ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಉದ್ಘಾಟಿಸಿದ ಸಾಹಿತಿ ಮಾರುತಿ
ಮಾದಕ ತಿನಿಸುಗಳ ಮೂಲಕ ಇಡೀ ವ್ಯವಸ್ಥೆ ಮೇಲೆ ಆರೋಗ್ಯದ ದುಷ್ಪರಿಣಾಮ ಎಲ್ಲೆಡೆ ಗೋಚರಿಸುತ್ತಿದ್ದು, ಶಾಲೆ ಕಾಲೇಜು ಯುವ ಸಮುದಾಯಗಳಲ್ಲಿ ಇದರ ಜಾಗೃತಿಗೆ ಸಮಾಜ ಸೇವಾ ಸಂಸ್ಥೆಗಳು ಹೆಚ್ಚು ಒತ್ತು ನೀಡಬೇಕಾದ ಜರೂರ ಅಗತ್ಯವಿದೆ ಎಂದು ಸಾಹಿತಿ ಪ್ರೊ.ಮಾರುತಿ ಶಿಡ್ಲಾಪೂರ ತಿಳಿಸಿದರು.
ಹಾನಗಲ್ಲ ತಾಲೂಕು ಯಳವಟ್ಟಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಆಯೋಜಿಸಿದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಾರೀರಿಕ ಮಾನಸಿಕ ಬೌದ್ಧಿಕ ದುರ್ವ್ಯಸನಗಳು ಇಡೀ ಸಮಾಜವನ್ನು ಕಾಡುತ್ತಿವೆ. ಮಕ್ಕಳನ್ನು ಮಾದಕಗಳಿಂದ ದೂರ ಇಡಲು ಪಾಲಕರು ಹರಸಾಹಸವನ್ನೇ ಮಾಡಬೇಕಾದ ಅನಿವಾರ್ಯತೆ ಇದೆ. ಎಲ್ಲವನ್ನೂ ಸರ್ಕಾರದಿಂದ ನಿರೀಕ್ಷಿಸದೇ ಸಮಾಜ ಈ ಕಾರ್ಯದಲ್ಲಿ ಜವಾಬ್ದಾರಿ ನಿರ್ವಹಿಸುವ ಅಗತ್ಯವಿದೆ. ಶಾಲೆ ಕಾಲೇಜುಗಳು ಯುವಕರನ್ನೇ ಗುರಿಯಾಗಿ ಮಾದಕ ವಸ್ತುಗಳ ಮಾರಾಟ ಜಾಲ ಇಡೀ ವ್ಯವಸ್ಥೆಯನ್ನೇ ತಲೆಕೆಳಗು ಮಾಡುತ್ತಿದೆ. ಇಂತಹ ವಸ್ತುಗಳ ಮಾರಾಟ ಕೂಡ ಅವ್ಯಾಹತವಾಗಿ ನಡೆದಿದ್ದು ಸರ್ಕಾರವೂ ಕೂಡ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾದಲ್ಲಿ ಕಾನೂನು ಹಾಗೂ ಸಮಾಜ ಒಟ್ಟಾಗಿ ಯೋಜಿಸಿ ಯೋಚಿಸಿದರೆ ಖಂಡಿತ ಯುವ ಸಮುದಾಯವನ್ನು ಮಾದಕದಿಂದ ಮುಕ್ತಗೊಳಿಸಲು ಸಾಧ್ಯ ಎಂದರು.ಅಧ್ಯಕ್ಷತೆವಹಿಸಿ ಮಾತನಾಡಿದ ಪ್ರಾಚಾರ್ಯ ಸಂಗಮೇಶ ಪೂಜಾರ, ವಿದ್ಯಾರ್ಥಿಗಳಿಗೆ ಒಳ್ಳೆಯ ಹವ್ಯಾಸಗಳಿಗಾಗಿ ಪ್ರೋತ್ಸಾಹ ಬೇಕಾಗಿದೆ. ನಮ್ಮ ಮುಂದಿನ ಮಕ್ಕಳಿಗೆ ಹೀರೋ ಯಾರಾಗಬೇಕು ಎಂಬ ಅರಿವು ಮೂಡಿಸಬೇಕಾಗಿದೆ. ಮಾದಕಗಳ ಪ್ರಚಾರ ಮಕ್ಕಳನ್ನು ಆಕರ್ಷಿಸುತ್ತಿರುವಾಗ ಇದರಿಂದ ದೂರವಿದ್ದು, ಒಳ್ಳೆಯ ಹವ್ಯಾಸಗಳ ಬಗೆಗೆ ವಿಚಾರ ವಿನಿಮಯ, ಅದರಿಂದಾಗುವ ಆರೋಗ್ಯದ ಹಿತ, ಮಾನಸಿಕ ನೆಮ್ಮದಿಯ ಬಗೆಗೆ ತಿಳಿವಳಿಕೆ ಬೇಕಾಗಿದೆ. ಮೊಬೈಲ್ ಕೂಡ ಒಂದು ಮಾದಕವಾಗಿ ಮಕ್ಕಳು ಯುವಕರನ್ನು ಕಾಡುತ್ತಿರುವಾಗ ಇಂತಹದರ ಬಗ್ಗೆ ತೀರ ಅಗತ್ಯವಾಗಿ ಜಾಗೃತಿ ಕಾರ್ಯಕ್ರಮಗಳು ಬೇಕು ಎಂದರು.