ಸ್ವಾತಂತ್ರ್ಯೋತ್ಸವದ 80ನೇ ವಾರ್ಷಿಕೋತ್ಸವದ ಅಂಗವಾಗಿ ನಡೆಯುತ್ತಿರುವ "ಹರ್ ಘರ್ ತಿರಂಗಾ " ಅಭಿಯಾನದ ಪ್ರಯುಕ್ತ ಬಿಜೆಪಿ ಮಹಾನಗರ ಜಿಲ್ಲಾ ವತಿಯಿಂದ ಗುರುವಾರ ಹುಬ್ಬಳ್ಳಿಯಲ್ಲಿ ಬೃಹತ್ ತಿರಂಗಾ ಯಾತ್ರೆ ನಡೆಯಿತು.
ಹುಬ್ಬಳ್ಳಿ:
ಸ್ವಾತಂತ್ರ್ಯೋತ್ಸವದ 80ನೇ ವಾರ್ಷಿಕೋತ್ಸವದ ಅಂಗವಾಗಿ ನಡೆಯುತ್ತಿರುವ "ಹರ್ ಘರ್ ತಿರಂಗಾ " ಅಭಿಯಾನದ ಪ್ರಯುಕ್ತ ಬಿಜೆಪಿ ಮಹಾನಗರ ಜಿಲ್ಲಾ ವತಿಯಿಂದ ಗುರುವಾರ ನಗರದಲ್ಲಿ ಬೃಹತ್ ತಿರಂಗಾ ಯಾತ್ರೆ ನಡೆಯಿತು.
ವಿದ್ಯಾನಗರದ ಬಿವಿಬಿ ಕಾಲೇಜು ಆವರಣದಲ್ಲಿ ವಂದೇ ಮಾತರಂ ಗೀತೆ ಹಾಡುವ ಮೂಲಕ ಉದ್ಯಮಿ ಶಂಕರಣ್ಣ ಮುನವಳ್ಳಿ ಯಾತ್ರೆಗೆ ಚಾಲನೆ ನೀಡಿದರು. ಯಾತ್ರೆಯಲ್ಲಿ ಬಿಜೆಪಿ ಕಾರ್ಯಕರ್ತರು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ತ್ರಿವರ್ಣ ಧ್ವಜಗಳನ್ನು ಹಿಡಿದು ಪಾಲ್ಗೊಂಡರು.
ಯಾತ್ರೆಯ ಪ್ರಮುಖ ಆಕರ್ಷಣೆಯಾಗಿದ್ದ 500 ಮೀಟರ್ ಉದ್ದದ ಬೃಹತ್ ತಿರಂಗಾ ಧ್ವಜವನ್ನು ಕಾರ್ಯಕರ್ತರು ಹಿಡಿದು ಸಾಗಿದರು. ಮಾರ್ಗದುದ್ದಕ್ಕೂ ದೇಶಭಕ್ತಿ ಗೀತೆಗಳು ಮೊಳಗಿದವು. "ಭಾರತ ಮಾತಾ ಕೀ ಜೈ " ಘೋಷಣೆಗಳು ಮುಗಿಲು ಮುಟ್ಟಿದವು.
ಬಿವಿಬಿ ಕಾಲೇಜಿನಿಂದ ತೋಳನಕೆರೆ ವರೆಗೆ ನಡೆದ ಯಾತ್ರೆಯ ಮಾರ್ಗದ ಇಕ್ಕೆಲಗಳಲ್ಲಿ ಸಾರ್ವಜನಿಕರು ನಿಂತು ಯಾತ್ರೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಹಲವರು "ಭಾರತ ಮಾತಾ ಕೀ ಜೈ " ಘೋಷಣೆ ಕೂಗಿ ಉತ್ಸಾಹ ಹೆಚ್ಚಿಸಿದರು. ದೇಶಭಕ್ತಿ ಗೀತೆಗಳಿಗೆ ಯುವಕರು ಹಾಗೂ ಸಾರ್ವಜನಿಕರು ನೃತ್ಯ ಮಾಡುತ್ತಿದ್ದ ದೃಶ್ಯಗಳು ಗಮನ ಸೆಳೆದವು.
ಈ ವೇಳೆ ಮೇಯರ್ ದುರ್ಗಮ್ಮ ಬಿಜವಾಡ, ವಿಪ ಮಾಜಿ ಸದಸ್ಯ ನಾಗರಾಜ ಛಬ್ಬಿ, ಪಾಲಿಕೆ ಸದಸ್ಯ ಶಿವು ಮೆಣಸಿನಕಾಯಿ, ಬಿಜೆಪಿ ಮಹಾನಗರ ಜಿಲ್ಲಾ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಗ್ರಾಮೀಣ ಅಧ್ಯಕ್ಷ ನಿಂಗಪ್ಪ ಸುತಗಟ್ಟಿ, ಯಲ್ಲಪ್ಪ ಶಿಂಧೆ, ಪ್ರಕಾಶ ಕ್ಯಾರಕಟ್ಟಿ, ಸಂತೋಷ ವೆರ್ಣೆಕರ, ಪ್ರಭು ನವಲಗುಂದಮಠ, ಬಸವರಾಜ ಅಮ್ಮಿನಬಾವಿ, ಪ್ರೀತಮ್ ಅರಕೇರಿ ಸೇರಿದಂತೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.