ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಆತ್ಮದಲ್ಲಿರುವ ಮನಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡಿದಾಗ ಮಾತ್ರ ಅದೇ ಒಂದು ಸರ್ವ ಶ್ರೇಷ್ಠ ನ್ಯಾಯಾಲಯವೆಂದು ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಾಧೀಶರು ಹಾಗೂ ಬಾಗಲಕೋಟೆ ಜಿಲ್ಲೆ ಆಡಳಿತಾತ್ಮಕ ನ್ಯಾಯಾಧೀಶರಾದ ಎಚ್.ಪಿ.ಸಂದೇಶ ಹೇಳಿದರು.ಜಿಲ್ಲಾ ನ್ಯಾಯಾಲಯದಲ್ಲಿ ನೂತನವಾಗಿ ಸೃಜಿಸಲ್ಪಟ್ಟ 4 ಮತ್ತು 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜನರಲ್ಲಿರುವ ನಂಬಿಕೆಗೆ ಹುಸಿ ಆಗದ ರೀತಿಯಲ್ಲಿ ಕೆಲಸ ಮಾಡಿದಾಗ ಮಾತ್ರ ಸಂತೃಪ್ತಿ ಸಿಗುತ್ತದೆ. ಈ ಭಾಗದ ಮುಳುಗಡೆಯಿಂದ ಸಾಕಷ್ಟು ಜನ ಸಂತ್ರಸ್ತರಾಗಿದ್ದು, ಅವರಿಗೂ ಸೂಕ್ತ ಪರಿಹಾರ ಒದಗಿಸಬೇಕಿದೆ. ಈ ನಿಟ್ಟಿನಲ್ಲಿ ನೊಂದ ಜನಕ್ಕೆ ತ್ವರಿತವಾಗಿ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಹೆಚ್ಚುವರಿ ನ್ಯಾಯಾಲಯ ಪ್ರಾರಂಭಿಸಲಾಗಿದೆ. ಭೂಸ್ವಾಧಿನಕ್ಕೆ ಸಂಬಂಧಿಸಿದ ಪ್ರಕರಣಗಳಿಗೆ ಆದ್ಯತೆ ಕೊಡಬೇಕೆಂದು ಹೇಳಿದರು.ಬಾಗಲಕೋಟೆ ಜಿಲ್ಲೆಯಲ್ಲಿ ಒಟ್ಟು 7 ಹೆಚ್ಚುವರಿ ನ್ಯಾಯಾಲಯದ ಪ್ರಸ್ತಾವನೆ ಇದ್ದು, ಇದರಲ್ಲಿ 4 ನ್ಯಾಯಾಲಯಕ್ಕೆ ಸರಕಾರದಿಂದ ಮಂಜೂರಾತಿ ದೊರೆತಿದೆ. ಅದರಲ್ಲಿ 3 ನ್ಯಾಯಾಲಯ ಪ್ರಾರಂಭಿಸಲಾಗಿದ್ದು, ಇನ್ನೊಂದು ನ್ಯಾಯಾಲಯ ಶೀಘ್ರದಲ್ಲಿಯೇ ಪ್ರಾರಂಭಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಉಳಿದ ನ್ಯಾಯಾಲಗಳ ಪ್ರಾರಂಭಕ್ಕೆ ಕ್ರಮವಹಿಸಲಾಗುವುದು. ಗುಳೇದಗುಡ್ಡ ನ್ಯಾಯಾಲಯಕ್ಕೆ 4 ಎಕರೆ, ಇಲಕಲ್ಲ ನ್ಯಾಯಾಲಯಕ್ಕೆ 6 ಎಕರೆ ಹಾಗೂ ಕೆರೂರಿಗೆ ಈಗಾಗಲೇ ಒಂದೂವರೆ ಎಕರೆ ಭೂಮಿ ಇದ್ದು ಹೆಚ್ಚುವರಿಯಾಗಿ 2 ಎಕರೆ ಜಮೀನು ಪಡೆಯಲಾಗಿದೆ ಎಂದು ತಿಳಿಸಿದರು.
ನಮ್ಮ ವೃತ್ತಿಯ ಜೊತೆಗೆ ಸಮಾಜಕ್ಕೆ ಧ್ವನಿಯಾಗುವ ಕಾರ್ಯ ಮಾಡಬೇಕು. ಜನ ನಮ್ಮನ್ನು ನೆನೆಸುವಂತಾಗಬೇಕು. ಯಾರು ಅನ್ಯಾಯಕ್ಕೆ ಒಳಗಾಗಿ ನ್ಯಾಯಾಲಯಕ್ಕೆ ಬರುತ್ತಾರೆ ಅವರ ನಂಬಿಕೆಯನ್ನು ಉಳಿಸಿಕೊಳ್ಳುವಂತಹ ಕೆಲಸ ಆಗಬೇಕು. ಅವರ ನಂಬಿಕೆಯನ್ನು ಉಳಿಸಿಕೊಳ್ಳದಿದ್ದರೆ, ನ್ಯಾಯಾಲಯದ ಸಫಲತೆ ಕಂಡುಕೊಳ್ಳದಿದ್ದರೆ, ನ್ಯಾಯಾಂಗದ ಅವಶ್ಯಕತೆ ಇಲ್ಲ ಎಂಬ ಭಾವನೆ ಬರುತ್ತದೆ. ನಂಬಿಕೆ ಬರುವ ರೀತಿಯಲ್ಲಿ ಕೆಲಸ ಮಾಡಲು ತಿಳಿಸಿದರು.ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಹಂಚಾಟಿ ಸಂಜೀವಕುಮಾರ ಮಾತನಾಡಿ, ನ್ಯಾಯಾಧೀಶರು ಮತ್ತು ವಕೀಲರು ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ. ಇರುವಂತಹ ವ್ಯವಸ್ಥೆಯಡಿ ತೀರ್ಮಾನ ಕೈಗೊಳ್ಳಲು ಚಿಂತನ ಮಂಥನ ಅವಶ್ಯಕತೆ ಇದೆ. ದಕ್ಷ ಮತ್ತು ನಿಪುಣ ನ್ಯಾಯಾಧೀಶರು ಆಗಬೇಕು. ಸಂತ್ರಸ್ತರಿಗೆ ತುರ್ತು ನ್ಯಾಯ ಒದಗಿಸುವಲ್ಲಿ ಚಿಂತನ ಮಂಥನ ಮಾಡಬೇಕಿದೆ. ನ್ಯಾಯಾಧೀಶ ಮತ್ತು ವಕೀಲರಲ್ಲಿ ಸೂಕ್ಷ್ಮತೆ ಇರಬೇಕು. ಇಲ್ಲವಾದಲ್ಲಿ ಸಮಾಜಕ್ಕೆ ಯಾವುದೇ ರೀತಿ ಕೊಡುಗೆ ನೀಡಲು ಸಾಧ್ಯವಾಗುವುದಿಲ್ಲ ಎಂದರು.
ಪ್ರಾರಂಭದಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ರಮೇಶ ಬದ್ನೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎನ್.ವಿ.ವಿಜಯ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ, ವಿಪ ಸದಸ್ಯ ಪಿ.ಎಚ್.ಪೂಜಾರ, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರ ಕೆ.ದುರ್ಗಾದಾಸ, ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ನಾರಾಯಣ ಕುಲಕರ್ಣಿ, ವಕೀಲರ ಸಂಘದ ಉಪಾದ್ಯಕ್ಷ ಪ್ರಶಾಂತ ಸೇರಿದಂತೆ ಜಿಲ್ಲೆ ಎಲ್ಲ ನ್ಯಾಯಾಧೀಶರು, ವಕೀಲರು ಉಪಸ್ಥಿತರಿದ್ದರು.