ತುಮಕೂರು: ಭಾರತದ ಮಾಜಿ ಪ್ರಧಾನಿ ಡಾ.ಮನಮೋಹನಸಿಂಗ್ ಅವರ ನಿಧನಕ್ಕೆ ರಂಭಾಪುರಿ ಪೀಠದ ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜದೇಶಿ ಕೇಂದ್ರ ಶಿವಾಚಾರ್ಯ ಭಗವತ್ಪಾದರು ಸಂತಾಪ ವ್ಯಕ್ತಪಡಿಸಿದರು. ತುಮಕೂರಿನಲ್ಲಿ ನಡೆಯುತ್ತಿರುವ ಇಷ್ಠಲಿಂಗ ಪೂಜೆ ಮತ್ತು ಜನಜಾಗೃತಿ ಧರ್ಮ ಸಮಾರಂಭದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವ ಶ್ರೀಗಳು ಮನಮೋಹನ ಸಿಂಗ್ ಅವರ ನಿಧನ ವಾರ್ತೆ ತಿಳಿದು ಮಾಧ್ಯಮದವರೊಂದಿಗೆ ಮಾತನಾಡುತ್ತಾ ತಾಳ್ಮೆ, ಶಾಂತಿ ಮತ್ತು ಸಮಾಧಾನ ಚಿತ್ತರಾಗಿ ಅವರು ನಡೆಸಿದ ಆಡಳಿತ ಅಚ್ಚುಮೆಚ್ಚು ಎಂದರು. ಕಾಂಗ್ರೆಸ್ ಪಕ್ಷಕ್ಕೆ ಉತ್ತಮ ಹೆಸರನ್ನು ತಂದುಕೊಟ್ಟವರು. ಆರ್ಥಿಕ ಸಚಿವರಾಗಿ ಹಲವು ಸುಧಾರಣಾ ಕ್ರಮಗಳನ್ನು ಕೈಗೊಂಡರು. ಪಿ.ವಿ.ನರಸಿಂಹರಾವ್ ಅವರ ನಂತರ ಎರಡು ಅವಧಿಗೆ ಪ್ರಧಾನಿಯಾಗಿ ಸೇವೆ ಸಲ್ಲಿಸಿದರು. ಎಂತಹ ಸಮಸ್ಯೆಗಳೆ ಇರಲಿ ಸಮಾಧಾನ ಚಿತ್ತರಾಗಿ ಆಲಿಸಿ ಅವರು ತೆಗೆದುಕೊಳ್ಳುತ್ತಿದ್ದ ಕ್ರಮಗಳು ಮುತ್ಸದ್ಧಿತನದಿಂದ ಕೂಡಿರುತ್ತಿದ್ದವು ಎಂದು ತಿಳಿಸಿದರು.