ಶಿವಮೊಗ್ಗ: ಪ್ರತಿಷ್ಠಿತ ಮಾಮ್ಕೋಸ್ (ಮಲೆನಾಡು ಅಡಕೆ ಮಾರಾಟ ಸಹಕಾರ ಸಂಘ) ದ ಆಡಳಿತ ಮಂಡಳಿಯ 19 ನಿರ್ದೇಶಕ ಸ್ಥಾನಕ್ಕೆ ಮಂಗಳವಾರ ಚುನಾವಣೆ ನಡೆದಿದ್ದು, ಬಿರುಸಿನ ಪೈಪೋಟಿ ನಡೆದಿದೆ. ಸಂಜೆ 4 ಗಂಟೆಗೆ ಮತದಾನ ಮುಗಿದಿದ್ದು, ಸರಿ ಸುಮಾರು 60-70 ರಷ್ಟು ಮತದಾನ ನಡೆದಿದೆ.ಚುನಾವಣೆ ಬಹುತೇಕ ಶಾಂತವಾಗಿ ನಡೆದಿದ್ದು, ಶಿವಮೊಗ್ಗದಲ್ಲಿ ಮಾತ್ರ ಕೆಲ ಕಾಲ ಗೊಂದಲ ಎದುರಾಗಿತ್ತು.ಸಹಕಾರ ಭಾರತಿ ಮತ್ತು ರಾಷ್ಟ್ರೀಯ ಸಹಕಾರ ಪ್ರತಿಷ್ಠಾನ ಹೆಸರಿನಲ್ಲಿ ಕ್ರಮವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ತಂಡವನ್ನು ರಚಿಸಿಕೊಂಡು ಚುನಾವಣಾ ಕಣಕ್ಕೆ ಇಳಿದಿದ್ದವು. ಸಂಸ್ಥೆಯಲ್ಲಿ ಒಟ್ಟು 31 ಸಾವಿರ ಮತದಾರರು ಇದ್ದರೂ, ಅರ್ಹತೆ ಪಡೆದಿದ್ದು ಕೇವಲ 11500 ಮಾತ್ರ. ಬಳಿಕ ಅನರ್ಹ ಮತದಾರರಲ್ಲಿ ಕೆಲವರು ನ್ಯಾಯಾಲಯಕ್ಕೆ ಹೋಗಿ ಮತದಾನದ ಹಕ್ಕನ್ನು ಪಡೆದು ಬಂದಿದ್ದಾರೆ. ಇದು ಸರಿ ಸುಮಾರು 5 ಸಾವಿರವಾಗಿರಬಹುದು ಎಂದು ಅಂದಾಜಿಸಲಾಗಿದೆ.
ಇದರ ನಡುವೆ ಕೆಲವು ಸಹಕಾರ ಪ್ರತಿಷ್ಠಾನದ ಕಾರ್ಯಕರ್ತರು ಸಹಕಾರ ಭಾರತಿ ಎಂದು ಮುದ್ರಿಸಿದ ಚೀಟಿಯ ಕೆಳ ಭಾಗದಲ್ಲಿ ಪ್ರತಿಷ್ಠಾನದ ವತಿಯಿಂದ ಸ್ಪರ್ಧಿಸಿದ ಸ್ಪರ್ಧಾಳುಗಳ ಹೆಸರು ಹೊಂದಿದ ಚೀಟಿಯನ್ನು ಮತದಾರರಿಗೆ ನೀಡಿ ವಂಚಿಸುತ್ತಿದ್ದರು ಎಂಬ ಆರೋಪ ಕೇಳಿ ಬಂದಿತು. ಸಹಕಾರ ಭಾರತಿ ಮುಖಂಡರು ಇಂತಹ ಚೀಟಿಯನ್ನು ಪತ್ತೆ ಹಚ್ಚಿ ದೂರು ನೀಡಿದರು. ಇದರಿಂದ ಕೆಲ ಕಾಲ ಸ್ಥಳದಲ್ಲಿ ಗೊಂದಲ, ಗದ್ದಲ ಏರ್ಪಟ್ಟಿತ್ತು. ಆ ಬಳಿಕ ಅಂತಹ ಚೀಟಿಯನ್ನು ಪತ್ತೆ ಹಚ್ಚಿ ವಶಪಡಿಸಿಕೊಂಡು ಪರಿಸ್ಥಿತಿ ನಿಯಂತ್ರಿಸಿದರು.