ಹುತಾತ್ಮರ ತ್ಯಾಗ ಬಲಿದಾನದ ಹೋರಾಟ ಸ್ಮರಣೆ ಅಗತ್ಯ: ಗೋವಿಂದಪ್ಪ

KannadaprabhaNewsNetwork | Published : Jan 31, 2025 12:45 AM

ಸಾರಾಂಶ

ಮಹಾತ್ಮ ಗಾಂಧೀಜಿ ಸತ್ಯ, ಅಹಿಂಸೆ, ಉಪವಾಸದಂಥ ಹೋರಾಟದ ಮೂಲಕ ದೇಶಕ್ಕೆ ಸ್ವಾತಂತ್ರ‍್ಯ ತಂದುಕೊಟ್ಟವರಲ್ಲಿ ಅಗ್ರಗಣ್ಯರು.

ಕೂಡ್ಲಿಗಿ: ಮಹಾತ್ಮ ಗಾಂಧೀಜಿ ಸತ್ಯ, ಅಹಿಂಸೆ, ಉಪವಾಸದಂಥ ಹೋರಾಟದ ಮೂಲಕ ದೇಶಕ್ಕೆ ಸ್ವಾತಂತ್ರ‍್ಯ ತಂದುಕೊಟ್ಟವರಲ್ಲಿ ಅಗ್ರಗಣ್ಯರು. ಹುತಾತ್ಮರ ಹೋರಾಟ, ತ್ಯಾಗ, ಬಲಿದಾನವನ್ನು ಸ್ಮರಿಸಬೇಕು ಎಂದು ಮೊಳಕಾಲ್ಮೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸೂರಮ್ಮನಹಳ್ಳಿ ಗೋವಿಂದಪ್ಪ ತಿಳಿಸಿದರು.ಅವರು ಪಟ್ಟಣದ ಗಾಂಧೀಜಿ ಚಿತಾಭಸ್ಮವಿರುವ ಹುತಾತ್ಮರ ರಾಷ್ಟ್ರೀಯ ಸ್ಮಾರಕದಲ್ಲಿ ತಾಲೂಕು ಆಡಳಿತ ಮತ್ತು ಗಾಂಧಿ ಸ್ಮಾರಕ ಸಮಿತಿಯಿಂದ ಗುರುವಾರ ಆಯೋಜಿಸಿದ್ದ ಹುತಾತ್ಮರ ದಿನಾಚಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಾಥೂರಾಮ್ ಗೋಡ್ಸೆ ಅವರಿಂದ ಗಾಂಧೀಜಿ ಹತರಾದ ದಿನವನ್ನು ಹುತಾತ್ಮರ ದಿನ ಅಥವಾ ಸರ್ವೋದಯ ದಿನವಾಗಿ ಆಚರಿಸಲಾಗುತ್ತಿದೆ. ಸ್ವಾತಂತ್ರ್ಯ ಚಳವಳಿ ಹಾಗೂ ದೇಶದ ರಕ್ಷಣೆಗಾಗಿ ತ್ಯಾಗ, ಬಲಿದಾನದ ಮೂಲಕ ಹುತಾತ್ಮರಾದವರನ್ನು ಸ್ಮರಿಸುವ ದಿನ. ಈಗಿನ ಯುವ ಪೀಳಿಗೆಯು ಗಾಂಧೀಜಿ ಸೇರಿ ರಾಷ್ಟ್ರಕ್ಕಾಗಿ ಹುತಾತ್ಮರಾದವರ ಆದರ್ಶಗಳನ್ನು ಪಾಲಿಸಬೇಕಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕನ್ನಡಪ್ರಭ ಹುಬ್ಬಳ್ಳಿ ಆವೃತ್ತಿಯ ಸ್ಥಾನಿಕ ಸಂಪಾದಕ ಮಲ್ಲಿಕಾರ್ಜುನ ಸಿದ್ದಣ್ಣವರ್, ತಾಪಂ ಇಒ ಕೆ.ನರಸಪ್ಪ, ಗಾಂಧಿ ಸ್ಮಾರಕ ಸಮಿತಿ ಅಧ್ಯಕ್ಷ ಡಿ.ನಾಗರಾಜಪ್ಪ ತಹಸೀಲ್ದಾರ್ ಎಂ.ರೇಣುಕಾ, ಗ್ರೇಡ್ 2 ತಹಸೀಲ್ದಾರ್ ವಿ.ಕೆ. ನೇತ್ರಾವತಿ, ಪಪಂ ಅಧ್ಯಕ್ಷ ಕಾವಲ್ಲಿ ಶಿವಪ್ಪನಾಯಕ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಶ್ರೀಕಂಠಾಪುರ ವೆಂಕಟೇಶ್, ಪಪಂ ಮುಖ್ಯಾಧಿಕಾರಿ ಎಂ.ಕೆ. ಮುಗಳಿ, ಎಸ್.ಟಿ. ಇಲಾಖೆಯ ಅಧಿಕಾರಿ ಮೆಹಬೂಬ್ ಬಾಷಾ, ಗಾಂಧಿಸ್ಮಾರಕ ಸಮಿತಿಯ ರಾಘವೇಂದ್ರ, ವಾಲಿಬಾಲ್ ವೆಂಕಟೇಶ್, ಬಿಇಒ ಪದ್ಮನಾಭ ಕರಣಂ, ಭಾರತ ಸೇವಾದಳದ ಬ್ಯಾಳಿ ವಿಜಯಕುಮಾರ್ ಗೌಡ, ಶಿಕ್ಷಕ ಎಚ್.ಹನುಮಂತಪ್ಪ, ತಾಪಂ ನಿವೃತ್ತ ಇಒ ಜಿ.ಎಂ. ಬಸಣ್ಣ, ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಪಾಲ್ತೂರು ಶಿವರಾಜ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ತಳವಾರ ಶರಣಪ್ಪ, ಪತಂಜಲಿ ಯೋಗ ಸಮಿತಿ ಸಂಚಾಲಕಿ ಬ್ಯಾಳಿ ಗೌರಮ್ಮ, ವಿರೂಪಾಕ್ಷಪ್ಪ, ಉಪನ್ಯಾಸಕ ಕೊಟ್ರಪ್ಪನವರ ನಾಗರಾಜ್, ಸಂದೀಪ್ ರಾಯಸಂ, ಐಲಿ ರವಿಕುಮಾರ್, ಶಿಕ್ಷಕಿಯರಾದ ಚೌಡಮ್ಮ, ನಾಗರತ್ನ, ರಿಯಾಜ್ ಪಾಷಾ, ಪರ್ತಕರ್ತರಾದ ಕೃಷ್ಣ ಲಮಾಣಿ, ಭೀಮಣ್ಣ ಗಜಾಪುರ, ಹುಡೇಂ ಕೃಷ್ಣಮೂರ್ತಿ, ಬಿ.ನಾಗರಾಜ, ತಾಲೂಕು ಕಸಾಪ ಅಧ್ಯಕ್ಷ ಅಂಗಡಿ ವೀರೇಶ ಮತ್ತಿತರರು ಹುತಾತ್ಮರ ಸ್ಮಾರಕಕ್ಕೆ ಅಶೃತರ್ಪಣ ಸಲ್ಲಿಸಿದರು.

ಕೂಡ್ಲಿಗಿಯಲ್ಲಿ ವಿಶೇಷ: ದೇಶದಲ್ಲೇ ದೆಹಲಿಯ ರಾಜ್‌ಘಾಟ್ ಬಿಟ್ಟರೆ ಗಾಂಧೀಜಿ ಚಿತಾಭಸ್ಮ ಕೂಡ್ಲಿಗಿಯಲ್ಲಿ ಇರುವುದು ವಿಶೇಷ. ಸಂಗೀತ ಶಿಕ್ಷಕಿ ರೋಜಾರಾಣಿ ಹಾಗೂ ವಿದ್ಯಾರ್ಥಿಗಳು ‘ರಘುಪತಿ ರಾಘವ ರಾಜಾರಾಮ್’ ಗೀತೆ ಹಾಡಿದರು. ನಂತರ ಎರಡು ನಿಮಿಷ ಕಾಲ ಮೌನಾಚರಣೆ ಸಂದರ್ಭದಲ್ಲಿ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಇಳಿಸಲಾಯಿತು.

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಅಕ್ಕ ಶಶಿಕಲಾ ಭಗವದ್ಗೀತೆಯ ಅಧ್ಯಾಯ ಓದಿದರು. ಅಬೀದ್ ಅಲಿ ಅವರಿಂದ ಕುರಾನ್ ಪಠಿಸಿದರು. ಸಂತ ಮೈಕಲ್ ಚರ್ಚ್ ಫಾ. ವಿಜಯರಾಜ್ ಅವರಿಂದ ಬೈಬಲ್ ಪಠಣ, ಜೈನ- ಬೌದ್ಧ ಧರ್ಮದ ಪ್ರಾರ್ಥನೆಯನ್ನು ಪ್ರಕಾಶ್ ನೆರವೇರಿಸಿದರು.

Share this article