ಮಾಣಿಪ್ಪಾಡಿ ₹150 ಕೋಟಿ ಪ್ರಕರಣ ಸಿಬಿಐಗೆ ನೀಡಿ

KannadaprabhaNewsNetwork | Published : Dec 18, 2024 12:50 AM

ಅನ್ವರ್ ಮಾಣಿಪ್ಪಾಡಿ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ₹150 ಕೋಟಿ ಆಮಿಷದ ಒಡ್ಡಿದ್ದಾರೆ ಎಂಬ ಆರೋಪ ನಿಜವಾಗಿದ್ದರೆ ರಾಜ್ಯ ಸರ್ಕಾರ ಆ ಕೇಸ್‌ನ್ನು ಸಿಬಿಐಗೆ ವಹಿಸಲಿ ಎಂದು ಮಾಜಿ ಡಿಸಿಎಂ ಕೆ.ಎಸ್‌. ಈಶ್ವರಪ್ಪ ಆಗ್ರಹಿಸಿದರು.

ಬಿ.ವೈ. ವಿಜಯೇಂದ್ರ ಆಮಿಷನೊಡ್ಡಿದ್ದರೆ ತನಿಖೆಯಾಗಲಿ । ಈ ವಿಚಾರದಲ್ಲಿ ಸಾಕಷ್ಟು ಗೊಂದಲಗಳಿವೆ: ಕೆ.ಎಸ್ ಈಶ್ವರಪ್ಪ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಅನ್ವರ್ ಮಾಣಿಪ್ಪಾಡಿ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ₹150 ಕೋಟಿ ಆಮಿಷದ ಒಡ್ಡಿದ್ದಾರೆ ಎಂಬ ಆರೋಪ ನಿಜವಾಗಿದ್ದರೆ ರಾಜ್ಯ ಸರ್ಕಾರ ಆ ಕೇಸ್‌ನ್ನು ಸಿಬಿಐಗೆ ವಹಿಸಲಿ ಎಂದು ಮಾಜಿ ಡಿಸಿಎಂ ಕೆ.ಎಸ್‌. ಈಶ್ವರಪ್ಪ ಆಗ್ರಹಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ರಾಜ್ಯದಲ್ಲಿ ನಡೆಯುತ್ತಿರುವ ವಕ್ಫ್ ವಿಚಾರದಲ್ಲಿ ಪ್ರಮುಖವಾಗಿ ಮೂರು ಅಂಶವಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರರವರು ಅನ್ವರ್ ಮಾಣಿಪ್ಪಾಡಿ ಹತ್ತಿರ ಹೋಗಿ ₹150 ಕೋಟಿ ನೀಡುವ ಆಮಿಷ ಒಡ್ಡಿದ್ದರು ಎಂಬಂತಹ ಆರೋಪದ ಸುದ್ದಿಗಳು ಹರಿದಾಡುತ್ತಿವೆ. ಅಷ್ಟೇ ಅಲ್ಲದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ವಿಚಾರ ಸಿಬಿಐ ತನಿಖೆ ಆಗಬೇಕು ಎಂದು ಹೇಳ್ತಾರೆ. ಅಸಲಿಗೆ ಯಾವುದೇ ಕೇಸ್‌ನ್ನು ಸಿಬಿಐಗೆ ಕೊಡೋದು ರಾಜ್ಯ ಸರ್ಕಾರದ ನಿರ್ಣಯದಿಂದಲೇ ಸಾಧ್ಯವಾಗುವುದು ಎಂದು ತಿಳಿಸಿದರು.

ಆದರೆ, ಮುಖ್ಯಮಂತ್ರಿಗಳು ಯಾವಾಗಲೂ ನನಗೂ ಸಿಬಿಐಗೂ ಸಂಬಂಧ ಇಲ್ಲ ಎನ್ನುವ ರೀತಿ ವರ್ತಿಸುತ್ತಿದ್ದಾರೆ. ಈ ವಿಚಾರದ ಬಗ್ಗೆ ಅನ್ವರ್ ಮಾಣಿಪ್ಪಾಡಿ ಪ್ರತಿ ಬಾರಿ ಒಂದೊಂದು ಹೇಳಿಕೆ ಕೊಡುತ್ತಿದ್ದಾರೆ. ಕೆಲವೊಮ್ಮೆ ಬಿ.ವೈ. ವಿಜಯೇಂದ್ರ ನನಗೆ ₹150 ಕೋಟಿ ಆಫರ್ ಮಾಡಿಲ್ಲ ಎಂದು ಹೇಳುತ್ತಾರೆ. ಒಮ್ಮೆ ಹಾಗೆ ಮಾಡಿದ್ದಾರೆ ಎಂದೂ ಹೇಳುತ್ತಾರೆ. ಇದು ಬಹಳ ಸೀರಿಯಸ್ ಆದ ವಿಚಾರ. ಈ ವಿಚಾರದಲ್ಲಿ ಸಾಕಷ್ಟು ಗೊಂದಲಗಳಿರುವುದರಿಂದ ಈ ಕೇಸನ್ನು ಸಿಬಿಐಗೆ ವಹಿಸಲಿ ಎಂದು ತಿಳಿಸಿದರು.

ರಾಜ್ಯದ ಮಠ ಮಂದಿರಗಳ ಆಸ್ತಿಯ ಪಹಣಿಯಲ್ಲಿ ಈಗ ವಕ್ಫ್ ಹೆಸರನ್ನು ಸೇರಿಸಲಾಗಿದೆ. ಆದರೆ, ಯಾವುದೇ ಕಾರಣಕ್ಕೂ ಮಠ ಮಂದಿರಗಳ ಆಸ್ತಿಗಳು ವಕ್ಫ್ ಆಸ್ತಿಗೆ ಸೇರಿರಲು ಸಾಧ್ಯವಿಲ್ಲ. ಹಾಗಾಗಿ ಅದರಲ್ಲಿರುವ ವಕ್ಫ್ ಎಂಬ ಹೆಸರನ್ನು ಕಿತ್ತು ಎಸೆಯಬೇಕು. ಮೇಲಾಗಿ ಅನ್ವರ್ ಮಾಣಿಪ್ಪಾಡಿ ವರದಿಯನ್ನು ಇದುವರಗೂ ಸದನದಲ್ಲಿ ಚರ್ಚೆ ನಡೆಸಿಲ್ಲ. ವಕ್ಫ್ ಭೂಮಿಯಲ್ಲಿ ಅನೇಕ ಹಗರಣಗಳು ನಡೆದಿದೆ ಎಂಬ ಮಾತು ಕೇಳಿ ಬರುತ್ತಿವೆ. ಹಾಗಾಗಿ ಅದನ್ನು ಸದನದಲ್ಲಿ ಮುಖ್ಯವಾಗಿ ಚರ್ಚೆ ಮಾಡಬೇಕು. ಹಾಗೆಯೇ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿದರು.

ರಾಜ್ಯದಲ್ಲಿ ಸರ್ಕಾರ ಸತ್ತಿದೆಯೋ ಬದುಕಿದೆಯೋ ಗೊತ್ತಿಲ್ಲ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸತ್ತಿದೆಯೋ ಬದುಕಿದೆಯೋ ಗೊತ್ತಿಲ್ಲ. ರಾಜ್ಯದಲ್ಲಿ ಏನು ಅಭಿವೃದ್ಧಿ ಆಗುತ್ತಿಲ್ಲ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಆಕ್ರೋಶ ಹೊರಹಾಕಿದರು.ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿ ಏನು ಅಭಿವೃದ್ಧಿ ಆಗುತ್ತಿಲ್ಲ. ಶಿವಮೊಗ್ಗದಲ್ಲಿ ರಸ್ತೆ ಮೇಲೆ ಗುಂಡಿ ಇದೆಯೋ ಅಥವಾ ಗುಂಡಿಯ ಮೇಲೆ ರಸ್ತೆಯಿದೆಯೋ ಎನ್ನುವುದೂ ಸಹ ಗೊತ್ತಾಗುತ್ತಿಲ್ಲ. ವಿವಿಧ ಇಲಾಖೆಗಳ ಅಭಿವೃದ್ಧಿಗೆ ನೀಡಬೇಕಾಗಿರುವ ಎಲ್ಲಾ ಹಣವನ್ನು ರಾಜ್ಯ ಸರ್ಕಾರ ಖರ್ಚು ಮಾಡಿಬಿಟ್ಟಿದೆ. ಇದರ ನಡುವೆ ಸಾವಿರಾರು ಕೋಟಿ ಹಣವನ್ನು ಅಭಿವೃದ್ಧಿಗೆ ಕೊಟ್ಟಿದ್ದೀವಿ ಅಂತ ಜಾಹೀರಾತು ನೀಡುತ್ತಿದ್ದಾರೆ. ರಾಜ್ಯ ಸರ್ಕಾರದ ಮಂತ್ರಿಗಳು ಈ ರಸ್ತೆಯಲ್ಲಿ ಓಡಾಡಿದರೆ ಗೊತ್ತಾಗುತ್ತೆ ರಸ್ತೆ ಹೇಗಿದೆ ಅಂತ ಎಂದು ಕಿಡಿಕಾರಿದರು.ಶಿವಮೊಗ್ಗ ಮಹಾನಗರಪಾಲಿಕೆಯ ಕೆಲ ಅಧಿಕಾರಿಗಳು ಈ ಸ್ವತ್ತನ್ನು ಮಾಡಿಸಿಕೊಡಲು ಲಕ್ಷ ಲಕ್ಷ ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ. ಪಾಲಿಕೆಯ ಆಡಳಿತ ಸ್ಥಿತಿ ಬಹಳ ಹದಗೆಟ್ಟಿದೆ. ಹಿಂದೆಲ್ಲಾ ಇ-ಸ್ವತ್ತು ಮಾಡಿಸಲು ಸಾವಿರಕ್ಕೆ ಬೇಡಿಕೆ ಇಡುತ್ತಿದ್ದರು. ಆದರೆ, ಇತ್ತೀಚೆಗೆ ಕೆಲ ಅಧಿಕಾರಿಗಳು ಲಕ್ಷ ರೂಪಾಯಿವರೆಗೂ ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ. ಇದು ಹೀಗೆ ಮುಂದುವರೆದರೆ ಮುಂದೊಂದು ದಿನ ಪಾಲಿಕೆಗೆ ಮುತ್ತಿಗೆ ಹಾಕುವ ಸಂದರ್ಭ ಬರುತ್ತದೆ ಎಂದು ಎಚ್ಚರಿಸಿದರು.ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಎಂ. ಶಂಕರ್, ಇ. ವಿಶ್ವಾಸ್, ಮಹಾಲಿಂಗಯ್ಯ ಶಾಸ್ತ್ರಿ, ಗಣೇಶ್, ಸಂತೋಷ್, ಶ್ರೀಕಾಂತ್, ಪ್ರದೀಪ್, ಕುಬೇರಪ್ಪ, ಪ್ರಕಾಶ್, ಶಿವಕುಮಾರ್, ಜಾಧವ್ ಮತ್ತಿತರರು ಇದ್ದರು.