ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಪಂ ಮಾಜಿ ಸದಸ್ಯ ನರಸಿಂಹರಾಜು, ಆಂಜನೇಯಗೆ ಸೂಕ್ತ ಸ್ಥಾನ ಕಲ್ಪಿಸುವುದರ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಕಳೆದ 45 ವರ್ಷಗಳಿಂದಲೂ ದುಡಿದ ನಿಷ್ಠಾವಂತ ನಾಯಕನಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಮಾದಿಗ ಸಮುದಾಯ ಐವತ್ತು ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. ಇಂತಹ ಸಮುದಾಯ ಅನಾದಿ ಕಾಲದಿಂದಲೂ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿಕೊಂಡು ಬಂದಿದೆ. ಈಗಿನ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಆಗಿರುವ ಡಾ.ಜಿ ಪರಮೇಶ್ವರ್ ಸೋತಾಗ ಎಂಎಲ್ಸಿ ಮಾಡಿ ಸಚಿವ ಮಾಡಿರುವ ನಿದರ್ಶನಗಳು ಇವೆ. ಅದೇ ರೀತಿ ಮಲ್ಲಿಕಾರ್ಜುನ ಖರ್ಗೆ ಅವರನ್ನೂ ಲೋಕಸಭೆಯಲ್ಲಿ ಸೋತಾಗ ರಾಜ್ಯಸಭಾ ಸದಸ್ಯರನ್ನಾಗಿ ಮಾಡಿದೆ. ಆರ್.ಬಿ.ತಿಮ್ಮಾಪುರ ಸೋತಾಗಲೂ ಎಂಎಲ್ಸಿ ಮಾಡಿ ಸಚಿವ ಮಾಡಲಾಗಿದೆ. ಆದ್ದರಿಂದ ಇಡೀ ರಾಜ್ಯದಲ್ಲಿ ಎಚ್.ಆಂಜನೇಯ ಮಾದಿಗ ಸಮುದಾಯದ ಪ್ರಶ್ನಾತೀತ ನಾಯಕರಾಗಿದ್ದಾರೆ ಎಂದು ಹೇಳಿದರು.ಮಧ್ಯ ಕರ್ನಾಟಕ ಭಾಗದಲ್ಲಿ ಮಾದಿಗ ಸಮುದಾಯ ಪ್ರತಿನಿಧಿಸುವ ಮಾಸ್ ಲೀಡರ್ ಆಗಿದ್ದಾರೆ. ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿಕೊಂಡು ಸಚಿವ ಸ್ಥಾನ ನೀಡಬೇಕು. ಅದೇ ರೀತಿ ಮಾದಿಗ ಸಮುದಾಯದ ಮೂವರಿಗೆ ಮಂತ್ರಿಗಿರಿ ಕೊಡಬೇಕು. ಈ ಕುರಿತು ಸಿದ್ದರಾಮಯ್ಯ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೈಕಮಾಂಡ್ ಗಮನಕ್ಕೆ ತಂದು ಮಾದಿಗ ಸಮುದಾಯಕ್ಕೆ ನ್ಯಾಯ ಕೊಡಿಸಬೇಕು ಎಂದರು.
ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಎಚ್.ಸಮರ್ಥರಾಯ್ ಮಾತನಾಡಿ, ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಿರುವವರೆಗೂ ಮಾದಿಗರಿಗೆ ರಾಜಕೀಯವಾಗಿ ನ್ಯಾಯ ಸಿಗುವುದಿಲ್ಲ. ಒಳಮೀಸಲಾತಿಯಲ್ಲಿ ಅನ್ಯಾಯ ಆಗಿದ್ದು ಇವರಿಂದಲೇ ಎಂದು ಕಿಡಿಕಾರಿದರು.
ಇಂಗಳದಾಳ್ ರಘು ಮಾತನಾಡಿ, ಮಾದಿಗ ಸಮುದಾಯಕ್ಕೆ ಕಾಂಗ್ರೆಸ್ ಮನ್ನಣೆ ನೀಡಬೇಕು. ಮಾದಿಗರು ಕಾಂಗ್ರೆಸ್ ಪಕ್ಷಕ್ಕೆ ಮೊದಲಿನಿಂದಲೂ ಬೆಂಬಲಿಸಿಕೊಂಡು ಬಂದಿದ್ದಾರೆ. ಆಂಜನೇಯ ಅವರ ದ್ವನಿ ಅಡಗಿಸುವ ಕೆಲಸ ಆಗಬಾರದು. ಅಂತಹ ಮಾಸ್ ಲೀಡರ್ ಗೆ ಪಕ್ಷ ಸ್ಥಾನಮಾನ ನೀಡಬೇಕು ಎಂದು ಒತ್ತಾಯಿಸಿದರು.