ತಾಂಡಾಗಳನ್ನು ಸಂಪೂರ್ಣ ಕಂದಾಯ ಗ್ರಾಮಗಳಾಗಿಸಿ: ಅನಂತ ನಾಯ್ಕ

KannadaprabhaNewsNetwork | Published : Jul 30, 2024 12:37 AM

ಸಾರಾಂಶ

ಬಂಜಾರ ಜನಾಂಗದ ಲಂಬಾಣಿ ತಾಂಡಾಗಳನ್ನು ಸಂಪೂರ್ಣ ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲು ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಹೈಕೋರ್ಟ್‌ ವಕೀಲ ಎನ್.ಅನಂತ ನಾಯ್ಕ ಹರಿಹರದಲ್ಲಿ ಹೇಳಿದ್ದಾರೆ.

- ಹರಿಹರದಲ್ಲಿ ಬಂಜಾರ ಯುವಜನರ ಉದ್ಯಮಶೀಲತೆ ಶಿಬಿರ - - - ಕನ್ನಡಪ್ರಭ ವಾರ್ತೆ, ಹರಿಹರ

ಬಂಜಾರ ಜನಾಂಗದ ಲಂಬಾಣಿ ತಾಂಡಾಗಳನ್ನು ಸಂಪೂರ್ಣ ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲು ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಹೈಕೋರ್ಟ್‌ ವಕೀಲ ಎನ್.ಅನಂತ ನಾಯ್ಕ ಹೇಳಿದರು.

ನಗರದ ಮೈತ್ರಿವನದ ಪ್ರೊ. ಬಿ.ಕೃಷ್ಣಪ್ಪ ಸಭಾಭವನದಲ್ಲಿ ಭಾನುವಾರ ನಡೆದ ಬಂಜಾರ ಯುವಜನರ ಉದ್ಯಮಶೀಲತೆ ಮತ್ತು ನಾಯಕತ್ವ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ವಲಸೆ ಕಾರ್ಮಿಕರ ಮಕ್ಕಳಿಗಾಗಿ ಸಂಚಾರಿ ವಸತಿ ಶಾಲೆಗಳನ್ನು ಸ್ಥಾಪಿಸಬೇಕು. ಈ ದುಡಿಯುವ ಜನರಿಗೆ ಭದ್ರತೆ ಮತ್ತು ಸೌಲಭ್ಯಗಳನ್ನು ಖಾತ್ರಿಗೊಳಿಸಬೇಕು ಎಂದು ತಿಳಿಸಿದರು.

ಬಂಜಾರ ಭಾಷೆಯನ್ನು ಭಾರತದ ಸಂವಿಧಾನದ 8ನೇ ಷೆಡ್ಯೂಲ್‌ನಲ್ಲಿ ಸೇರಿಸುವ ಅಗತ್ಯವಿದೆ. ಬಂಜಾರ ಭಾಷೆಯನ್ನು ಸಂವಿಧಾನದಲ್ಲಿ ಸೇರಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಸಮುದಾಯದ ಸಂಘ ಸಂಸ್ಥೆಗಳು, ಚಿಂತಕರು ಮತ್ತು ಜನಪ್ರತಿನಿಧಿಗಳು ಸಂಘಟಿತರಾಗಬೇಕು ಎಂದರು.

ಬಂಜಾರರ ಸಾಂವಿಧಾನಿಕ ಮೀಸಲಾತಿ ಕಿತ್ತುಕೊಳ್ಳಲು ನಡೆಯುವ ಷಡ್ಯಂತರಗಳನ್ನು ಎದುರಿಸಲು ಸದಾ ಜಾಗೃತರಾಗಬೇಕು. ಸಂವಿಧಾನ ಸಂರಕ್ಷಣೆಗಾಗಿ ನಾಡಿನ ಶೋಷಿತ ಸಮುದಾಯಗಳು ಆಯೋಜಿಸುವ ಐಕ್ಯ ಅಂದೋಲನಗಳಲ್ಲಿ ಬಂಜಾರರು ಭಾಗವಹಿಸಬೇಕು. ತಾಂಡಾಗಳಲ್ಲಿ ಮದುವೆ, ಹಬ್ಬಗಳ ಹೆಸರಿನಲ್ಲಿ ನಡೆಯುವ ದುಂದುವೆಚ್ಚಗಳಿಗೆ ನಿಯಂತ್ರಣ ಹಾಕಬೇಕು. ಮಕ್ಕಳ ಶಿಕ್ಷಣ, ಉದ್ಯೋಗಕ್ಕಾಗಿ ಮುಂದಾಗಬೇಕು ಎಂದು ಸಲಹೆ ನೀಡಿದರು.

ರಾಜ್ಯದ ೨೬ ಜಿಲ್ಲೆಗಳಿಂದ ೧೦೮ ಆಯ್ದ ಪ್ರತಿನಿಧಿಗಳು ಭಾಗವಹಿಸಿದ್ದರು. ಕರ್ನಾಟಕ ತಾಂಡ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಯದೇವ ನಾಯ್ಕ, ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಪ್ರೊ. ಎ.ಬಿ. ರಾಮಚಂದ್ರಪ್ಪ, ಎಐಬಿಎಸ್‌ಎಸ್ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಶೈಲಜಾಬಾಯಿ, ಬಂಜಾರ ಸಮಾಜ ದಾವಣಗೆರೆ ಜಿಲ್ಲಾಧ್ಯಕ್ಷ ನಂಜಾ ನಾಯ್ಕ, ಯುವ ಉದ್ಯಮಿ ಆರ್ಯ ಯಲ್ಲಪ್ಪ, ಕಾರ್ಮಿಕ ಮುಖಂಡ ವಿಜಯ್ ಜಾಧವ್, ಈಶ್ವರ ನಾಯ್ಕ, ಲಕ್ಷ್ಮಣ ರಾಮಾವತ್, ಶೈಲಜಾ ಬಾಯಿ ಮತ್ತಿತರರು ಉಪಸ್ಥಿತಿ ಇದ್ದರು.

- - - -೨೯ಎಚ್‌ಆರ್‌ಆರ್೨:

ಸಮಾರಂಭದಲ್ಲಿ ಹೈಕೋರ್ಟ್‌ ವಕೀಲ ಅನಂತ ನಾಯ್ಕ ಮಾತನಾಡಿದರು.

Share this article