ಹೊಸಕೋಟೆ: ಕರ್ನಾಟಕ ರಾಜ್ಯದಲ್ಲಿ ಮೂಲೆ ಮೂಲೆಗಳಿಂದ ನಾಗರಿಕರು ಆಗಮಿಸಿ ಬದುಕನ್ನು ಕಟ್ಟಿಕೊಂಡಿದ್ದಾರೆ. ಅವರಿಗೂ ಕೂಡ ಕನ್ನಡ ನಾಡು, ನುಡಿ, ಸಂಸ್ಕೃತಿ, ಪರಂಪರೆ ಬಗ್ಗೆ ಅರಿವು ಮೂಡಿಸುವ ಕೆಲಸ ಆಗಬೇಕು ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ಬೆಂಗಳೂರೆಂಬ ಮಹಾನಗರದಲ್ಲಿ ಅನ್ಯಭಾಷಿಕರ ನಡುವೆ ಜೀವಿಸುತ್ತಿರುವ ನಾವು ಕನ್ನಡ ಬಳಕೆಯನ್ನು ಕೇವಲ ಶೇಕಡ 35ರಷ್ಟು ಮಾಡುತ್ತಿದ್ದೇವೆ. ಕನ್ನಡ ಭಾಷೆಯ ವಿಚಾರವಾಗಿ ಹಲವಾರು ಮಹನೀಯರು ಹೋರಾಟದ ಹಾದಿಯನ್ನು ತುಳಿತಿದ್ದಾರೆ. ಕನ್ನಡ ಭಾಷೆ ಎಂದರೆ ಅಗಾಧವಾದ ಜ್ಞಾನ ಸಂಪತ್ತನ ಹೊಂದಿದೆ. ಕರ್ನಾಟಕದಲ್ಲಿ ಎಂಟು ಜ್ಞಾನಪೀಠ ಪ್ರಶಸ್ತಿ ಪಡೆದಿರುವ ಕವಿಗಳ ಹೆಗ್ಗಳಿಕೆ ಇದೆ. ಆದ್ದರಿಂದ ಕನ್ನಡ ಭಾಷೆಯ ಬಳಕೆ, ಉಳಿವು ಕನ್ನಡಿಗರಾದ ನಮ್ಮೆಲ್ಲರ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ರಾಜ ಆರ್ಟ್ಸ್ ಮುನಿರಾಜು ಮಾತನಾಡಿ ಕನ್ನಡ ನಾಡಿನಲ್ಲಿ ಹುಟ್ಟಿರುವ ಪ್ರತಿಯೊಬ್ಬರು ಕೂಡ ನಮ್ಮ ಮಾತೃಭಾಷೆ ಕನ್ನಡದ ಮೇಲೆ ಅಭಿಮಾನ ಇರಬೇಕು. ಅನ್ಯ ಭಾಷೆಗಳನ್ನು ಕೇವಲ ವ್ಯವಹಾರಿಕವಾಗಿ ಬಳಕೆ ಮಾಡಿಕೊಂಡು ನಿತ್ಯ ಜೀವನದಲ್ಲಿ ಕನ್ನಡವನ್ನು ಬಳಕೆ ಮಾಡಿಕೊಂಡರೆ ಭಾಷೆಯ ಉಳಿಸುವುದರ ಜೊತೆಗೆ ಬೆಳೆಸಲು ಸಾಧ್ಯವಾಗುತ್ತದೆ ಎಂದರು.ಇದೇ ಸಂದರ್ಭದಲ್ಲಿ ಪ್ರಥಮ ಭಾಷೆ ಕನ್ನಡದಲ್ಲಿ ಎಸ್ಎಸ್ಎಲ್ಸಿಯಲ್ಲಿ 125ಕ್ಕೆ 125 ಅಂಕ ಪಡೆದಿರುವ ತಾಲೂಕಿನ 11 ವಿದ್ಯಾರ್ಥಿಗಳನ್ನು ಗೌರವಿಸಿ ಸನ್ಮಾನಿಸಲಾಯಿತು.
ಫೋಟೋ : 3 ಹೆಚ್ಎಸ್ಕೆ 1