ಕನಕಪುರ: ವ್ಯಕ್ತಿಯೊಬ್ಬ ಆಯತಪ್ಪಿ ಅರ್ಕಾವತಿ ನದಿಗೆ ಬಿದ್ದು ಸಾವನ್ನಪ್ಪಿದ್ದಾರೆ. ತಾಲೂಕಿನ ಕಸಬಾ ಹೋಬಳಿಯ ತಿಗಳರ ಹೊಸಹಳ್ಳಿಯ ಮರಿಸ್ವಾಮಿ(30) ಮೃತಪಟ್ಟವರು. ಮಂಗಳವಾರ ರಾತ್ರಿ ತಿಗಳರ ಹೊಸಹಳ್ಳಿ ಹಾಗೂ ಅಕ್ಕ-ಪಕ್ಕದ ಗ್ರಾಮಗಳಿಂದ ಕೆಲ ಯುವಕರ ಗುಂಪೊಂದು ಟಿ.ಹೊಸಹಳ್ಳಿಯಲ್ಲಿ ಜೂಜಾಟ ಆಡುತ್ತಿದ್ದ ವೇಳೆ ಗ್ರಾಮಾಂತರ ಪೊಲೀಸರು ದಾಳಿ ಮಾಡಿದಾಗ ಅಲ್ಲಿಂದ ತಪ್ಪಿಸಿಕೊಂಡು ಓಡುವ ವೇಳೆ ಮರಿಸ್ವಾಮಿ ಕಾಲು ಜಾರಿ ಅರ್ಕಾವತಿ ನದಿಯಲ್ಲಿ ಬಿದ್ದಿದ್ದಾರೆನ್ನಲಾಗಿದೆ. ಮರಿಸ್ವಾಮಿ ಕುಟುಂಬದವರು ಸ್ನೇಹಿತರನ್ನ ವಿಚಾರಿಸಿದಾಗ ಯಾವುದೇ ಮಾಹಿತಿ ದೊರೆತಿರಲಿಲ್ಲ, ಗುರುವಾರ ಬೆಳಗ್ಗೆ ಮರಿಸ್ವಾಮಿಯ ಮೃತ ದೇಹ ನದಿಯಲ್ಲಿ ತೇಲುತ್ತಿರುವುದನ್ನು ಕಂಡ ಗ್ರಾಮಸ್ಥರು ಗ್ರಾಮಾಂತರ ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದು ಶವ ಹೊರ ತೆಗೆದಿದ್ದಾರೆ. ಪೊಲೀಸರು ಬೆನ್ನತ್ತಿದ್ದರಿಂದ ನನ್ನ ಪತಿ ಆಯತಪ್ಪಿ ನದಿಯಲ್ಲಿ ಬಿದ್ದು ಸಾವನ್ನಪ್ಪಿದ್ದು ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥ ರಿಗೆ ಶಿಕ್ಷೆ ಆಗಬೇಕೆಂದು ಮೃತಳ ಪತ್ನಿ ಹಾಗೂ ಕುಟುಂಬಸ್ಥರು ಆಗ್ರಹಿಸಿದ್ದಾರೆ.