ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರು ಹೊರವಲಯದ ಕೋಟೆಕಾರು ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಮುಂಬಯಿ ಮೂಲದ ಮೂವರು ದರೋಡೆಕೋರರನ್ನು ಮಂಗಳೂರು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಇದರೊಂದಿಗೆ ಕಳೆದ ನಾಲ್ಕು ದಿನಗಳಿಂದ ನಡೆಸುತ್ತಿದ್ದ ಮಂಗಳೂರು ಪೊಲೀಸರ ಮಹತ್ವದ ಕಾರ್ಯಾಚರಣೆ ಯಶಸ್ಸು ಕಂಡಿದೆ. ಈ ಪ್ರಕರಣದಲ್ಲಿ ಪರಾರಿಯಾಗಿದ್ದ ದರೋಡೆಕೋರರ ಪೈಕಿ ಓರ್ವನನ್ನು ಮುಂಬೈನಲ್ಲಿ ಹಾಗೂ ಇಬ್ಬರನ್ನು ತಮಿಳುನಾಡಿನ ಮಧುರೈನಲ್ಲಿ ಬಂಧಿಸುವಲ್ಲಿ ಪೊಲೀಸ್ ತಂಡ ಸಫಲವಾಗಿದೆ. ಮುಂಬೈ ಮೂಲದ ಮುರುಗಂಡಿ ತೇವರ್(36) ಈ ಪ್ರಕರಣದ ಪ್ರಮುಖ ಕಿಂಗ್ಪಿನ್ ಆಗಿದ್ದಾನೆ. ಡೊಂಬಿವಿಲಿ ಪಶ್ಚಿಮದ ಯೋಸುವ ಯಾನೆ ರಾಜೇಂದ್ರನ್(35) ಹಾಗೂಮುಂಬೈ ತಿಲಕ್ ನಗರದ ಕಣ್ಣನ್ ಮಣಿ(36) ತಮಿಳುನಾಡಿನಲ್ಲಿ ಬಂಧಿತರಾಗಿದ್ದಾರೆ. ಇವರು ಮುಂಬಯಿ ಧಾರಾವಿಯ ಡೆಡ್ಲಿ ಗ್ಯಾಂಗ್ ತಂಡದ ಸದಸ್ಯರು ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಬಂಧಿತರಿಂದ ಫಿಯೆಟ್ ಕಾರು, ಎರಡು ಗೋಣಿಚೀಲ ನಗದು, ಚಿನ್ನ, 2 ಪಿಸ್ತೂಲ್, ತಲ್ವಾರ್ ಹಾಗೂ ಇತರ ಸೊತ್ತುಗಳನ್ನು ಜಫ್ತಿ ಮಾಡಲಾಗಿದೆ ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.
ದರೋಡೆಗಾಗಿಯೇ ಮಂಗ್ಳೂರಿಗೆ ಬಂದಿದ್ದರು:ದರೋಡೆಕೋರರು ದರೋಡೆಗೆಂದೇ ಮಂಗಳೂರಿಗೆ ಬಂದಿದ್ದರು. ದರೋಡೆ ಮಾಡಿ ಕೇರಳ ಮೂಲಕ ತಮಿಳುನಾಡಿಗೆ ಪರಾರಿಯಾಗಿದ್ದರು. ಪರಾರಿಯಾಗಲು ಮಹಾರಾಷ್ಟ್ರ ಮೂಲದ ಫಿಯೆಟ್ ಕಾರು ಬಳಸಿದ್ದರು. ಆರೋಪಿ ಮುರುಗಂಡಿ ಕಾರನ್ನು ತಿರುವನ್ವೇಲಿ ವರೆಗೆ ಕೊಂಡುಹೋಗಿದ್ದನು. ಗುಪ್ತಚರ ಇಲಾಖೆಯ ನೆರವಿನಲ್ಲಿ ಈ ಪ್ರಕರಣವನ್ನು ಬೇಧಿಸಲು ಸಾಧ್ಯವಾಗಿದೆ. ಸ್ಥಳೀಯರ ಬೆಂಬಲ ಇಲ್ಲದೆ ಈ ಕೃತ್ಯ ಮಾಡಲು ಸಾಧ್ಯವಿಲ್ಲ. ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುವುದು ಎಂದು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಸುದ್ದಿಗಾರರರಿಗೆ ತಿಳಿಸಿದರು.
ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ಪೊಲೀಸರು ಎಂಟು ಪ್ರತ್ಯೇಕ ತಂಡವನ್ನು ರಚಿಸಿದ್ದರು. ಕೇರಳ, ತಮಿಳುನಾಡು, ಮುಂಬೈ ಹಾಗೂ ಉತ್ತರ ಭಾರತದಲ್ಲಿ ಬಿರುಸಿನ ಕಾರ್ಯಾಚರಣೆ ನಡೆಸಲಾಗಿತ್ತು. ಅಲ್ಲದೆ ಸ್ಥಳೀಯ ಶಂಕಿತರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು.