ಸಾಮೂಹಿಕ, ಅಂತರ್ಜಾತಿ ವಿವಾಹಗಳು ಸಮಾನತೆಗೆ ಸಹಕಾರಿ: ಸಿಎಂ ಸಿದ್ದರಾಮಯ್ಯ

KannadaprabhaNewsNetwork |  
Published : Dec 08, 2025, 02:15 AM IST
ಮದಮದಮದಮ | Kannada Prabha

ಸಾರಾಂಶ

ಸರ್ವ ಧರ್ಮಗಳ ವಧು-ವರರು ಸಾಮೂಹಿಕ ವಿವಾಹ ಆಗುವುದರೊಂದಿಗೆ ಸಮಾಜದಲ್ಲಿ ಅಂತರ್ಜಾತಿ ಮದುವೆಗಳು ಆಗಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ನವಲಗುಂದ: ಸರಳ, ಸಾಮೂಹಿಕ ಮತ್ತು ಅಂತರ್ಜಾತಿ ವಿವಾಹಗಳು ಸಮಾಜದಲ್ಲಿ ಸಮಾನತೆ ತರಲು ಸಹಕಾರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ಪಟ್ಟಣದ ಮಾಡೆಲ್ ಹೈಸ್ಕೂಲ್ ಮೈದಾನದಲ್ಲಿ ಜರುಗಿದ ಶಾಸಕ ಎನ್.ಎಚ್. ಕೋನರಡ್ಡಿ ಅವರು ಮಗ ನವೀನಕುಮಾರ ಅವರ ಆರತಕ್ಷತೆ ಅಂಗವಾಗಿ ಆಯೋಜಿಸಿದ್ದ 75 ಜೋಡಿಗಳ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ವಧು-ವರರಿಗೆ ಶುಭಾಶಯ ಕೋರಿ ಮಾತನಾಡಿದರು.

ಬಸವಣ್ಣನವರು ಕೆಳ ಜಾತಿಯವರೊಂದಿಗೆ ಮೇಲ್ಜಾತಿಯವರ ಮದುವೆ ಮಾಡಿಸಿ, ಅಂದೇ ಸಮಾಜದಲ್ಲಿ ಸಮಾನತೆ ತರಲು ಮುನ್ನುಡಿ ಬರೆದರು. ಸರ್ವ ಧರ್ಮಗಳ ವಧು-ವರರು ಸಾಮೂಹಿಕ ವಿವಾಹ ಆಗುವುದರೊಂದಿಗೆ ಸಮಾಜದಲ್ಲಿ ಅಂತರ್ಜಾತಿ ಮದುವೆಗಳು ಆಗಬೇಕು. ಇದರಿಂದ ಸಮಾಜದ ಸರ್ವರಲ್ಲಿ ಸಮಾನತೆ ತರಲು ಸಹಾಯವಾಗುತ್ತದೆ ಎಂದರು.

ಇಲ್ಲಿನ ನಡೆದ 75 ಜೋಡಿಗಳ ಸಾಮೂಹಿಕ ಮದುವೆಯಲ್ಲಿ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮಾಜದವರೂ ಮದುವೆಯಾಗುತ್ತಿರುವುದು ಸಂತೋಷದ ಕ್ಷಣ ಎಂದ ಅವರು, ಸಮಾಜದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ, ಬೌದ್ಧರ ನಡುವೆ ಎಲ್ಲರೂ ಮನುಷ್ಯರು ಮನುಷ್ಯರಾಗಿ ಬದುಕಬೇಕು. ಸಮಾಜದಲ್ಲಿ ಜಾತಿ ವ್ಯವಸ್ಥೆ ಹೋಗಲಾಡಬೇಕು ಎಂದರು.

ಜಾತಿ ವ್ಯವಸ್ಥೆಯು ಹೋಗಬೇಕೆಂದರೆ ಅಂತರ್ಜಾತಿಯ ವಿವಾಹಗಳು ಹೆಚ್ಚು ಆಗಬೇಕು ಎಂದ ಅವರು, ಇಲ್ಲಿ ಮದುವೆಯಾದ ನೂತನ ದಂಪತಿ ಇಬ್ಬರೇ ಮಕ್ಕಳನ್ನು ಮಾಡಿಕೊಳ್ಳಬೇಕು. ಏಕೆಂದರೆ ಭಾರತದಲ್ಲಿ ಜನಸಂಖ್ಯೆ ಅತಿ ಹೆಚ್ಚಾಗುತ್ತ ಹೋಗುತ್ತಿದೆ ಎಂದು ಸಲಹೆ ಮಾಡಿದರು.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಮಾತನಾಡಿ, ಉಳಿ ಪೆಟ್ಟು ಬಿದ್ದಾಗಲೇ ಕಲ್ಲು ಶಿಲೆಯಾಗಲು ಸಾಧ್ಯ. ಇಲ್ಲಿ ನಿಮ್ಮೆಲ್ಲರ ಆಶೀರ್ವಾದ ಇಲ್ಲದೆ ಈ ಕಾರ್ಯಕ್ರಮ ಸಾಧ್ಯವಾಗುತ್ತಿರಲಿಲ್ಲ ಎಂದರು.

ಹೆಣ್ಣು ಒಂದು ಕಡೆ ಗಂಡು ಒಂದು ಕಡೆ ಇತ್ತು, ಅವರಿಬ್ಬರೂ ಸೇರಿ ವಧು-ವರರಾದರೆ, ಅಕ್ಕಿ ಒಂದು ಕಡೆ ಅರಿಶಿನ ಸೇರಿ ಮಂತ್ರಾಕ್ಷತೆಯಾಯಿತು. ಮದುವೆಯ ಖರ್ಚಿನ ಹಣದಿಂದ ಸ್ವಂತ ಉದ್ಯೋಗವನ್ನು ಮಾಡುವ ಮೂಲಕ ಹೊಸ ಜಗತ್ತಿನಲ್ಲಿ ಮತ್ತೊಬ್ಬರಿಗೆ ಉದ್ಯೋಗ ಕೊಡುವ ರೀತಿಯಲ್ಲಿ ಬೆಳೆಯಿರಿ ಎಂದರು.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ಶಾಸಕ ಎನ್.ಎಚ್. ಕೋನರಡ್ಡಿ ಅವರ ಸುಪುತ್ರನ ಆರತಕ್ಷತೆ ನಡೆಯುತ್ತಿರುವ ದಿವಸ 75 ಜೋಡಿಗಳ ಸಾಮೂಹಿಕ ವಿವಾಹವನ್ನು ಮಾಡಿದ್ದು, ಇತರರಿಗೆ ಮಾದರಿ ಎಂದರು.

ಕೋನರೆಡ್ಡಿ ಅವರ ಮಗ ಮತ್ತು ಅವರ ಪತ್ನಿ ಸೇರಿದಂತೆ ಇಲ್ಲಿ ಮದುವೆಯಾದ ನವದಂಪತಿಗಳಿಗೆ ಅಭಿನಂದನೆಗಳು ಎಂದರು.

ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿ, 75 ಜೋಡಿಯ ಸರ್ವಧರ್ಮ ಸಾಮೂಹಿಕ ವಿವಾಹ ನಾನು ಮಾಡಿಲ್ಲ. ಕ್ಷೇತ್ರದ ಜನತೆಯೇ ಮಾಡಿದ್ದಾರೆ. ಇಂದು ನವಲಗುಂದದಲ್ಲಿ ಇತಿಹಾಸ ಸೃಷ್ಟಿಸಿದಂತಾಗಿದೆ ಎಂದರು.

ಸಚಿವರಾದ ಕೆ.ಜೆ. ಜಾರ್ಜ್, ಎಚ್.ಸಿ. ಮಹಾದೇವಪ್ಪ, ಕೃಷ್ಣ ಬೈರೇಗೌಡ, ರಾಮಲಿಂಗಾರಡ್ಡಿ, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶಾಸಕರಾದ ಬಸವರಾಜ ರಾಯರೆಡ್ಡಿ, ಪ್ರಸಾದ ಅಬ್ಬಯ್ಯ, ಬಸವರಾಜ ಶಿವಣ್ಣವರ, ಹೆಸ್ಕಾಂ ಅಧ್ಯಕ್ಷ ಸೈಯದ್ ಅಜ್ಜಂಪೀರ ಖಾದ್ರಿ, ವಿಪ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ ಇದ್ದರು.

ವಿವಿಧ ಸಚಿವರು, ಶಾಸಕರು, ವಿಧಾನ ಪರಿಷತ್‌ ಸದಸ್ಯರು, ಮಾಜಿ ಸಚಿವರು, ಶಾಸಕರು, ವಿವಿಧ ಜನ್ರತಿನಿಧಿಗಳು, ಗಣ್ಯರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಮುಂದಿನ ಸಿಎಂ ಯಾರು?’ ಎನ್ನುವ ಬಗ್ಗೆಯೂ ರಾಜ್ಯದಲ್ಲಿ ಬೆಟ್ಟಿಂಗ್‌ - ನಿಯಂತ್ರಿಸಿ'
ಕ್ರೈಂ ಹೆಚ್ಚಳಕ್ಕೆ ಸಿಬ್ಬಂದಿ ಕೊರತೆ ಕಾರಣ : ಡಾ.ಜಿ.ಪರಮೇಶ್ವರ್‌