ವಿಶೇಷ ವರದಿ
ಮಳೆ ಶುರುವಾಗುತ್ತಿದ್ದು ಎಲ್ಲೆಂದರಲ್ಲಿ ಕಸ ಸಂಗ್ರಹಣೆಯಿಂದ ಸೊಳ್ಳೆ-ಕ್ರಿಮಿಕೀಟ ಉತ್ಪತ್ತಿಯಾಗಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಹಾಗೂ ನಗರದ ಸೌಂದರ್ಯೀಕರಣ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಸಾರ್ವಜನಿಕವಾಗಿ ಸಂಗ್ರಹಣೆಯಾಗುತ್ತಿರುವ ಕಸದ ನಿರ್ಮೂಲನೆಗೆ ಕಸರತ್ತು ನಡೆಸಿದೆ.
ಧಾರವಾಡದಲ್ಲಿ 100ಕ್ಕೂ ಹೆಚ್ಚು ಸಾರ್ವಜನಿಕ ಪ್ರದೇಶದಲ್ಲಿ ವಿವೇಚನಾ ರಹಿತ ಜನರು ನಿತ್ಯ ಕಸ ಎಸೆಯುತ್ತಿದ್ದಾರೆ. ಬೇಸರದ ಸಂಗತಿ ಏನೆಂದರೆ, ಹೆಚ್ಚಿನ ತಿಳಿವಳಿಕೆ, ಶಿಕ್ಷಣ ಇರುವ ಪ್ರದೇಶಗಳಲ್ಲಿಯೇ ಕಸ ಎಸೆಯುತ್ತಿರುವುದು ಪಾಲಿಕೆಗೆ ನುಂಗಲಾರದ ತುತ್ತಾಗಿದೆ. ಸಾಧನಕೇರಿ, ನಾರಾಯಣಪುರ, ಸಪ್ತಾಪೂರ, ಡಯಟ್ ರಸ್ತೆ, ಕಲ್ಯಾಣ್ ನಗರ, ರಪಾಟಿ ಕಲ್ಯಾಣ ಮಂಟಪದ ಎದುರು, ಕಾಲೇಜು ರಸ್ತೆ, ಮಾಳಮಡ್ಡಿ ಹಾಗೂ ನಗರದ ಹೊರ ವಲಯದ ಪ್ರದೇಶಗಳಲ್ಲಿ ರಸ್ತೆ ಬದಿಯೇ ಕಸ ಎಸೆಯುತ್ತಿದ್ದಾರೆ.ಯಾವ ರೀತಿ ಪತ್ತೆ:
ಕಸ ನಿರ್ವಹಣೆ ಬಗ್ಗೆ ಏನೆಲ್ಲಾ ಜಾಗೃತಿ ಕಾರ್ಯಕ್ರಮ, ದಂಡ ವಿಧಿಸುವುದು ಸೇರಿದಂತೆ ಹತ್ತಾರು ಕ್ರಮಗಳ ಮಧ್ಯೆಯೂ ಕೆಲವರು ಬೇಕಾಬಿಟ್ಟಿ ಕಸ ಎಸೆಯುತ್ತಿರುವುದು ನಗರದ ಸೌಂದರ್ಯೀಕರಣಕ್ಕೆ ಅಡ್ಡಿಯಾಗಿದೆ. ಜತೆಗೆ ಸಾಂಕ್ರಾಮಿಕ ರೋಗಗಳಿಗೂ ಆಹ್ವಾನ ನೀಡುತ್ತಿದೆ. ಈ ಹಿನ್ನೆಲೆಯಲ್ಲಿ ಪಾಲಿಕೆಯು ಇದೀಗ ದಿಟ್ಟ ಕ್ರಮ ತೆಗೆದುಕೊಂಡಿದ್ದು, ಕಸ ಎಸೆಯುವವರಿಗೆ ದಂಡದ ಜೊತೆಗೆ ಕಸದ ಜಾಗವನ್ನು ಸ್ವಚ್ಛಗೊಳಿಸಿ ಇನ್ಮುಂದೆ ಕಸ ಎಸೆಯದಂತೆ ಎಚ್ಚರಿಕೆ ಕ್ರಮಗಳನ್ನು ನೀಡುತ್ತಿದೆ ಎಂದು ಪಾಲಿಕೆ ವಲಯ ಕಚೇರಿ 3ರ ಹಿರಿಯ ಆರೋಗ್ಯಾಧಿಕಾರಿ ಫಕ್ಕೀರೇಶ ಬೂದಿಹಾಳ ಮಾಹಿತಿ ನೀಡಿದರು.
ನಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛವಾಗಿಡುವುದು ಬರೀ ಪಾಲಿಕೆ ಮಾತ್ರವಲ್ಲದೇ ನಾಗರಿಕರು ಮತ್ತು ನಾಗರಿಕ ಸಂಸ್ಥೆಗಳ ಜವಾಬ್ದಾರಿಯೂ ಇದೆ. ಸಾರ್ವಜನಿಕರ ಸಹಕಾರವಿಲ್ಲದೆ ಯಾವುದೇ ಸ್ವಚ್ಛತಾ ಅಭಿಯಾನ ಯಶಸ್ವಿಯಾಗಲು ಸಾಧ್ಯವಿಲ್ಲ. ಅಕ್ರಮವಾಗಿ ತ್ಯಾಜ್ಯ ಸುರಿಯುವವರ ಮೇಲೆ ಭಾರೀ ದಂಡ ವಿಧಿಸುತ್ತೇವೆ. ಧಾರವಾಡವು ವಿದ್ಯಾವಂತ ಮತ್ತು ಪ್ರಬುದ್ಧ ನಾಗರಿಕರಿಗೆ ಹೆಸರುವಾಸಿ. ಹೀಗಾಗಿ ಜವಾಬ್ದಾರಿಯುತವಾಗಿ ವರ್ತಿಸುತ್ತಾರೆ ಎಂದು ನಿರೀಕ್ಷಿಸುತ್ತೇವೆ.