ಕನ್ನಡಪ್ರಭ ವಾರ್ತೆ ಮಂಡ್ಯ
ಮಹಿಳೆಯರು ಆರ್ಥಿಕವಾಗಿ ಪ್ರಗತಿ ಸಾಧಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳಲ್ಲಿ ಹಲವು ಅವಕಾಶ ಕಲ್ಪಿಸಲಾಗಿದೆ. ಇದರ ಪ್ರಯೋಜನೆ ಪಡೆದು ಸ್ವಾವಲಂಬಿ ಜೀವನ ನಡೆಸಬೇಕು ಎಂದು ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್ ಹೇಳಿದರು.ನಗರದ ಜಿಪಂ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಮೃದ್ಧಿ ಸಂತೃಪ್ತಿ ಮಹಿಳಾ ಉದ್ಯಮಿಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ, ಮಹಿಳೆಯರಿಗೆ ಉದ್ಯೋಗ ಸೃಷ್ಟಿ ಮಾಡುವ ಹಲವು ಸ್ವ ಉದ್ಯೋಗ ಉಪಕರಣಗಳು- ಸೆಲ್ಕೋ ಸಂಸ್ಥೆಯಲ್ಲಿ ಲಭ್ಯವಿದೆ. ಸರ್ಕಾರಗಳು ಹಲವು ರೀತಿಯ ಸಹಾಯಧನ ನೀಡುವ ಅವಕಾಶಗಳಿವೆ ಎಂದರು.
ಹೆಣ್ಣುಮಕ್ಕಳು ನೆಮ್ಮದಿ ಜೀವನ ನಡೆಸಲು ಬಹಳಷ್ಟು ಕಷ್ಟ ಪಡುತ್ತಾರೆ. ಆರ್ಥಿಕವಾಗಿ ದುರ್ಬಲ ಹಾಗೂ ಮಾನಸಿಕವಾಗಿ ಕುಗ್ಗಿ ಜೀವನದ ಮೇಲೆ ಆಸಕ್ತಿಯನ್ನೇ ಕಳೆದುಕೊಂಡಿರುತ್ತಾರೆ. ಅಂತಹ ಹೆಣ್ಣುಮಕ್ಕಳಿಗೆ, ಮಹಿಳೆಯರು ನೆರವಾಗಲು ಸೆಲ್ಕೋ ಸಂಸ್ಥೆ ಸೌಲಭ್ಯ ಕಲ್ಪಿಸಿದೆ ಎಂದರು.ಸೆಲ್ಕೋ ಸಂಸ್ಥೆ ಡಿಜಿಎಂ ಗುರುಪ್ರಕಾಶ ಶೆಟ್ಟಿ ಮಾತನಾಡಿ, ಸಂಸ್ಥೆಯಲ್ಲಿ ಇರುವ ಜೀವನ ಆಧಾರಿತ ಸೌರ ಚಾಲಿತ ಉಪಕರಣಗಳಾದ ಹಾಲು ಕರೆವ ಯಂತ್ರ, ಕುಲುಮೆ ಯಂತ್ರ, ಬೆಣ್ಣೆ ಕಡೆವ ಯಂತ್ರ, ಹೊಲಿಗೆ ಯಂತ್ರ, ರೊಟ್ಟಿ ತಯಾರಿಕ ಯಂತ್ರ, ಶೀತಿಲಿಕರಣ ಯಂತ್ರ, ಕಬ್ಬಿನಹಾಲು ತೆಗೆವ ಯಂತ್ರ, ತರಕಾರಿ ಕತ್ತರಿಸುವ ಯಂತ್ರ, ಹೀಗೆ ಹೈನುಗಾರಿಕೆ, ಕೃಷಿ, ಆಹಾರ ಸಂಸ್ಕಾರಣ ಘಟಕ, ಜೀವನೋಪಾಯ ಘಟಕ, ಅಂಗವಿಕಲರಿಗೆ ಸಂಬಂದಿಸಿದ ಸೌರ ಉಪಕರಣಗಳು, ಉದ್ಯೋಗ ಸೃಷ್ಟಿ ಮಾಡುವ ಉಪಕರಣ ಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಒಟ್ಟು 300ಕ್ಕೂ ಹೆಚ್ಚು ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿದ್ದರು. ಮಂಡ್ಯ ಎನ್ಆರ್ಎಲ್ ಎಂ ಯೋಜನಾ ನಿರ್ದೇಶಕ ಸಂಜೀವಪ್ಪ, ಜಿಲ್ಲಾ ನಬಾರ್ಡ್ ಅಭಿವೃದ್ಧಿ ವ್ಯವಸ್ಥಾಪಕ ಹರ್ಷಿತಾ, ಜಿಲ್ಲಾ ನಲ್ಮ್ ಕೌಶಲ್ಯ ಅಭಿವೃದ್ಧಿ ಅಧಿಕಾರಿ ನಾಗಾನಂದ, ಜಂಟಿ ಕೃಷಿ ನಿರ್ದೇಶಕ ಅಶೋಕ್, ಕರ್ನಾಟಕ ಗ್ರಾಮೀಣ ಬ್ಯಾಂಕ್ ಪ್ರಾದೇಶಿಕ ಕಚೇರಿ ವವಸ್ಥಾಪಕ ಸಲೀಮ್ ರಾಜು, ಪಿಎಂ ಯೋಜನೆ ಅಶ್ವಿನ್ ಕುಮಾರ್, ಮಂಡ್ಯ ಶಾಖೆ ಸೆಲ್ಕೋ ಮ್ಯಾನೇಜರ್ ಅಭಿಲಾಷ್ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.