ಶಿಗ್ಗಾಂವಿ: ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ಪ್ರತಿಯೊಬ್ಬರೂ ಬೂತ್ನಲ್ಲಿ ಕನಿಷ್ಠ ನೂರು ಜನರನ್ನು ಸದಸ್ಯರನ್ನಾಗಿ ಮಾಡಿ ಸಕ್ರೀಯ ಕಾರ್ಯಕರ್ತರಾಗುವ ಮೂಲಕ ಮುಂದಿನ ದಿನಮಾನಗಳಲ್ಲಿ ಪಕ್ಷದಲ್ಲಿ ಮಹತ್ತರ ಜವಾಬ್ದಾರಿ ಹಾಗೂ ಸ್ಥಾನ ಮಾನಗಳನ್ನು ಪಡೆದುಕೊಳ್ಳಬೇಕು ಎಂದು ಕೆಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಗಂಗಾಧರ ಸಾತಣ್ಣವರ ಹೇಳಿದರು.
ಶಿಗ್ಗಾಂವ - ಸವಣೂರ ಉಪಚುನಾವಣೆಯಲ್ಲಿ ಬೂತ್ ಅಧ್ಯಕ್ಷರು, ಶಕ್ತಿ ಕೇಂದ್ರ, ಮಹಾಶಕ್ತಿಕೇಂದ್ರದ ಪ್ರಮುಖರು ಹಾಗೂ ಎಲ್ಲ ಪದಾಧಿಕಾರಿಗಳು ಹಾಲಿ ಹಾಗೂ ಮಾಜಿ ಚುನಾಯಿತ ಪ್ರನಿತಿಧಿಗಳು ಸೇರಿಕೊಂಡ ಪ್ರತಿಯೊಂದು ಬೂತ್ನಲ್ಲಿ ಪಕ್ಷ ಸಂಘಟನೆ ಮಾಡುವ ಮೂಲಕ ಮುಂದಿನ ೨೦ ವರ್ಷಗಳ ಕಾಲ ನಮ್ಮ ಪಕ್ಷದವರೇ ಶಾಸಕರಾಗಿರುವಂತೆ ನೋಡಿಕೊಳ್ಳುವ ಸಂಪೂರ್ಣ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ದಲಿತ ಮುಖಂಡರಾದ ಡಿ.ಎಸ್. ಮಾಳಗಿ ಮಾತನಾಡಿ, ೨೦೦೮ರಿಂದ ಈ ಶಿಗ್ಗಾಂವಿ - ಸವಣೂರ ಕ್ಷೇತ್ರದಲ್ಲಿ ಬಸವರಾಜ ಬೊಮ್ಮಾಯಿ ಅವರು ಆಡಳಿತ ಚುಕ್ಕಾಣೆ ಹಿಡಿದ ಮೇಲೆ ಕ್ಷೇತ್ರವನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸುವ ಮೂಲಕ ಹಿಂದುಳಿದ ಕ್ಷೇತ್ರವೆಂಬ ಹಣೆಪಟ್ಟಿಯಿಂದ ಹೊರಗೆ ತಂದ ಕೀರ್ತಿ ನಮ್ಮ ನಾಯಕರಿಗೆ ಸಲ್ಲುತ್ತದೆ ಎಂದರು.ಪುರಸಭೆಯ ಮಾಜಿ ಅಧ್ಯಕ್ಷ ಹಾಗೂ ಸದಸ್ಯ ಸುಭಾಸ ಚವ್ಹಾಣ ಮಾತನಾಡಿ, ಪಕ್ಷದ ಸಂಘಟನೆ ಹಾಗೂ ಎಲ್ಲ ಸ್ಥಳೀಯ ಚುನಾವಣೆಗಳಲ್ಲಿ ಕಾರ್ಯಕರ್ತರನ್ನು ಗೆಲ್ಲಿಸಿ, ಅವರಿಗೆ ಅಧಿಕಾರವನ್ನು ಕೊಡಿಸಿ ಹಾಗೂ ರಾಜ್ಯದ ಪ್ರಮುಖ ಹುದ್ದೆಗಳಾದ ಎಂ.ಎಲ್.ಸಿ, ನಿಗಮ ಮಂಡಳಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ನಿರ್ದೇಶಕರ ಹುದ್ದೆಗಳನ್ನು ಪ್ರಮುಖ ಸಂವಿಧಾನಿಕ ಹುದ್ದೆ, ನಾಮ ನಿರ್ದೇಶನ ಸದಸ್ಯರು ಹುದ್ದೆಗಳನ್ನು ಹೀಗೆ ಹಲವು ಅಧಿಕಾರವನ್ನು ಎಲ್ಲ ವರ್ಗದ ಕಾರ್ಯಕರ್ತರಿಗೆ ಹಾಗೂ ಪಕ್ಷದಲ್ಲಿ ರಾಜ್ಯ ಮಟ್ಟದ ಜವಾಬ್ದಾರಿಗಳನ್ನು ಕೊಡಿಸಿರುವ ಕೀರ್ತಿ ಬಸವರಾಜ ಬೊಮ್ಮಾಯಿ ಅವರಿಗೆ ಸಲ್ಲುತ್ತದೆ.ಕಾರ್ಯಕ್ರಮದಲ್ಲಿ ಪುರಸಭೆಯ ಮಾಜಿ ಅಧ್ಯಕ್ಷ ಶಿವಪ್ರಸಾದ ಸೂರಗಿಮಠ ಮಾತನಾಡಿ, ಶಿಗ್ಗಾಂವಿ - ಸವಣೂರ ಕ್ಷೇತ್ರದ ಜನರ ನಾಡಿಮಿಡಿತಗಳನ್ನು ಅವರು ಅರಿತಿರುವ ಬಸವರಾಜ ಬೊಮ್ಮಾಯಿ ಕ್ಷೇತ್ರದ ಪ್ರತಿ ಹಳ್ಳಿಗಳ ಮನೆ - ಮನೆಯಲ್ಲಿ ಜನರ ಮನೆ - ಮನಗಳಲ್ಲಿ ಅಚ್ಚಳಿಯದೇ ಹಾಗೇ ಮನೆಯ ಮಗನಾಗಿ ಉಳಿದಿದ್ದಾರೆ. ಆದ್ದರಿಂದ ನಾವು ಪಕ್ಷದ ವರಿಷ್ಠರಲ್ಲಿ ಆಗ್ರಹ ಪಡಿಸುವುದೇನೆಂದರೆ, ಉಪಚುನಾವಣೆಯಲ್ಲಿ ಕ್ಷೇತ್ರದ ಸಂಪೂರ್ಣವಾದ ಜವಾಬ್ದಾರಿಯನ್ನು ಬಸವರಾಜ ಬೊಮ್ಮಾಯಿ ಅವರಿಗೆ ನೀಡಬೇಕು, ಆಗ ಮಾತ್ರ ಪಕ್ಷದ ಅಭ್ಯರ್ಥಿ ವಿಜಯ ಸಾಧಿಸಲು ಸಾಧ್ಯ. ಇಲ್ಲದೇ ಹೋದರೆ ಕ್ಷೇತ್ರದ ಮತದಾರರು ಹಾಗೂ ಕಾರ್ಯಕರ್ತರು ಅನಾಥರಾಗುತ್ತಾರೆ. ಅದಕ್ಕೆ ಅವರಿಗೆ ಸಂಪೂರ್ಣವಾದ ಜವಾಬ್ದಾರಿಯನ್ನು ನೀಡಿ ಕಾರ್ಯಕರ್ತರಿಗೆ ನ್ಯಾಯ ಒದಗಿಸುವ ಮೂಲಕ ಕ್ಷೇತ್ರವನ್ನು ಉಳಿಕೊಳ್ಳಬೇಕೆಂದು ಈ ಮೂಲಕ ತಮ್ಮಲ್ಲಿ ಆಗ್ರಹಿಸುತ್ತೇವೆ ಎಂದರು.