ಸಾಮೂಹಿಕ ವಿವಾಹ ಬಡವರ ಪಾಲಿನ ಆಶಾಕಿರಣ

KannadaprabhaNewsNetwork | Published : May 6, 2024 12:38 AM

ಸಾರಾಂಶ

34ನೇ ವರ್ಷದ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ ಬಣ್ಣನೆ

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಸಾಮೂಹಿಕ ವಿವಾಹಗಳು ಬಡವರ ಪಾಲಿನ ಆಶಾಕಿರಣ ಎಂದು ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಡಾ. ಬಸವಕುಮಾರ ಸ್ವಾಮೀಜಿ ಬಣ್ಣಿಸಿದರು.

ಬೃಹನ್ಮಠದ ಆವರಣದಲ್ಲಿನ ಅನುಭವ ಮಂಟಪದಲ್ಲಿ ಭಾನುವಾರ ಆಯೋಜಿಸಲಾಗಿದ್ದ 34ನೇ ವರ್ಷದ ಸಾಮೂಹಿಕ ಕಲ್ಯಾಣ ಮಹೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶ್ರೀ ಮಠದೊಂದಿಗೆ ಸಾರ್ವಜನಿಕರು ಇಂತಹ ಜನಪರ ಕಾರ್ಯಗಳಲ್ಲಿ ಪಾಲ್ಗೊಂಡು ಸರಳ ಪದ್ಧತಿಯಡಿ ದಾಂಪತ್ಯಕ್ಕೆ ಅಡಿ ಇಡುವುದರ ಮೂಲಕ ದುಂದುವೆಚ್ಚಕ್ಕೆ ಕಡಿವಾಣ ಹಾಕಲು ಮುಂದಾಗಿರುವುದು ಶ್ಲಾಘನೀಯ ಎಂದರು.

ಐತಿಹಾಸಿಕ ಚಿತ್ರದುರ್ಗ ಶ್ರೀ ಮುರುಘರಾಜೇಂದ್ರ ಬೃಹನ್ಮಠದ ಹಿಂದಿನ ಪೀಠಾಧಿಪತಿಗಳೆಲ್ಲರೂ ಸಹ ನಿರ್ಮೋಹ, ನಿರಹಂಕಾರ, ನಿಸ್ವಾರ್ಥತೆಯ ಮಹಾಸದ್ಗುಣ ಹೊಂದಿದವರು. ಸರಳತೆ, ಸಮಾನತೆ ಎಂಬ ಮಹಾತತ್ವದ ಹೊತ್ತು ನಡೆದು ಸಮಾಜಕ್ಕೆ ತಮ್ಮದೇ ಆದರ್ಶ ಪಥ ಬಿಟ್ಟು ಹೋಗಿದ್ದಾರೆ. ಅಂತಹ ದಾರಿ ಈಗಲೂ ಸಮಾಜಕ್ಕೆ ತೆರೆದುಕೊಂಡಿರುವುದಕ್ಕೆ ಸರಳ ಸಾಮೂಹಿಕ ಕಲ್ಯಾಣ ಮಹೋತ್ಸವವೇ ಸಾಕ್ಷಿ ಎಂದರು.

ಸರಳ ಮತ್ತು ಸರ್ವ ಸಮಾನತೆಯ ತತ್ವದಡಿಯಲ್ಲಿ ಸಾಗುತ್ತಿರುವ ಈ ಕಾರ್ಯಕ್ರಮ ಜಾತಿ, ಮತ ಭೇದವಿಲ್ಲದ ಎಲ್ಲರೂ ಒಂದು ವೇದಿಕೆ ಅಡಿಯಲ್ಲಿ ತಮ್ಮ ಬಾಳ ಬದುಕಿಗೆ ಮುಂದಡಿ ಇಡುತ್ತಿರುವುದು ಸಂತಸದ ಸಂಗತಿ. ದಂಪತಿಗಳ ಬದುಕಿನಲ್ಲಿ ಸಾಮರಸ್ಯವೇ ಪ್ರಧಾನವಾಗಬೇಕು ಎಂದರು.

ಮೇ 8, 9 ಮತ್ತು 10 ರಂದು ಶ್ರೀಮಠದ ವತಿಯಿಂದ ಇದೇ ವೇದಿಕೆಯಲ್ಲಿ ಸಾಂಸ್ಕೃತಿಕ ನಾಯಕ ಬಸವಣ್ಣನವರ ಜಯಂತಿ ಏರ್ಪಡಿಸಲಾಗಿದೆ. ಇಲ್ಲಿ ಮ್ಕಕಳಿಗೆ, ಹಿರಿಯರಿಗೆ ವಚನ ಕಂಠಪಾಠ ಹಾಗೂ ಬಸವಾದಿ ಶಿವಶರಣರ ವೇಷ ಭೂಷಣ ಸ್ಪರ್ಧೆ ಏರ್ಪಡಿಸಲಾಗಿದೆ. ಪ್ರತಿದಿನ ಸಂಜೆ ಚಿಂತನಗೋಷ್ಠಿಗಳು ನಡೆಯಲಿವೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.

ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ದಾವಣಗೆರೆ ವಿರಕ್ತಮಠದ ಡಾ.ಬಸವಪ್ರಭು ಸ್ವಾಮೀಜಿ, ಜೀವನ ಸುಖವಾಗಿ ನಡೆಯಲು ಎಲ್ಲರಲ್ಲೂ ನಂಬಿಕೆ ಅಗತ್ಯ. ಅದು ಇರದೇ ಹೋದರೆ ಸಂಸಾರ ವಿಘಟನೆಯ ಹಾದಿ ಹಿಡಿಯುತ್ತದೆ. ಕುಟುಂಬ ಅಂದರೆ ತೊಂದರೆ, ತಾಪತ್ರಯ, ಸಮಸ್ಯೆ ಇರುವುದು ಸಹಜ. ಅವುಗಳನ್ನು ತಾಳ್ಮೆ, ಸಹನೆಯಿಂದ ಪರಿಹರಿಸಿಕೊಂಡು ಸಾಗಬೇಕು. ಈ ವೇದಿಕೆಯಲ್ಲಿ ಬಡವರು ಮಾತ್ರ ಮದುವೆ ಮಾಡಿಕೊಂಡಿಲ್ಲ. ಸಿರಿವಂತರೂ ಇಲ್ಲಿ ತಮ್ಮ ಕಲ್ಯಾಣ ಮಹೋತ್ಸವ ನೆರವೇರಿಸಿಕೊಂಡು ಹೋಗಿರುವ ಉದಾಹರಣೆ ಇದೆ. ಅಂತಹ ಸಾಮಾಜಿಕ ಹೊಣೆಗಾರಿಕೆ ಶ್ರೀಮಠ ಒದಗಿಸಿದೆ ಎಂದರು.

ಗುರುಮಿಠಕಲ್‌ನ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ಜೀವನದಲ್ಲಿ ಯಾವುದಕ್ಕೆ ಕೊರತೆಯಾದರೂ ಸಹ ವಿಶ್ವಾಸಕ್ಕೆ ಭಂಗ ಬರಬಾರದು. ಪರಸ್ಪರ ಪ್ರೀತಿ-ವಿಶ್ವಾಸ ಸಹ ಬಾಳ್ವೆಯಿಂದ ಬದುಕು ಹಸನಾಗಲು ಸಾಧ್ಯವಿದೆ. ಅಂತಹ ದಾರಿಯಲ್ಲಿ ನೂತನ ದಂಪತಿ ಹಾಗೂ ಸೇರಿದ ನೀವುಗಳು ಸಾಗಿರಿ ಎಂದು ಸಲಹೆ ನೀಡಿದರು. ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 16 ಜೋಡಿ ನೂತನ ವಧೂವರರು ದಾಂಪತ್ಯಕ್ಕೆ ಅಡಿ ಇಟ್ಟರು.

Share this article