ಕನ್ನಡಪ್ರಭ ವಾರ್ತೆ ಮಲ್ಪೆ
ಗಾಂಧಿ ಜಯಂತಿ - ಸ್ವಚ್ಛತಾ ಅಭಿಯಾನದ ಪ್ರಯುಕ್ತ ಮಲ್ಪೆ ಸಮೀಪದ ತೊಟ್ಟಂನಲ್ಲಿ ಸರ್ವ ಧರ್ಮಿಯರು ಒಂದಾಗಿ ಸೇರಿ ‘ನಮ್ಮ ನಡೆ ಸ್ವಚ್ಛತೆ ಕಡೆ’ ಎಂಬ ಧ್ಯೇಯದೊಂದಿಗೆ ಸ್ವಚ್ಛತಾ ಅಭಿಯಾನವನ್ನು ಬುಧವಾರ ಕೈಗೊಂಡರು.ಅಭಿಯಾನಕ್ಕೆ ಸ್ಥಳೀಯ ಹಿಂದೂ, ಮುಸ್ಲಿಂ ಹಾಗೂ ಕ್ರೈಸ್ತ ಬಂಧುಗಳು ಜೊತೆಯಾಗಿ ಸೇರಿ ಮಲ್ಪೆ, ತೊಟ್ಟಂ ಪರಿಸರದ ರಸ್ತೆ ಹಾಗೂ ಸಮುದ್ರ ತೀರದಲ್ಲಿನ ಕಸವನ್ನು ಸ್ವಚ್ಛಗೊಳಿಸುವ ಮೂಲಕ ಮಾದರಿ ಕಾರ್ಯ ಕೈಗೊಂಡರು.ಉಡುಪಿ ಧರ್ಮಪ್ರಾಂತ್ಯದ ನಿರ್ಮಲ ಪರಿಸರ ಅಭಿಯಾನದಡಿ ತೊಟ್ಟಂ ಸಂತ ಅನ್ನಮ್ಮ ದೇವಾಲಯದ ಕೆಥೊಲಿಕ್ ಸಭಾ, ಸ್ತ್ರೀ ಸಂಘಟನೆ, ಭಾರತೀಯ ಕೆಥೊಲಿಕ್ ಯವಸಂಚಾಲನ, ವೈಸಿಎಸ್ ಸಂಘಟನೆ ಹಾಗೂ ಸಮನ್ವಯ ಸರ್ವ ಧರ್ಮ ಸಮಿತಿ ಇವರ ಜಂಟಿ ಆಶ್ರಯದಲ್ಲಿ ಸ್ವಚ್ಛತಾ ಅಭಿಯಾನಕ್ಕೆ ತೊಟ್ಟಂ ಚರ್ಚಿನ ಬಳಿ ಚಾಲನೆ ನೀಡಲಾಯಿತು. ಇದೇ ವೇಳೆ ಏಕಕಾಲದಲ್ಲಿ ಜಮಾತೆ ಇಸ್ಲಾಮಿ ಹಿಂದ್ ಮಲ್ಪೆ ಮಹಿಳಾ ವಿಭಾಗ ಹಾಗೂ ಹ್ಯೂಮಾನಿಟೇರಿಯನ್ ರಿಲೀಫ್ ಸೊಸೈಟಿ ಮಲ್ಪೆ ಘಟಕದ ಕಾರ್ಯಕರ್ತರ ನೇತೃತ್ವದಲ್ಲಿ ಮಲ್ಪೆಯಿಂದ ತೊಟ್ಟಂವರೆಗೆ ಸ್ವಚ್ಛತಾ ಅಭಿಯಾನ ನಡೆಸಿದರು.ಸ್ವಚ್ಛತಾ ಅಭಿಯಾನದಲ್ಲಿ ಸುಮಾರು 150 ಮಂದಿ ನಾಗರಿಕರು ಪಾಲ್ಗೊಂಡು 300 ಟನ್ಗೂ ಅಧಿಕ ಕಸ, ಪ್ಲಾಸ್ಟಿಕ್ ಇನ್ನಿತರ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿದರು.ತೊಟ್ಟಂ ಸಂತ ಅನ್ನಮ್ಮ ದೇವಾಲಯದ ಧರ್ಮಗುರು ವಂ.ಡೆನಿಸ್ ಡೆಸಾ ಕಾರ್ಯಕ್ರಮ ಶ್ಲಾಘಿಸಿದರು. ಸಮನ್ವಯ ಸರ್ವಧರ್ಮ ಸಮಿತಿ ಅಧ್ಯಕ್ಷ ರಮೇಶ್ ತಿಂಗಳಾಯ, ತೆಂಕನಿಡಿಯೂರು ಗ್ರಾಪಂ ಸದಸ್ಯ ವಿನೋದ್ ಸುವರ್ಣ, ಕೆಥೊಲಿಕ್ ಸಭಾ ಅಧ್ಯಕ್ಷ ವೀಣಾ ಫರ್ನಾಂಡಿಸ್, ಸ್ತ್ರೀ ಸಂಘಟನೆ ಅಧ್ಯಕ್ಷೆ ಲೂಸಿ ಫುರ್ಟಾಡೊ, ಜಮಾತ್ ಇ ಇಸ್ಲಾಮಿ ಹಿಂದ್ ಸಂಯೋಜಕ ಶಬೀರ್, ಸ್ವಚ್ಛತಾ ಅಭಿಯಾನದ ಸಂಚಾಲಕ ಒನಿಲ್ ಡಿಸೋಜಾ, ತೊಟ್ಟಂ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಸುನೀಲ್ ಫರ್ನಾಂಡಿಸ್, ಕಾರ್ಯದರ್ಶಿ ಬ್ಲೆಸಿಲ್ಲಾ ಕ್ರಾಸ್ತಾ, 20 ಆಯೋಗಗಳ ಸಂಯೋಜಕಿ ವನಿತಾ ಫರ್ನಾಂಡಿಸ್, ಐಸಿವೈಎಂ - ವೈಸಿಎಸ್ ಸಂಘಟನೆಗಳ ಸಂಯೋಜಕರಾದ ಲೆಸ್ಲಿ ಆರೋಜಾ, ಸುನೀತಾ ಡೀಸೊಜ, ಲವೀನಾ ಆರೋಝಾ ಹಾಗೂ ಇತರರು ಉಪಸ್ಥಿತರಿದ್ದರು.