ಮೇಟಿಯವರ ಆತ್ಮಕ್ಕೆ ಶಾಂತಿ ದೊರೆಯಲು ಉಮೇಶರನ್ನು ಗೆಲ್ಲಿಸಿ: ಮುಖ್ಯಮಂತ್ರಿ ಸಿದ್ದರಾಮಯ್ಯ

KannadaprabhaNewsNetwork |  
Published : Mar 24, 2026, 02:30 AM IST
ಸಿದ್ದರಾಮಯ್ಯ | Kannada Prabha

ಸಾರಾಂಶ

ಮಾಜಿ ಶಾಸಕ ದಿವಂಗತ ಎಚ್.ವೈ. ಮೇಟಿಯವರಿಗೆ ಗೌರವ, ಅವರ ಆತ್ಮಕ್ಕೆ ಶಾಂತಿ ದೊರೆಯಬೇಕಾದರೆ ಬಾಗಲಕೋಟೆ ಗ್ರಾಮೀಣ ಕ್ಷೇತ್ರದ ಜನರು ಉಮೇಶ ಮೇಟಿಯವರಿಗೆ ಆಶೀರ್ವದಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಮಾಜಿ ಶಾಸಕ ದಿವಂಗತ ಎಚ್.ವೈ. ಮೇಟಿಯವರಿಗೆ ಗೌರವ, ಅವರ ಆತ್ಮಕ್ಕೆ ಶಾಂತಿ ದೊರೆಯಬೇಕಾದರೆ ಬಾಗಲಕೋಟೆ ಗ್ರಾಮೀಣ ಕ್ಷೇತ್ರದ ಜನರು ಉಮೇಶ ಮೇಟಿಯವರಿಗೆ ಆಶೀರ್ವದಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದರು.

ಸೋಮವಾರ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿಯವರ ನಾಮಪತ್ರ ಸಲ್ಲಿಕೆಯಲ್ಲಿ ಪಾಲ್ಗೊಂಡು ಬಳಿಕ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.

ರಾಜ್ಯದಲ್ಲಿ ದಾವಣಗೆರೆ ಮತ್ತು ಬಾಗಲಕೋಟೆ ಎರಡು ಕ್ಷೇತ್ರಗಳ ಉಪಚುನಾವಣೆ ನಡೆಯುತ್ತಿದ್ದು, ಎರಡೂ ಕ್ಷೇತ್ರಗಳಲ್ಲಿ ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಾದ ಶ್ಯಾಮನೂರು ಶಿವಶಂಕರಪ್ಪ ದಾವಣಗೆರೆಯಲ್ಲಿ ಹಾಗೂ ಎಚ್.ವೈ. ಮೇಟಿಯವರು ಬಾಗಲಕೋಟೆಯಲ್ಲಿ ಗೆದ್ದಿದ್ದರು. ಇವರಿಬ್ಬರೂ ಅಕಾಲಿಕವಾಗಿ ಮರಣ ಹೊಂದಿದ್ದು, ಉಪಚುನಾವಣೆ ನಡೆಯುತ್ತಿದೆ. ಎಚ್.ವೈ. ಮೇಟಿಯವರು ಆಸ್ಪತ್ರೆಯಲ್ಲಿದ್ದಾಗ ಬದುಕುವ ನಿರೀಕ್ಷೆ ಹೊಂದಿದ್ದರು. ಆದರೆ ಭೇಟಿಯಾದ ನಾಲ್ಕೈದು ದಿನಗಳಲ್ಲಿಯೇ ಕಾಲವಾದರು. ಇದನ್ನು ನಾವು ನಿರೀಕ್ಷಿಸಿರಲಿಲ್ಲ. ಅವರು ಐದು ಬಾರಿ ಶಾಸಕರು ಹಾಗೂ ಒಮ್ಮೆ ಸಂಸದರಾಗಿದ್ದರು. ಎರಡು ಬಾರಿ ಮಂತ್ರಿಯೂ ಆಗಿದ್ದರು ಎಂದರು.

ಜಾತ್ಯತೀತ ವ್ಯಕ್ತಿಯಾಗಿದ್ದ ಮೇಟಿ:

ಎಲ್ಲಾ ಜಾತಿ, ಧರ್ಮದವರನ್ನು ಸಮಾನವಾಗಿ ಕಾಣುವುದು ಮೇಟಿಯವರ ಗುಣವಾಗಿತ್ತು. ಹಿಂದುಳಿದವರ ಪರವಾಗಿ ಧ್ವನಿ ಎತ್ತುವ ಕೆಲಸ ಮಾಡಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ಬಹಳ ನಿಷ್ಠಾವಂತ ವ್ಯಕ್ತಿಯಾಗಿದ್ದರು. ಯಾರನ್ನಾದರೂ ನಂಬಿಕೊಂಡರೆ ಅವರನ್ನು ಎಂದಿಗೂ ಕೈಬಿಡುತ್ತಿರಲಿಲ್ಲ. ಅಂಥ ವ್ಯಕ್ತಿಯನ್ನು ಕಳೆದುಕೊಂಡು ಉಪಚುನಾವಣೆ ನಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಉಪಚುನಾವಣೆಗೆ ಅಭ್ಯರ್ಥಿಯನ್ನು ಆಯ್ಕೆ ಮಾಡುವಾಗ ನಾನು, ಉಪಮುಖ್ಯಮಂತ್ರಿಗಳು, ಎಐಸಿಸಿ ಕಾರ್ಯದರ್ಶಿಗಳು ಹೈ ಕಮಾಂಡ್ ಜೊತೆ ಮಾತನಾಡಿ ಮೇಟಿಯವರ ಕುಟುಂಬಕ್ಕೆ ಟಿಕೆಟ್ ಕೊಡಲು ತೀರ್ಮಾನಿಸಲಾಯಿತು. ಮರಣ ಹೊಂದಿದ ಅಭ್ಯರ್ಥಿಯ ಮನೆಯವರಿಗೆ ಟಿಕೆಟ್ ಕೊಡುವುದು ಕಾಂಗ್ರೆಸ್ ಪಕ್ಷದ ನೀತಿಯಾಗಿದೆ. ಹಾಗಾಗಿ ಮೇಟಿಯವರ ನಾಲ್ಕು ಮಕ್ಕಳ ಪೈಕಿ ಮೇಟಿಯವರ ಪುತ್ರ ಉಮೇಶ ಮೇಟಿಯವರಿಗೆ ಟಿಕೆಟ್ ನೀಡಲಾಗಿದೆ ಎಂದು ಹೇಳಿದರು.

ಕಾಂಗ್ರೆಸ್ ಎಲ್ಲರನ್ನು ಒಳಗೊಂಡಿರುವ ಪಕ್ಷ:

ಕಾಂಗ್ರೆಸ್ ಸಮಾಜದಲ್ಲಿ ಎಲ್ಲರನ್ನು ಒಳಗೊಂಡಿರುವ ಪಕ್ಷ. ಈ ದೇಶದ ಎಲ್ಲರನ್ನೂ ಪ್ರತಿನಿಧಿಸುವ ಪಕ್ಷ ಕಾಂಗ್ರೆಸ್ ಮಾತ್ರ. ಸಾಮಾಜಿಕ ನ್ಯಾಯದಲ್ಲಿ ಬದ್ಧತೆಯಿರುವ ಪಕ್ಷ ಕಾಂಗ್ರೆಸ್. ಬಸವಣ್ಣ ಈ ಕೇತ್ರದಲ್ಲಿ ಹುಟ್ಟಿದವರು. ನಮ್ಮ ಪಕ್ಷ ಬಸವಣ್ಣನವರ ಅನುಯಾಯಿ. ಅವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದ್ದೇವೆ. ಬಿಜೆಪಿಯವರು ಹಿಂದೂಗಳ ವಾರಸುದಾರರು ಎಂದು ಬಹಳ ಮಾತನಾಡುತ್ತಾರೆ. ನಾವೆಲ್ಲಾ ಹಿಂದೂಗಳಲ್ಲವೇ? ಮೇಟಿಯವರು ಹಿಂದೂ ಅಲ್ಲವೇ ? ಎಂದು ಪ್ರಶ್ನಿಸಿದರು. ಹಿಂದೂ ಎನ್ನುವುದು ಜನರಿಗೆ ತೋರ್ಪಡಿಸಲು ಮಾತ್ರವೇ ಹೊರತು ಬಡವರು, ಹಿಂದುಳಿದವರು ಅಲ್ಪಸಂಖ್ಯಾತರ ವಿರೋಧಿಗಳು. ಮನುವಾದದಲ್ಲಿ ನಂಬಿಕೆಯುಳ್ಳವರು. ಮನುವಾದ ಮಹಿಳೆಯರು, ರೈತರು, ಬಡವರ ವಿರೋಧಿಯಾಗಿದೆ. ಅದಕ್ಕಾಗಿಯೇ ಗ್ಯಾರಂಟಿಗಳನ್ನು ವಿರೋಧಿಸಿದರು. ಗ್ಯಾರಂಟಿ ಯೋಜನೆಗಳು ಜನಪರವಾಗಿದ್ದು, ಮಹಿಳೆಯರಿಗೆ, ದಲಿತರಿಗೆ, ಹಿಂದುಳಿದವರಿಗೆ, ಅಲ್ಪಸಂಖ್ಯಾತರಿಗೆ ಆರ್ಥಿಕ ಮತ್ತು ಸಾಮಾಜಿಕ ಶಕ್ತಿ ತುಂಬುತ್ತಿವೆ. ಜಾತ್ಯತೀತವಾಗಿ ನೀಡುತ್ತಿರುವ ಈ ಯೋಜನೆಗಳ ಫಲವನ್ನು ಬಿಜೆಪಿಯವರೂ ಪಡೆದುಕೊಳ್ಳುತ್ತಿದ್ದಾರೆ. ಈ ವರ್ಷದ ಅಂತ್ಯದವರೆಗೆ ₹1.21 ಲಕ್ಷ ಕೋಟಿ ವೆಚ್ಚ ಮಾಡಲಾಗಿದೆ. ಬಿಜೆಪಿಯವರು ನಾಲ್ಕು ವರ್ಷ ಅಧಿಕಾರದಲ್ಲಿದ್ದು ಏನು ಮಾಡಿದ್ದಾರೆ? ವೈದ್ಯಕೀಯ ಕಾಲೇಜು ಕೊಟ್ಟರೆ? ಅಭಿವೃದ್ಧಿ ಕಾರ್ಯ ಮಾಡಿದ್ದಾರೆಯೇ? ಕೃಷ್ಣ ಮೇಲ್ದಂಡೆ ಯೋಜನೆಯಡಿ ಜಮೀನು ಕಳೆದುಕೊಂಡ ಮಾಲೀಕರಿಗೆ ಪರಿಹಾರ ನೀಡಿದರೆ? ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಬಿಜೆಪಿ ಅಪಪ್ರಚಾರ, ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಸುಳ್ಳು ಹೇಳುವುದನ್ನು ಬಿಟ್ಟರೆ ಜೀವನದಲ್ಲಿ ಅಭಿವೃದ್ಧಿ ಕಾರ್ಯ ಮಾಡಿಲ್ಲ. ಬಿ.ಎಸ್ ಯಡಿಯೂರಪ್ಪ, ಜಗದೀಶ ಶೆಟ್ಟರ, ಸದಾನಂದ ಗೌಡರು, ನುಡಿದಂತೆ ನಡೆದರೆ? 2018 ರ ಪ್ರಣಾಳಿಕೆಯಲ್ಲಿ 600 ಭರವಸೆ ನೀಡಿ ಅವುಗಳಲ್ಲಿ ಶೇ.10ರಷ್ಟನ್ನೂ ಜಾರಿ ಮಾಡಿಲ್ಲ. ಇಂಥವರಿಗೆ ಮತ ಹಾಕಬೇಕೆ? ಎಂದು ಹೇಳಿದರು. ಮೆಡಿಕಲ್‌ ಕಾಲೇಜ್‌ ಆಗಲು ಎಚ್.ವೈ. ಮೇಟಿ ಕಾರಣ:

ಬಾಗಲಕೋಟೆಗೆ ವೈದ್ಯಕೀಯ ಕಾಲೇಜ್‌ ಘೋಷಣೆ ಮಾಡಲು ಎಚ್.ವೈ. ಮೇಟಿಯವರು ಕಾರಣ ಎಂದರು. ವೈದ್ಯಕೀಯ ಕಾಲೇಜು ಶಂಕುಸ್ಥಾಪನೆಯ ಸಂದರ್ಭದಲ್ಲಿ ಮೇಟಿಯವರು ಇಲ್ಲದ್ದು ದುರ್ದೈವದ ಎಂದರು.

ಯುಕೆಪಿ ಸಂತ್ರಸ್ತರಿಗೆ ಸರ್ಕಾರದಿಂದ ಪರಿಹಾರ:

ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತಕ್ಕೆ ಇಂದಿನವರೆಗೂ ಪರಿಹಾರ ಕೊಟ್ಟಿಲ್ಲ. ನಮ್ಮ ಸಕರ್ಾರ ರೈತ ಮುಖಂಡರು, ಶಾಸಕರೊಂದಿಗೆ ಸಭೆ ಮಾಡಿ ಒಂದೇ ಹಂತದಲ್ಲಿ ಒಪ್ಪಂದದ ಮೂಲಕ ಪರಿಹಾರ ನೀಡಲು ತೀರ್ಮಾನಿಸಿ ಒಂದು ಎಕರೆ ನೀರಾವರಿ ಜಮೀನಿಗೆ ₹40 ಲಕ್ಷ, ಖುಷ್ಕಿ ಜಮೀನಿಗೆ ₹30 ಲಕ್ಷ ಒದಗಿಸಲಾಯಿತು ಎಂದರು.

ನಮ್ಮನ್ನು ಪ್ರಶ್ನಿಸಲು ಯಾವುದೇ ನೈತಿಕತೆ ಇಲ್ಲ:

ಬಜೆಟ್ ನಲ್ಲಿ ಹಣವನ್ನು ಇಟ್ಟಿಲ್ಲ ಎಂದು ಬಿಜೆಪಿ ಆರೋಪಿಸುತ್ತಿದೆ. ಆದರೆ ಅದು ಸತ್ಯಕ್ಕೆ ದೂರವಾದ ವಿಚಾರ. ಮೊನ್ನೆ ವೈದ್ಯಕೀಯ ಕಾಲೇಜ್‌ ಶಂಕುಸ್ಥಾಪನೆಯ ದಿನ ಪರಿಹಾರ ನೀಡಲಾಗಿದೆ. ಜಮೀನು ಕೊಡಲು ಒಪ್ಪಿ ಬರುವ ಎಲ್ಲರಿಗೂ ಪರಿಹಾರ ನೀಡಲಾಗುವುದು. ಕೇಂದ್ರದಲ್ಲಿ ಇಂದಿನವರೆಗೆ ಗೆಜೆಟ್ ಅಧಿಸೂಚನೆ ಹೊರಡಿಸಿಲ್ಲ. ನಾನು ಹಾಗೂ ಉಪಮುಖ್ಯಮಂತ್ರಿಗಳು ಅನೇಕ ಸಾರಿ ಸಂಬಂಧಪಟ್ಟವರನ್ನು ಭೇಟಿ ಮಾಡಿದರೂ ಇಂದಿನವರೆಗೂ ಅಧಿಸೂಚನೆ ಹೊರಡಿಸಿಲ್ಲ. ಬಿಜೆಪಿಯವರಿಗೆ ನಮ್ಮನ್ನು ಪ್ರಶ್ನಿಸಲು ಯಾವುದೇ ನೈತಿಕತೆ ಇಲ್ಲ. ಬಿಜೆಪಿಯವರು ಬುರುಡೆದಾಸರು, ಸುಳ್ಳು ಅವರ ಮನೆ ದೇವರು ಎಂದು ಟೀಕಿಸಿದರು.

ಉಮೇಶ ಮೇಟಿಯವರನ್ನು ವಿಧಾನಸಭೆಗೆ ಕಳುಹಿಸಿ:

ಉಮೇಶ ಮೇಟಿಯವರು ಇಂದು ನಾಮಪತ್ರ ಸಲ್ಲಿಸಿದ್ದು, ಅವರನ್ನು ನಿಮ್ಮ ಜೋಳಿಗೆಗೆ ಹಾಕುತ್ತಿದ್ದೇವೆ. ಅವರನ್ನು ಆಶೀರ್ವಾದಿಸುವುದು ನಿಮ್ಮ ಜವಾಬ್ದಾರಿ. ಬಿಜೆಪಿ ಒಡ್ಡುವ ಆಸೆ, ಆಮಿಷಗಳಿಗೆ ಒಳಗಾಗಬೇಡಿ. ಉಮೇಶ ಮೇಟಿಯವರನ್ನು ಗೆಲ್ಲಿಸಿ ವಿಧಾನಸಭೆಗೆ ಕಳುಹಿಸಿಕೊಡಿ. ಕ್ಷೇತ್ರದಲ್ಲಿ ನಾಲ್ಕೈದು ದಿನ ಇದ್ದು ಹಳ್ಳಿ ಹಳ್ಳಿಗೂ ಭೇಟಿ ನೀಡಿ ಪ್ರಚಾರ ಮಾಡುವ ಭರವಸೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಶಾಲನಗರ: ರಕ್ತದಾನ ಶಿಬಿರ ಉದ್ಘಾಟನೆ
ಅಂಬಾತನಯ ಮುದ್ರಾಡಿ ಪುಸ್ತಕ ಪ್ರಶಸ್ತಿಗೆ ನಾಟಕ ವಿಮರ್ಶಾಕೃತಿಗಳಿಗೆ ಆಹ್ವಾನ