ಮಂಡ್ಯ ಮಂಜುನಾಥ
ಸಾವಯವ ಕೃಷಿ, ಸಾವಯವ ಗೊಬ್ಬರ, ಸಾವಯವ ಬೆಲ್ಲ ಎಂಬ ಹೆಸರುಗಳನ್ನು ಕೇಳಿದ್ದೇವೆ. ಇದೇನಿದು ‘ಸಾವಯವ ಹಾಲು’ ಎನ್ನುತ್ತಿದ್ದೀರಾ. ಇದು ಹಾಲಿನಲ್ಲಿರುವ ಪೋಷಕಾಂಶಗಳನ್ನು ಕಾಪಾಡುವ ವಿಧಾನ. ಗಾಳಿ-ಬೆಳಕು ಸೋಂಕಿಲ್ಲದೆ ಹಸುವಿನ ಕೆಚ್ಚಲಿನಿಂದ ಬಂದ ಹಾಲನ್ನು ಫಾರ್ಮ್ನಲ್ಲಿ ಶೀತಲೀಕರಿಸಿ ನೇರವಾಗಿ ಗ್ರಾಹಕರ ಮನೆಗೆ ತಲುಪುವುದೇ ‘ಸಾವಯವ ಹಾಲು’.
ಮಂಡ್ಯದ ಫಾರ್ಮ್ ಕನೆಕ್ಟ್ ಸಂಸ್ಥೆಯವರು ಇಂತಹದೊಂದು ಹೊಸ ರೂಪದ ಹಾಲಿಗೆ ಮೊದಲ ಬಾರಿಗೆ ನಾಂದಿ ಹಾಡಿದ್ದಾರೆ. ಫಾರ್ಮ್ ಕನೆಕ್ಟ್ನವರು ನಗರದ ವಿಕಸನ ಸಂಸ್ಥೆಯವರ ಜೊತೆಗೂಡಿ ಅಮೃತ ಸಮಾನವಾದ ಹಾಲನ್ನು ಪರಿಶುದ್ಧತೆಯ ಜೊತೆಗೆ ಪೋಷಕಾಂಶಗಳೊಂದಿಗೆ ಗ್ರಾಹಕರಿಗೆ ತಲುಸುವ ಧ್ಯೇಯವನ್ನು ಗುರಿಯಾಗಿಸಿಕೊಂಡಿದ್ದಾರೆ.ರೈತರ ನೋಂದಣಿ:
ಹಸುಗಳಿಗೆ ಹಸಿ ಮೇವು, ಒಣಮೇವು, ಮರಮೇವು, ರಸ ಮೇವು, ಕಡ್ಲೆ ಹಿಂಡಿ, ಜೋಳದ ನುಚ್ಚು ಸೇರಿದಂತೆ ೮ ರಿಂದ ೧೦ ಮಾದರಿಯ ಮೇವನ್ನು ಯಾವ ಪ್ರಮಾಣದಲ್ಲಿ ಹೇಗೆ ನೀಡಬೇಕು ಎಂಬುದನ್ನು ತಿಳಿಸಿಕೊಡುವರು. ಅದೇ ಮಾದರಿಯಲ್ಲಿ ನಿತ್ಯವೂ ಹಸುಗಳಿಗೆ ನೀಡುವ ಮೂಲಕ ಪೌಷ್ಟಿಕಾಂಶಯುಕ್ತ ಹಾಲು ಉತ್ಪಾದನೆಗೆ ಮಹತ್ವ ನೀಡಲಾಗುತ್ತದೆ.
ಹಾಲನ್ನು ಕರೆಯುವ ವಿಧಾನದಲ್ಲೂ ಹೆಚ್ಚಿನ ಜಾಗೃತಿ ವಹಿಸಲಾಗುತ್ತದೆ. ಹಸುವಿನ ಕೆಚ್ಚಲಿನಿಂದ ಹಾಲು ಗಾಳಿ-ಬೆಳಕಿನ ಸೋಂಕಿಲ್ಲದೆ ಹಾಲು ಕರೆಯುವ ಯಂತ್ರದ ಮೂಲಕ ೪ ಡಿಗ್ರಿ ಸೆಂಟಿಗ್ರೇಡ್ನಲ್ಲಿ ೫೦೦ ಲೀಟರ್ ಸಾಮರ್ಥ್ಯದ ಬಲ್ಕ್ ಮಿಲ್ಕ್ ಕೂಲರ್ಗೆ ನೇರವಾಗಿ ಸೇರುತ್ತದೆ. ಸಂಜೆ ಅದನ್ನು ಅಷ್ಟೇ ಜಾಗರೂಕತೆಯಿಂದ ಡೇರಿಗೆ ತಂದು ಹಾಲನ್ನು ಪರೀಕ್ಷೆಗೊಳಪಡಿಸಿ ಕಚ್ಚಾ ಹಾಲು ಮತ್ತು ಪಾಶ್ಚೀಕರಿಸಿದ ಹಾಲನ್ನು ಪ್ಯಾಕ್ ಮಾಡಿ ಗ್ರಾಹಕರ ಮನೆಗೆ ತಲುಪಿಸಲಾಗುತ್ತದೆ.
ಬೆಂಗಳೂರು, ಹೈದರಾಬಾದ್ನಲ್ಲಿ ಮಾರುಕಟ್ಟೆ
ಪ್ರತಿದಿನ ಪೂರೈಕೆಯಾಗುವ ೩೦೦೦ ಲೀಟರ್ ಹಾಲಿನಲ್ಲಿ ೧೦೦೦ ಲೀಟರ್ ಹಾಲು ತಯಾರಿಕೆಗೆ, ೩೦೦ ಲೀಟರ್ ಮೊಸರು, ಉಳಿದದ್ದು ಪನ್ನೀರ್, ಬೆಣ್ಣೆ, ತುಪ್ಪ ತಯಾರಿಕೆಗೆ ಬಳಸಲಾಗುತ್ತಿದೆ.
ಫಾರ್ಮ್ ಕನೆಕ್ಟ್ ಕಂಪನಿಗೆ ಹಾಲು ಪೂರೈಸುವ ರೈತರಿಗೆ ಪ್ರತಿ ಲೀಟರ್ಗೆ ೪೩ ರಿಂದ ೪೫ ರು. ನೀಡಲಾಗುತ್ತಿದೆ. ರೈತರಿಗೆ ಪ್ರತಿ ತಿಂಗಳು ಏನಿಲ್ಲವೆಂದರೂ ೨ ಲಕ್ಷ ರು. ಆದಾಯ ಬರುವಂತೆ ಮಾಡುವುದು ಕಂಪನಿಯ ಧ್ಯೇಯವಾಗಿದೆ. ಹಾಲಿನ ಹಣವನ್ನು ವಿಳಂಬ ಮಾಡದೆ ಆಯಾ ತಿಂಗಳೇ ರೈತರಿಗೆ ನೀಡಲಾಗುತ್ತಿದೆ. ಇದರಿಂದ ಉತ್ತೇಜನಗೊಂಡು ಹೆಚ್ಚಿನ ರೈತರು ಹಾಲು ಪೂರೈಸುವುದಕ್ಕೆ ಮುಂದಾಗುತ್ತಿದ್ದಾರೆ. ಪರಿಶುದ್ಧತೆ ಮತ್ತು ಗುಣಮಟ್ಟದಿಂದ ಕೂಡಿರುವುದರಿಂದ ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಬೇಡಿಕೆಯೂ ಹೆಚ್ಚಾಗುತ್ತಿರುವುದಾಗಿ ಫಾರ್ಮ್ ಕನೆಕ್ಟ್ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.
- ಮೂರ್ತಿ ಮುನಿಯಪ್ಪ, ಸಂಸ್ಥಾಪಕರು, ವ್ಯವಸ್ಥಾಪಕ ನಿರ್ದೇಶಕರು, ಫಾರ್ಮ್ ಕನೆಕ್ಟ್
ಹಾಲು ಪೂರೈಸುವ ರೈತರಿಗೆ ೪ ರಿಂದ ೫ ಎಕರೆ ಜಮೀನಿರಬೇಕು. ೨೦ ರಿಂದ ೨೫ ಹಸುಗಳನ್ನು ಸಾಕುತ್ತಿರಬೇಕು. ಅಂತಹವರನ್ನು ನೋಂದಣಿ ಮಾಡಿಕೊಂಡು ಅವರಿಗೆ ಹಸುವಿಗೆ ನೀಡುವ ಮೇವು, ಸಾಕಣೆ ಬಗ್ಗೆ ತರಬೇತಿ ನೀಡಲಾಗುತ್ತದೆ. ಹಾಲು ಮತ್ತು ಉತ್ಪನ್ನಗಳ ಗುಣಮಟ್ಟಕ್ಕೆ ಆದ್ಯತೆ ನೀಡುವುದು ನಮ್ಮ ಗುರಿ.- ಎನ್.ನಿತ್ಯಾನಂದ, ಮುಖ್ಯಸ್ಥರು, ಫಾರ್ಮ್ ಡೆವಲಪ್ಮೆಂಟ್ ಅಂಡ್ ಪ್ರೊಕ್ಯೂರ್ಮೆಂಟ್ ಆಫೀಸರ್
ಹಾಲು ಗಾಳಿ-ಬೆಳಕಿಗೆ ಬಂದ ಕೂಡಲೇ ಬ್ಯಾಕ್ಟೀರಿಯಾಗಳು ಅತಿಕ್ರಮಿಸುತ್ತವೆ. ಇದರಿಂದ ಹಾಲಿನ ಶುದ್ಧತೆ ಹಾಳಾಗುತ್ತದೆ. ಪೋಷಕಾಂಶಗಳು ನಶಿಸಿಹೋಗುತ್ತವೆ. ನಿರುಪಯುಕ್ತ ಹಾಲನ್ನು ನಾವು ಸೇವಿಸಿದಂತಾಗುತ್ತದೆ. ಅಮೃತ ಸಮಾನವಾದ ಹಾಲನ್ನು ಅಷ್ಟೇ ಜಾಗರೂಕತೆಯಿಂದ ಕಾಪಾಡಿದಾಗ ಪರಿಶುದ್ಧ, ಪೋಷಕಾಂಶಯುಕ್ತ ಹಾಲು ಸಿಗುತ್ತದೆ.- ಮಹೇಶ್ಚಂದ್ರಗುರು, ಸಂಸ್ಥಾಪಕರು, ವಿಕಸನ ಸಂಸ್ಥೆ