ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಡಾ.ಬಿ.ಆರ್. ಅಂಬೇಡ್ಕರ್ ಅವರ ಚಿಂತನೆಗೆಳು ಹಾಗೂ ಬಿಜೆಪಿ ಚಿಂತನೆಗಳು ಮಧ್ಯೆ ಸಾಮ್ಯತೆ ಇದೆ. ಹೀಗಾಗಿ ನಾವು ಬಲಗೊಳ್ಳಬೇಕಾದರೆ ಭಾರತೀಯ ಜನತಾ ಪಕ್ಷವನ್ನು ಬಲಗೊಳಿಸಬೇಕು. ಬಿಜೆಪಿಯಿಂದ ಮಾತ್ರ ದೀನದಲಿತರಿಗೆ ನ್ಯಾಯ ಸಿಗಲು ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಬಿಜೆಪಿ ರಾಜ್ಯ ವಕ್ತಾರ ಚೆಲುವಾದಿ ನಾರಾಯಣಸ್ವಾಮಿ ಹೇಳಿದರು.ನವನಗರದಲ್ಲಿನ ಭಾರತೀಯ ಜನತಾ ಪಕ್ಷದ ಕಾರ್ಯಾಲಯದ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಎಸ್ಸಿ ಮೋರ್ಚಾ ವತಿಯಿಂದ ಹಮ್ಮಿಕೊಂಡ ಬಲವರ್ಧನೆಗಾಗಿ ಭೀಮ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕ ಕಾಂಗ್ರೆಸ್ ಪಕ್ಷ ಅಂಬೇಡ್ಕರ್ ಅವರನ್ನು ಕೇವಲ ವೋಟಿಗಾಗಿ ಬಳಸಿಕೊಂಡಿತು. ಡಾ.ಅಂಬೇಡ್ಕರ್ ಅವರ ಜನ್ಮಸ್ಥಳ, ಶಿಕ್ಷಣ ಪಡೆದ ಸ್ಥಳ, ಪರಿನಿರ್ವಾಣ ಹೊಂದಿದ ಸ್ಥಳ, ಅವರ ದೀಕ್ಷಾಭೂಮಿ ಮುಂತಾದ ಪವಿತ್ರ ಸ್ಥಳಗಳನ್ನು ಪಂಚತಿರ್ಥ ಕ್ಷೇತ್ರಗಳನ್ನಾಗಿ ಮಾಡಿದ್ದು ಬಿಜೆಪಿ ಸರ್ಕಾರ ಎಂದು ಹೇಳಿದರು.ನವೆಂಬರ್ 26ನ್ನು 2010ರಲ್ಲಿ ಆಗಿನ ಗುಜರಾತ್ ಸಿಎಂ ನರೆಂದ್ರ ಮೋದಿ ಪ್ರಥಮ ಬಾರಿಗೆ ಸಂವಿಧಾನ ಸಮ್ಮಾನ ದಿವಸ್ ಎಂದು ಘೋಷಣೆ ಮಾಡಿ ಸಂವಿಧಾನದ ಪ್ರತಿಯನ್ನು ಆನೆಯ ಮೇಲಿಟ್ಟು ಗೌರವ ಯಾತ್ರೆ ಮಾಡಿದರು. ಇಂದು ರಾಜ್ಯದಲ್ಲಿ ಸಿದ್ದರಾಮಯ್ಯ ಅದನ್ನೇ ನಕಲು ಮಾಡುತ್ತಿದ್ದಾರೆ. ಕರ್ನಾಟಕದಲ್ಲೂ ಡಾ.ಬಿ.ಆರ್. ಅಂಬೆಡ್ಕರ್ ಭೇಟಿ ನೀಡಿದ 7 ಜಿಲ್ಲೆಗಳ ಹತ್ತು ಸ್ಥಳಗಳನ್ನು ತಿರ್ಥಕ್ಷೇತ್ರಗಳನ್ನಾಗಿ ಮಾಡುವ ಕನಸು ಭಾರತೀಯ ಜನತಾ ಪಕ್ಷದ್ದಾಗಿದೆ ಎಂದರು.
ಮಾಜಿ ಸಚಿವ ಬಿಜೆಪಿ ಉಪಾಧ್ಯಕ್ಷ ಎಸ್. ಮಹೇಶ್ ಮಾತನಾಡಿ, ಕತ್ತೆ ನಿಂತರೂ ಕಾಂಗ್ರೆಸ್ ಗೆಲ್ಲುತ್ತದೆ ಎಂಬುದು ಈಗ ಸುಳ್ಳಾಗಿದೆ. ಜನ ವಿದ್ಯಾವಂತರಾಗಿದ್ದಾರೆ, ದಲಿತರು ಕಾಂಗ್ರೆಸ್ ಸೇರುವುದು ಆತ್ಮಹತ್ಯೆ ಮಾಡಿಕೊಂಡಂತೆ. ಕಾಂಗ್ರೆಸ್ ಉರಿಯುವ ಮನೆ, ಅಲ್ಲಿ ಹೋದರೆ ಸುಟ್ಟು ಬೂದಿಯಾಗುತ್ತೀರಾ ಎಂದು ಅಂಬೇಡ್ಕರ್ ಅವರೇ ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ. 1949 ರಿಂದ 2015ರವರೆಗೆ ಸಂವಿಧಾನ ಸಮರ್ಪಣೆಯಾದ ದಿನವನ್ನು ಕಾಂಗ್ರೆಸ್ಸಿನವರು ರಾಷ್ಟ್ರೀಯ ಕಾನೂನು ದಿನ ಎಂದು ಕರೆದಿದ್ದರು, ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ತಕ್ಷಣ ರಾಷ್ಟ್ರೀಯ ಕಾನೂನು ದಿನವನ್ನು ಸಂವಿಧಾನ ದಿನ ಎಂದು ಘೋಷಣೆ ಮಾಡಿದರು. ಅಲ್ಲಿಂದ ಸಂವಿಧಾನ ದಿನವಾಗಿ ದೇಶದಲ್ಲಿ ಜಾಗೃತಿ ಅಭಿಯಾನ ನಡೆಯುತ್ತಿದೆ ಎಂದು ತಿಳಿಸಿದರು.ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಕೇಂದ್ರ ಕೌತಲಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಪ್ರಕಾಶ ಕಾಳೆ, ಬಸವರಾಜ ಯಂಕಂಚಿ, ಮಹೇಶ ಕೋತಿಮಾರ, ಗೀತಾ ಕುಗನೂರ, ಡಾ. ಕ್ರಾಂತಿಕಿರಣ, ಡಾ.ಸ್ಪಂದನ ವಿಜಯಪುರ, ಶಿವಾನಂದ ಟವಳಿ ವೇದಿಕೆ ಮೇಲಿದ್ದರು.