- ತರೀಕೆರೆಯಲ್ಲಿ ತಾಲೂಕು ಮಟ್ಟದ ಶಾಲಾ ಪ್ರಾರಂಭೋತ್ಸವ
ಕನ್ನಡಪ್ರಭ ವಾರ್ತೆ, ತರೀಕೆರೆಸರ್ಕಾರದ ಉಚಿತ ಸೌಲಭ್ಯಗಳನ್ನು ಮಕ್ಕಳು ಸದುಪಯೋಗ ಪಡಿಸಿಕೊಂಡು ಉತ್ತಮ ಶಿಕ್ಷಣವನ್ನು ಪಡೆದುಕೊಳ್ಳಬೇಕೆಂದು ಪುರಸಭೆ ಉಪಾಧ್ಯಕ್ಷೆ ಪಾರ್ವತಮ್ಮ ತಿಳಿಸಿದರು.
ಶುಕ್ರವಾರ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತುದಿಪೇಟೆಯಿಂದ ಶಾಲೆಯಲ್ಲಿ ನಡೆದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಕ್ಕಳಿಗೆ ಉಚಿತ ಸಮವಸ್ತ್ರ ಮತ್ತು ಪಠ್ಯ ಪುಸ್ತಕ ವಿತರಿಸಿ ಮಾತ ನಾಡಿದರು. ಸರ್ಕಾರದ ಉಚಿತ ಸೌಲಭ್ಯಗಳನ್ನು ಮಕ್ಕಳು ಸದುಪಯೋಗ ಪಡಿಸಿಕೊಂಡು ಉತ್ತಮ ಶಿಕ್ಷಣ ಪಡೆದು ಕೊಳ್ಳಬೇಕೆಂದು ತಿಳಿಸಿದ ಮಕ್ಕಳಿಗೆ ಶುಭ ಕೋರಿದರು.ಶಾಲೆ ಎಸ್.ಡಿ.ಎಂ.ಸಿ.ಅಧ್ಯಕ್ಷ ಮಹೇಂದ್ರ ಮಾತನಾಡಿ ಈ ಶಾಲೆ ಪ್ರಸ್ತಕ ವರ್ಷದಲ್ಲಿ ಪಿ.ಎಂ.ಶ್ರೀ.ಶಾಲೆಯಾಗಿ ಪ್ರಾರಂಭ ವಾಗಿದ್ದು ಸರ್ಕಾರದ ಹೆಚ್ಚಿನ ಅನುದಾನದಿಂದ ಶಾಲೆಗೆ ಮೂಲಭೂತ ಸೌಲಭ್ಯ ದೊರೆಯುತ್ತಿರುವುದರಿಂದ ಶಾಲೆಗೆ ಮಕ್ಕಳ ದಾಖಲಾತಿ ಹೆಚ್ಚಲು ಕಾರಣವಾಗಿದೆ. ಈ ಸೌಲಭ್ಯ ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಪರುಶುರಾಮಪ್ಪ ಎಚ್.ಎ. ಮಾತನಾಡಿ ಸರ್ಕಾರದ ಉಚಿತ ಸೌಲಭ್ಯಗಳಾದ ಪಠ್ಯಪುಸ್ತಕ, ಸಮವಸ್ತ್ರ, ಅಕ್ಷರ ದಾಸೋಹದ ಬಿಸಿಯೂಟ ಯೋಜನೆ ಕ್ಷೀರಭಾಗ್ಯ, ರಾಗಿಮಾಲ್ಟ್, ಮೊಟ್ಟೆ ಹಾಗೂ ಬಾಳೆಹಣ್ಣಿನಂತಹ ಪೌಷ್ಠಿಕ ಆಹಾರವನ್ನು ಮಕ್ಕಳಿಗೆ ವಿತರಿಸಲಾಗುತ್ತಿದೆ. ಇದರಿಂದ ಮಕ್ಕಳ ಮಾನಸಿಕ ಮತ್ತು ಭೌದ್ದಿಕ ಬೆಳವಣಿಗೆಯಾಗಿ ಮಕ್ಕಳಿಗೆ ಶೈಕ್ಷಣಿಕ ಆಸಕ್ತಿ ಹೆಚ್ಚಾಗುತ್ತಿದೆ ಎಂದು ತಿಳಿಸಿದರು.ಶಾಲಾ ಪ್ರಾರಂಭೋತ್ಸವ ತಾಲೂಕು ಮಟ್ಟದ ಕಾರ್ಯಕ್ರಮವಾಗಿದ್ದು ತಾಲೂಕಿನ ಎಲ್ಲಾ ಶಾಲೆಗಳಲ್ಲಿ ಮಕ್ಕಳಿಗೆ ಸಿಹಿ ವಿತರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಮಕ್ಕಳಿಗೆ ಗುಲಾಬಿ ಹೂವು ನೀಡುವುದರ ಮೂಲಕ ಮಕ್ಕಳನ್ನು ಸ್ವಾಗತಿಸಲಾಗಿದೆ ಎಂದು ಹೇಳಿದರು.
ಮಕ್ಕಳು ಹೆಚ್ಚು ಲವಲವಿಕೆಯಿಂದ ಶಾಲಾ ಪ್ರಾರಂಭೋತ್ಸವದಲ್ಲಿ ಭಾಗವಹಿಸಿ ಬೇಸಿಗೆ ರಜೆ ನಂತರ ಶಾಲಾ ದಿನಕ್ಕೆ ಪ್ರವೇಶಿಸುತ್ತಿರುವುದು ಶಾಲೆಗಳಲ್ಲಿ ಸಂತೋಷದಾಯಕ ವಾತಾವರಣ ನಿರ್ಮಾಣವಾಗಿದೆ ಎಂದು ತಿಳಿಸಿದರು. ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ಅಧ್ಯಕ್ಷ ಧರಣೇಶ್, ನೌಕರರ ಸಂಘದ ನಿರ್ದೇಶಕ ಎಂ.ಬಿ.ರಾಮಚಂದ್ರಪ್ಪ, ಬಿ.ಆರ್.ಸಿ. ಸಮನ್ವಯಾಧಿಕಾರಿ ಮಂಜುನಾಥ್ ಟಿ. ಮಾತನಾಡಿದರು.ಬಿ.ಆರ್.ಸಿ.ನೀಲಕಂಠಪ್ಪ, ಶರತ್, ಸಿ.ಆರ್.ಪಿ.ಶಿಲ್ಪ, ಶಾಲೆ ಮುಖ್ಯ ಶಿಕ್ಷಕ ಜಗದೀಶ್, ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
-30ಕೆಟಿಆರ್.ಕೆ.10ಃ
ತರೀಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುರಸಭೆ ಉಪಾಧ್ಯಕ್ಷೆ ಪಾರ್ವತಮ್ಮ ತಾಲೂಕು ಮಟ್ಟದ ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಪರುಶುರಾಮಪ್ಪ ಎಚ್.ಎ. ಮತ್ತಿತರರು ಇದ್ದರು.