ಇಷ್ಟಲಿಂಗ ಪೂಜೆ ಮೂಲಕ ಬದುಕು ಪುಣ್ಯಪಾವನ ಮಾಡಿಕೊಳ್ಳಿ-ಸ್ವಾಮೀಜಿ

KannadaprabhaNewsNetwork | Published : Feb 10, 2025 1:47 AM

ಮನುಷ್ಯನ ಆಯುಷ್ಯ ಕಡಿಮೆಯಾಗುತ್ತಾ ಬರುತ್ತಿದೆ, ಬದುಕು ಸ್ಥಿರವಾಗಿಲ್ಲ. ಹೀಗಾಗಿ ಬದುಕಿನ ಅವಧಿಯಲ್ಲಿ ಇಷ್ಟಲಿಂಗ ಪೂಜೆ ಮಾಡುವ ಮೂಲಕ ಬದುಕನ್ನು ಪುಣ್ಯಪಾವನ ಮಾಡಿಕೊಳ್ಳಬೇಕು ಎಂದು ಕೇದಾರನಾಥ ಪೀಠದ ಜಗದ್ಗುರುಗಳಾದ ಭೀಮಾಶಂಕರಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಶಿಗ್ಗಾಂವಿ: ಮನುಷ್ಯನ ಆಯುಷ್ಯ ಕಡಿಮೆಯಾಗುತ್ತಾ ಬರುತ್ತಿದೆ, ಬದುಕು ಸ್ಥಿರವಾಗಿಲ್ಲ. ಹೀಗಾಗಿ ಬದುಕಿನ ಅವಧಿಯಲ್ಲಿ ಇಷ್ಟಲಿಂಗ ಪೂಜೆ ಮಾಡುವ ಮೂಲಕ ಬದುಕನ್ನು ಪುಣ್ಯಪಾವನ ಮಾಡಿಕೊಳ್ಳಬೇಕು ಎಂದು ಕೇದಾರನಾಥ ಪೀಠದ ಜಗದ್ಗುರುಗಳಾದ ಭೀಮಾಶಂಕರಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ಪಟ್ಟಣದಲ್ಲಿ ಐತಿಹಾಸಿಕ ಹಿನ್ನೆಲೆ ಹೊಂದಿರುವ ಮೈಲಾರಲಿಂಗೇಶ್ವರ ನೂತನ ದೇವಸ್ಥಾನ ಲೋಕಾರ್ಪಣೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ನಡೆದ ಧರ್ಮ ಸಭೆ ಹಾಗೂ ಪುರಾಣ ಪ್ರವಚನ ಕಾರ್ಯಕ್ರಮ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಮನುಕುಲದ ಶ್ರೇಯೋಭಿವೃದ್ಧಿಗಾಗಿ ಪರಂಪರಾಗತವಾಗಿ ಪಂಚಪೀಠಗಳು ನೀಡಿದ ಕೊಡುಗೆ ಅಪಾರವಾಗಿದೆ. ಅದರಿಂದಾಗಿ ಸರ್ವ ಸಮೂದಾಯದ ಜನರಲ್ಲಿ ಸಮಾನತೆ ಮತ್ತು ಒಗ್ಗಟ್ಟಿನಿಂದ ಸಾಗಲು ಸಾಧ್ಯವಾಗುತ್ತಿದೆ ಎಂದರು. ಮೈಲಾರಲಿಂಗೇಶ್ವರನ ಸ್ಮರಣೆ ಮಾಡುವ ಕಾಯಕ, ಪೂಜೆ ಅನುಷ್ಠಾನವಾಗಲಿ. ಜನನದಿಂದ ಆರಂಭವಾದ ಸಂಸ್ಕಾರ, ಉಪನಯನಗಳನ್ನು ಆಚರಿಸಿಕೊಂಡು ಬರುತ್ತಿದೆ. ಪುನರ್ಹಜನ್ಮದ ಚಕ್ರದ ಕುರಿತು ಸತ್ಯ, ಅಸತ್ಯಗಳ ಬಗ್ಗೆ ಯಾರು ತಿಳಿದಿಲ್ಲ. ಇಂಥ ಬದುಕನ್ನು ಸಂಭ್ರಮಿಸುವ ಮೂಲಕ ಪರೋಪಕಾರಿಯಾಗಿ ಬಾಳಿರಿ, ಮೈಲಾರಲಿಂಗೇಶ್ವರರ ಹಳದಿ ಬಣ್ಣ ಪರಿಪಕ್ವತೆ ಸಂಕೇತವಾಗಿದೆ ಎಂದು ಕೇದಾರನಾಥ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಕಣ್ವಕುಪ್ಪೆ ಗವಿಮಠದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಮತನಾಡಿ, ಪಾಪ ಕರ್ಮಗಳ ಪಾವನಕ್ಕಾಗಿ ಗಂಗೆ ಸ್ಥಾನ ಮುಖ್ಯವಾಗಿದೆ. ಅಂತಹ ಗಂಗೆ ಸ್ಥಾನ ಮನಸ್ಸನ್ನು ಪರಿಶುದ್ಧವಾಗಲಿ. ಕೇದಾರನಾಥ ಪೀಠದ ಸ್ವಾಮೀಜಿ ಅವರು ನಾಡಿನಾದ್ಯಂತ ಸಂಚರಿಸಿ ಭಕ್ತಿಗೆ ನೀಡುವ ಮಾರ್ಗದರ್ಶನ ಸಮಾಜದ ಏಳ್ಗೆಗೆ ಕಾರಣವಾಗಿದೆ ಎಂದರು.

ಮೈಲಾರಲಿಂಗೇಶ್ವರ ದೇವಸ್ಥಾನ ಸಮಿತಿ ಸುಭಾಸ ಚವ್ಹಾಣ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಾಜಿ ಸಂಸದ ಎಂ.ಸಿ.ಕುನ್ನೂರ ಮಾತನಾಡಿದರು.ಗಂಜೀಗಟ್ಟಿ ಚರಮೂರ್ತೇಶ್ವರ ಮಠದ ಡಾ,ವೈಜನಾಥ ಶಿವಲಿಂಗೇಶ್ವರ ಶಿವಾಚಾರ್ಯ ಸ್ವಾಮೀಜಿ, ಹಿರೇಮಣಕಟ್ಟಿ ವಿಶ್ವಾರಾಧ್ಯ ಸ್ವಾಮೀಜಿ, ಗೋನಾಳ ರಮೇಶ ಸ್ವಾಮೀಜಿ, ಹುಬ್ಬಳ್ಳಿ ರಾಜಶೇಖರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಂಗಪ್ಪ ಕಂಕನವಾಡ, ಮಲ್ಲಯ್ಯ ಹಿರೇಮಠ, ಚೇತನಸ್ವಾಮಿ ಪಾಟೀಲ, ಉಳವಯ್ಯ ಬಮ್ಮಿಗಟ್ಟಿಮಠ, ಗುರುಲಿಂಗಯ್ಯ ಹಿರೇಮಠ,ಮುರಿಗೆಪ್ಪ ಯಲಿಗಾರ, ಗದಿಗೆಪ್ಪ ಕೊಡ್ಲಿವಾಡ, ಶಂಕ್ರಪ್ಪ ಯಲುವಿಗಿ, ದೇವಸ್ಥಾನ, ಶಿಲ್ಪ ಮೂರ್ತಿ ಕಲಾವಿದರಾದ ವೆಂಕಟೇಶ, ಜಿತೇಂದ್ರ ಆಚಾರ, ಸಿದ್ದಾರೂಢ, ಸುರೇಶ ಕರೆಮಲ್ಲಣ್ಣವರ, ದೇವಿಂದ್ರಪ್ಪ ಗಂಟೆಪ್ಪನವರ, ಡಿಳ್ಳೆಪ್ಪ, ಮಂಜುನಾಥ ಗಣಪ್ಪನವರ, ನೀಲಪ್ಪ ಹನಗಿರಿ ಸೇರಿದಂತೆ ದೇಸ್ಥಾನ ಸಮಿತಿ ಸದಸ್ಯರು ಇದ್ದರು.ಗದುಗಿನ ಗಾನಯೋಗಿ ಪುಟ್ಟರಾಜ ಕವಿಗವಾಯಿಗಳ ಶಿಷ್ಯ ಪ್ರಭಯ್ಯಶಾಸ್ತ್ರಿ ಹಿರೇಮಠ ಪ್ರವಚನ ಮತ್ತು ಶಿವಾನಂದ ಮುಂದೇವಾಲ, ಬಸವರಾಜ ಚಳಗೇರಿ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು. ವಿವಿಧ ರಂಗದಲ್ಲಿನ ಸಾಧಕರನ್ನು ಹಾಗೂ ಸೇವಾಧಾರಿಗಳನ್ನು ದೇವಸ್ಥಾನ ಸೇವಾ ಸಮಿತಿ ವತಿಯಿಂದ ಸನ್ಮಾನಿಸಿ ಗೌರವಿಸಿದರು.