‌