ಮಂಗಳವಾರ ಮಂಗಳೂರು ವಿಶ್ವವಿದ್ಯಾನಿಲಯದ ಮಹಾಕವಿ ರತ್ನಾಕರವರ್ಣಿ ಅಧ್ಯಯನ ಪೀಠ ಮತ್ತು ಎಸ್ ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ವತಿಯಿಂದ ಕನ್ನಡ ವಿಭಾಗದ ಸಭಾಂಗಣದಲ್ಲಿ ಭರತೇಶ ವೈಭವ ಜಿಜ್ಞಾಸೆ ೨ ಕೃತಿ ಬಿಡುಗಡೆಗೊಂಡಿತು.
ಕನ್ನಡಪ್ರಭ ವಾರ್ತೆ ಉಳ್ಳಾಲ
ಜೀವನದಲ್ಲಿ ಯಾವುದೇ ಕ್ರಿಯೆಯಲ್ಲಿ ತೊಡಗಿಕೊಂಡಾಗ ತಲ್ಲೀನತೆಯೇ ಯಶಸ್ಸಿಗೆ ಕಾರಣವಾಗುತ್ತದೆ. ಲೌಕಿಕವಿರಲಿ ಅಲೌಕಿಕವಿರಲಿ ತಾದಾತ್ಮ್ಯವೇ ನಿಜವಾದ ಅಧ್ಯಾತ್ಮ. ರತ್ನಾಕರವರ್ಣಿ ಭರತೇಶ ವೈಭವದಲ್ಲಿ ಈ ತತ್ವವನ್ನು ನಿರೂಪಿಸಿದ್ದಾನೆ ಎಂದು ವಿದ್ವಾಂಸ ಪ್ರೊ.ಬಿ.ಎ ವಿವೇಕ ರೈ ಹೇಳಿದ್ದಾರೆ.
ಮಂಗಳವಾರ ಮಂಗಳೂರು ವಿಶ್ವವಿದ್ಯಾನಿಲಯದ ಮಹಾಕವಿ ರತ್ನಾಕರವರ್ಣಿ ಅಧ್ಯಯನ ಪೀಠ ಮತ್ತು ಎಸ್ ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ವತಿಯಿಂದ ಕನ್ನಡ ವಿಭಾಗದ ಸಭಾಂಗಣದಲ್ಲಿ ನಡೆದ ಭರತೇಶ ವೈಭವ ಜಿಜ್ಞಾಸೆ ೨ ಕೃತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಕವಿ ರತ್ನಾಕರವರ್ಣಿ ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಕರಾವಳಿಯಿಂದ ಮೂಡಿ ಬಂದ ಮಹತ್ವದ ಹೆಸರು. ತೆಲುಗು, ತುಳು, ಕನ್ನಡ ಹೀಗೆ ಭಾಷಾ ಸಮನ್ವಯದ ಆಶಯ ಆತನ ಕೃತಿಯಲ್ಲಿ ಮೂಡಿ ಬಂದಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್ ಧರ್ಮ ಕನ್ನಡ ಭಾಷೆ ಸಾಹಿತ್ಯ ಗುಂಪುಗಳಾಗಿ ಒಡೆಯದೆ ಒಳಗೊಳ್ಳುವ ಸಮನ್ವಯದ ಆಶಯವನ್ನು ಹೊಂದಿದೆ. ಸಾಹಿತ್ಯ ವಿದ್ಯಾರ್ಥಿಗಳಿಗೆ ಸಾಹಿತ್ಯವೇ ದೇವರು ಬೇರೆ ಧರ್ಮವಿಲ್ಲ ಎಂದರು.
ಕರ್ನಾಟಕ ಜಾನಪದ ಅಕಾಡೆಮಿಯ ಜಿಶಂಪ ಜಾನಪದ ತಜ್ಞ ಪ್ರಶಸ್ತಿಗೆ ಭಾಜನರಾದ ಪ್ರೊ.ಕೆ ಚಿನ್ನಪ್ಪ ಗೌಡ ಇವನ್ನು ಗೌರವಿಸಲಾಯಿತು. ಕರ್ನಾಟಕ ಸರಕಾರ ಕೊಡಮಾಡುವ ಕನಕಶ್ರೀ ಪ್ರಶಸ್ತಿ ಪಡೆದ ಪ್ರೊ.ಬಿ ಶಿವರಾಮ ಶೆಟ್ಟಿ ಇವರನ್ನು ಗೌರವಿಸಲಾಯಿತು. ಎಸ್ ವಿಪಿ ಕನ್ನಡ ಅಧ್ಯಯನ ಅಧ್ಯಕ್ಷ ಡಾ.ಸೋಮಣ್ಣ, ಡಾ.ನಾಗಪ್ಪ ಗೌಡ, ಡಾ.ಧನಂಜಯ ಕುಂಬ್ಳೆ ಇದ್ದರು.
ರತ್ನಾಕರವರ್ಣಿ ಪೀಠದ ಸಂಯೋಜಕ ಪ್ರೊ.ಸೋಮಣ್ಣ ಹೊಂಗಳ್ಳಿ ಸ್ವಾಗತಿಸಿದರು. ರತ್ನಾಕರವರ್ಣಿ ಪೀಠದ ಸಂಶೋಧನ ಸಹಾಯಕ ಪ್ರಸಾದ್ ವಂದಿಸಿದರು. ಡಾ.ಯಶುಕುಮಾರ್ ನಿರೂಪಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.