ಮರಿಯಮ್ಮನಹಳ್ಳಿ: ಕಲೆ ಎನ್ನುವುದು ಮನುಷ್ಯ ಹುಟ್ಟಿನಿಂದ ಸಾಯುವವರೆಗೂ ಏನೆಲ್ಲ ಚಟುವಟಿಕೆ ಮಾಡುತ್ತಾನೋ ಅವೆಲ್ಲ ರಂಗಭೂಮಿಯಲ್ಲಿ ಕಲಾವಿದನ ಪಾತ್ರಗಳೇ ಆಗಿವೆ. ಅಂಥ ವಿವಿಧ ಕಲೆಗಳ ತಾಯಿಯಂತಿರುವುದೇ ರಂಗಭೂಮಿ ಕಲೆ ಎಂದು ಹಿರಿಯ ರಂಗಕಲಾವಿದೆ ಬಿ.ಶಾರದಮ್ಮ ಹೇಳಿದರು.
ಇಲ್ಲಿನ 7ನೇ ವಾರ್ಡಿನಲ್ಲಿರುವ ಸವಿತಾ ಸಮಾಜದ ಸಮುದಾಯ ಭವನದಲ್ಲಿ ರಂಗಬಿಂಬ ಟ್ರಸ್ಟ್ ಬುಧವಾರ ಹಮ್ಮಿಕೊಂಡಿದ್ದ ವಿಶ್ವರಂಗಭೂಮಿ ದಿನಾಚರಣೆ ಹಾಗೂ ರಂಗಗೀತೆಗಳ ಗಾಯನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ರಂಗಭೂಮಿಯ ಮೂಲಕ ಕಲಾವಿದ ಉತ್ತಮ ಬದುಕು ರೂಪಿಸಿಕೊಳ್ಳುವ ಮತ್ತು ಉತ್ತಮ ಹೆಸರನ್ನು ಸಂಪಾದಿಸಿಕೊಳ್ಳುವ ಅವಕಾಶವಿದೆ. ನಾವು ರಂಗಭೂಮಿಯನ್ನು ಎಷ್ಟು ಪ್ರೀತಿಸುತ್ತೇವೆಯೋ ಅಷ್ಟೇ ಸಂತೋಷ, ನೆಮ್ಮದಿ ರಂಗಭೂಮಿ ಕಲಾವಿದರಿಗೆ ನೀಡುತ್ತದೆ ಎಂದು ಅವರು ಹೇಳಿದರು.ರಂಗಚೌಕಿ ಕಲಾ ಟ್ರಸ್ಟ್ನ ಕಾರ್ಯದರ್ಶಿ ಪುಷ್ಪ ಪಿ. ಸರದಾರ್ ರಂಗಭೂಮಿ ಮತ್ತು ವರ್ತಮಾನದ ತಲ್ಲಣಗಳು ವಿಷಯ ಕುರಿತು ಉಪನ್ಯಾಸದಲ್ಲಿ ಮಾತನಾಡಿ, ರಂಗಭೂಮಿ ವಿಶಾಲವಾಗಿದೆ. ಇಂದು ನಾನಾ ರೂಪಾಂತರಗಳ ಮೂಲಕ ತನ್ನ ಜೀವಂತಿಕೆ ಕಾಪಾಡಿಕೊಂಡಿದೆ. ರಂಗಭೂಮಿ ಕಲೆಯು ಅನೇಕ ವರ್ಷಗಳ ಇತಿಹಾಸ, ಪರಂಪರೆ ಹೊಂದಿದೆ. ರಂಗಭೂಮಿಯು ಒಳ್ಳೆಯ ಸಂದೇಶಾತ್ಮಕ ತತ್ವಗಳ ಪ್ರತಿಪಾದನೆಯ ಜತೆಗೆ ಜನರಿಗೆ ಉತ್ತಮ ಸಂದೇಶ ನೀಡುವಲ್ಲಿ ರಂಗಭೂಮಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅವರು ತಿಳಿಸಿದರು.ರಂಗಭೂಮಿಗೆ ವಿಶೇಷವಾದ ಶಕ್ತಿಯಿದ್ದು, ಅದು ನಮ್ಮ ವ್ಯಕ್ತಿತ್ವ ವಿಕಾನದ ಜೊತೆಗೆ ಉತ್ತಮ ಮೌಲ್ಯಗಳನ್ನು ಬಿತ್ತುತ್ತದೆ. ನಾವು ನಮ್ಮ ಬದುಕಿನ ಜೊತೆಯೊಂದಿಗೆ ರಂಗಭೂಮಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಮೂಲಕ ರಂಗಭೂಮಿ ಉಳಿವಿಗೆ ಪ್ರತಿಯೊಬ್ಬರು ಮುಂದಾಗಬೇಕು ಎಂದು ಅವರು ಹೇಳಿದರು.ಕಲಾವಿದ ಹಾಗೂ ನಿವೃತ್ತ ಶಿಕ್ಷಕ ಕೆ.ನಾಗೇಶ್ ಮಾತನಾಡಿ, ಕಲೆ ಕೇವಲ ಮನರಂಜನೆಗಾಗಿ ಅಲ್ಲ. ಮನೋವಿಕಾಸಕ್ಕಾಗಿ, ಮೌಲ್ಯಗಳ ಬೆಳವಣಿಗೆ ಪೂರಕವಾಗಿದೆ. ರಂಗಕಲೆಯು ಸಮಾಜದಲ್ಲಿಯ ಅಂಕುಡೊಂಕುಗಳನ್ನು ಸರಿಪಡಿಸಿ ಮೌಲ್ಯಯುತ ಸ್ವಸ್ತ ಸಮಾಜ ನಿರ್ಮಾಣದಲ್ಲಿ ರಂಗಭೂಮಿ ಪಾತ್ರ ಬಹು ದೊಡ್ಡದು ಎಂದು ಅವರು ಹೇಳಿದರು.ಸಂಗೀತ ಕಲಾವಿದ ಸಂತೋಷ್ ಕುಮಾರ್ ಚಂದುಕರ ಮಾತನಾಡಿದರು. ಸ್ಥಳೀಯ ಉದ್ಯಮಿ ವಸ್ತ್ರದ್ ಶಿವಶಂಕರಯ್ಯ ಸಭೆಯಲ್ಲಿ ಮುಖ್ಯಅತಿಥಿಗಳಾಗಿ ಭಾಗವಹಿಸಿದ್ದರು. ರಂಗಬಿಂಬ ಟ್ರಸ್ಟ್ನ ಅಧ್ಯಕ್ಷೆ ಎಂ. ಗಾಯಿತ್ರಿದೇವಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮದ ನಂತರ ರಂಗಗೀತೆ ಗಾಯನ ಕಾರ್ಯಕ್ರಮದಲ್ಲಿ ಗೊಲ್ಲರಹಳ್ಳಿಯ ಜಿ. ಮಲ್ಲಪ್ಪ ಮತ್ತು ಸಂಗಡಿಗರು ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ಗೊಲ್ಲರಹಳ್ಳಿಯ ಕೆ. ತಿಪ್ಪಣ್ಣ ಆಚಾರ್ ಹಾರ್ಮೋನಿಯಂ ಸಾಥ ನೀಡಿದರು. ಗೊಲ್ಲರಹಳ್ಳಿಯ ಜಿ. ಕೆ. ಮೌನೇಶ್ ತಬಲ ಸಾಥ ನೀಡಿದರು.ಸ್ಥಳೀಯ ಕಲಾವಿದರಾದ ಸಂತೋಷ್ ಕುಮಾರ್ ಚಂದುಕರ, ಚಂದ್ರಕಾಂತ, ಹನುಮಯ್ಯ, ತಿರುಮಲೇಶ್ ಸೇರಿದಂತೆ ಇತರರು ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.ಕಲಾವಿದರಾದ ಮಾಹಾಂತೇಶ್ ನೆಲ್ಲುಕುದುರೆ ಪ್ರಾರ್ಥಿಸಿದರು. ಸಿ.ಕೆ. ನಾಗರಾಜ ಸ್ವಾಗತಿಸಿದರು. ಕೆ. ಮಲ್ಲನಗೊಡ ವಂದಿಸಿದರು. ಹುರುಕೊಳ್ಳಿ ಮಂಜುನಾಥ ನಿರೂಪಿಸಿದರು.