ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಭಾರಿ ವಿರೋಧ

KannadaprabhaNewsNetwork |  
Published : Sep 16, 2025, 12:03 AM IST
ಶರಾವತಿ ಕೊಳ್ಳದ ನೋಟ  | Kannada Prabha

ಸಾರಾಂಶ

ಶರಾವತಿ ಪಂಪ್ಡ್ ಸ್ಟೋರೆಜ್ ಯೋಜನೆಗೆ ಕೇವಲ ಶರಾವತಿ ಕೊಳ್ಳದಲ್ಲಷ್ಟೇ ಅಲ್ಲ, ಜಿಲ್ಲೆಯಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ವಸಂತಕುಮಾರ್ ಕತಗಾಲ

ಕಾರವಾರ: ಶರಾವತಿ ಪಂಪ್ಡ್ ಸ್ಟೋರೆಜ್ ಯೋಜನೆಗೆ ಕೇವಲ ಶರಾವತಿ ಕೊಳ್ಳದಲ್ಲಷ್ಟೇ ಅಲ್ಲ, ಜಿಲ್ಲೆಯಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಇಂದು ನಡೆಯಲಿರುವ ಸಾರ್ವಜನಿಕ ಅಹವಾಲು ಸಭೆಯಲ್ಲಿ ಭಾರಿ ವಿರೋಧ ವ್ಯಕ್ತವಾಗುವ ಸಾಧ್ಯತೆ ಇದೆ.

ಪಶ್ಚಿಮ ಘಟ್ಟದ ಸಂರಕ್ಷಣೆ, ಸಂವರ್ಧನೆಯಲ್ಲಿ 40 ವರ್ಷಗಳಿಂದ ತೊಡಗಿಕೊಂಡಿರುವ ಅನಂತ ಹೆಗಡೆ ಅಶೀಸರ ನೇತೃತ್ವದ ವೃಕ್ಷ ಲಕ್ಷ ಆಂದೋಲನ ಈ ಯೋಜನೆ ಜಾರಿಗೊಳಿಸಲು ಕಾಯಿದೆಗಳ ಉಲ್ಲಂಘನೆ ಮಾಡಿರುವುದು, ಶರಾವತಿ ಕಣಿವೆಯಲ್ಲಿ ಆಗಲಿರುವ ಅವಾಂತರಗಳ ಬಗ್ಗೆ ಗಮನ ಸೆಳೆದಿದೆ. ಜೊತೆಗೆ ಸೆ.16ರಂದು ಶಿವಮೊಗ್ಗ ಹಾಗೂ 18ರಂದು ಗೇರಸೊಪ್ಪದಲ್ಲಿ ನಡೆಯಲಿರುವ ಸಾರ್ವಜನಿಕ ಅಹವಾಲು ಸಭೆಯನ್ನು ರದ್ದುಗೊಳಿಸುವಂತೆ ಆಗ್ರಹಿಸಿದೆ. ಆಂದೋಲನ ನೀಡಿರುವ ವಿವರ ಇಲ್ಲಿದೆ.

ಶರಾವತಿ ಪಂಪ್ಡ್ ಸ್ಟೋರೇಜ್ (ಭೂಗತ) ಯೋಜನೆಯ ಪರಿಸರ ಪರಿಣಾಮ ವರದಿ ಸಂಪೂರ್ಣ ತಪ್ಪು ಹಾಗೂ ಯೋಜನಾ ಪರವಾದ ವರದಿ ಆಗಿದೆ. ಸುಳ್ಳಿನ ಸರಮಾಲೆಯಾಗಿದೆ. ಈ ಮುಖ್ಯ ಕಾರಣದಿಂದ ಶರಾವತಿ ಭೂಗತ ಯೋಜನೆಯ ಪರಿಸರ ವರದಿ ರದ್ದು ಮಾಡಬೇಕು ಎಂದು ಆಂದೋಲನ ಆಗ್ರಹಿಸಿದೆ.

ಅರಣ್ಯ, ಪರಿಸರ, ಜೀವವೈವಿಧ್ಯ ಮತ್ತು ವನ್ಯಜೀವಿ ಕಾಯಿದೆಗಳ ಪಾಲನೆ ಮತ್ತು ಉಲ್ಲಂಘನೆ ವಿಷಯದಲ್ಲಿ ಸರ್ಕಾರದ ಬೃಹತ್ ಅಭಿವೃದ್ಧಿ ಯೋಜನೆಗಳು ಹೊರತಾಗಿವೆಯೇ? ಈ ಯೋಜನೆ ವಿಷಯದಲ್ಲಿ ಕೆಪಿಸಿಗೆ ಅರಣ್ಯ ವನ್ಯಜೀವಿ ಪರವಾನಗಿ ಸಿಗಲು ಕಾಯಿದೆಗಳನ್ನು ಸಡಿಲಗೊಳಿಸಲು ಅವಕಾಶ ಇದೆಯೇ ಎಂಬುದನ್ನು ಸರ್ಕಾರ ಬಹಿರಂಗಗೊಳಿಸಬೇಕು. ಅರಣ್ಯ ಇಲಾಖೆಯ ವಿಭಾಗ ಮಟ್ಟದ ಅರಣ್ಯ ಅಧಿಕಾರಿಗಳು ಶರಾವತಿ ಯೋಜನೆಗೆ ಅನುಮತಿ ನೀಡಬಾರದು ಎಂದು ವರದಿ ನೀಡಿದ್ದನ್ನು ಮೇಲ್ಮಟ್ಟದಲ್ಲಿ ಬದಲಾಯಿಸಲಾಗಿದೆ ಎಂಬ ಸಂಗತಿ ಬಹಿರಂಗವಾಗಿದೆ. ಕೇಂದ್ರ ಅರಣ್ಯ ಮಂತ್ರಾಲಯದ ದಕ್ಷಿಣ ಭಾರತ ಕಚೇರಿಯ ಅರಣ್ಯ ಅಧಿಕಾರಿಗಳ ಸ್ಥಳ ಭೇಟಿ ವರದಿಯು ಶರಾವತಿ ಭೂಗತ ಯೋಜನೆಗೆ ತಕರಾರು ತೆಗೆದಿತ್ತು. ಅಂಥ ನಿಷ್ಪಕ್ಷಪಾತ ವರದಿಯನ್ನು ಗಾಳಿಗೆ ತೂರಿ ಉನ್ನತ ಮಟ್ಟದಲ್ಲಿ ಅರಣ್ಯ-ವನ್ಯಜೀವಿ ಪರಿಸರ ಅನುಮತಿ ನೀಡಲಾಗಿದೆ ಎಂಬ ಸಂಗತಿ ರಾಷ್ಟ್ರದ ಸಂರಕ್ಷಣಾ ಕಾನೂನುಗಳಿಗೆ ಮಸಿ ಬಳಿದಂತೆ ಆಗಿದೆ ಎಂದು ಆಂದೋಲನ ತಿಳಿಸಿದೆ.

ಭೂಕಂಪ, ಭೂಕುಸಿತ, ಮೇಘ ಸ್ಫೋಟ ಸೇರಿದಂತೆ ಹವಾಮಾನ ಬದಲಾವಣೆಯ ಗಂಭೀರ ಪರಿಸ್ಥಿತಿ ಇದೆ. ಶರಾವತಿ ಭೂಗತ ಯೋಜನೆ ಜಾರಿ ಮಾಡುವುದರಿಂದ ಭೂಕುಸಿತದಿಂದ ಸಾವಿರಾರು ಬಡ, ವನವಾಸಿ, ರೈತರ ಜೀವಹಾನಿಗೆ ಕಾರಣರಾಗುತ್ತೀರಿ ಎಂಬ ಪರಿಸರ ತಜ್ಞರ ಎಚ್ಚರಿಕೆ ಪರಿಗಣಿಸಿಲ್ಲ. ರಾಜ್ಯ ಸರ್ಕಾರದ ಭೂಕುಸಿತ ಅಧ್ಯಯನ ಸಮಿತಿ ವರದಿಗಳನ್ನು ಕಸದ ಬುಟ್ಟಿಗೆ ಎಸೆಯುವ ನಿರ್ಧಾರವನ್ನು ರಾಜ್ಯ ಕಂದಾಯ-ಅರಣ್ಯ ಮತ್ತು ಇಂಧನ ಇಲಾಖೆ ಮಾಡಿದೆ. ಭೂಕುಸಿತ ಸೂಕ್ಷ್ಮ ಪ್ರದೇಶ ಶರಾವತಿ ಕಣಿವೆ ಎಂದು ಜಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ ತಜ್ಞರೇ ಸ್ಥಳಕ್ಕೆ ಬಂದು ವರದಿ ನೀಡಿದ್ದಾರೆ.

ವನ್ಯಜೀವಿಗಳಿಗೆ, ವನವಾಸಿಗಳಿಗೆ, ಕೋಟಿ ವೃಕ್ಷ ಬಳ್ಳಿಗಳಿಗೆ ಧ್ವನಿ ಇಲ್ಲ. ಅಸಹಾಯಕರಿಗೆ, ಮಾತು ಬಾರದವರಿಗೆ ಸಹಾಯ ಹಸ್ತ, ಜೀವ ನೀಡಬೇಕಾದವರೇ ಮುಂದೆ ನಿಂತು ನಿಸರ್ಗವನ್ನೇ ಧ್ವಂಸ ಮಾಡಲು ಮುಂದಾಗುವದನ್ನು ಪ್ರಜ್ಞಾವಂತರು ಒಪ್ಪಿಕೊಳ್ಳಲು ಸಾಧ್ಯವಿಲ್ಲ.

ಯಾವುದೇ ಬೃಹತ್ ಅಭಿವೃದ್ಧಿ ಯೋಜನೆ ಜಾರಿ ಮಾಡುವಾಗ ಈ ಯೋಜನೆಯ ವ್ಯಾಪ್ತಿ ಪ್ರದೇಶವನ್ನು ಗುರುತಿಸಲಾಗುತ್ತದೆ. ಆದರೆ ಶರಾವತಿ ಕಣಿವೆಯ ಗೇರುಸೊಪ್ಪಾದಿಂದ ಕೆಳಗೆ ಶರಾವತಿ ನದಿ ತೀರದ ಹಳ್ಳಿಗಳು ರೈತರು, ಮೀನುಗಾರರು, ಜನತೆ ಮೇಲೆ ನದಿ ಪರಿಸ್ಥಿತಿ ಮೇಲೆ ಭೂಗತ ಯೋಜನೆ ಏನೆಲ್ಲ ದುಷ್ಪರಿಣಾಮ ಬೀರಲಿದೆ ಎಂಬ ಕನಿಷ್ಠ ಪ್ರಸ್ತಾಪವನ್ನೇ ಯೋಜನಾ ವರದಿಯಲ್ಲಿ ಹೇಳಲಾಗಿಲ್ಲ.

ಗೇರುಸೊಪ್ಪದಲ್ಲಿ ಬೇಸಿಗೆಯಲ್ಲಿ ಅತಿಕಡಿಮೆ ನೀರುಲಭ್ಯವಾಗುತ್ತದೆ. ಈ ಯೋಜನೆ ಜಾರಿಯಿಂದ ಶರಾವತಿ ನದಿಗೆ ಸಿಹಿನೀರು ಸಿಗುವುದಿಲ್ಲ ಎಂಬ ವಿಜ್ಞಾನಿಗಳ ಅಭಿಪ್ರಾಯವನ್ನು ಪರಿಸರ ಇಲಾಖೆ, ಸಿ.ಆರ್.ಜೆಡ್ ಪ್ರಾಧಿಕಾರ ಪರಿಗಣಿಸಿಲ್ಲ. ಈ ಮುಖ್ಯ ಅಂಶ ಪರಿಸರ ಪರಿಣಾಮ ವರದಿಯಲ್ಲಿ ಎದ್ದು ಕಾಣಬೇಕಿತ್ತು. ಕೆಪಿಸಿ ಭೂಗತ ಜಲವಿದ್ಯುತ್ ಯೋಜನೆಯಿಂದ ಒಂದು ಲಕ್ಷ ರೈತರು-ಮೀನುಗಾರರು ಬೆಳೆ-ಬೆಳೆಯಲಾರದ, ಮೀನು ಕ್ಷಾಮ ಎದುರಿಸುವ ಉಪ್ಪು ನೀರು ಕುಡಿಯುವ ಪರಿಸ್ಥಿತಿಗೆ ಬರುತ್ತಾರೆ.

ಕೆಪಿಸಿಯವರ ಭೂಗತ ಯೋಜನೆ,ಅರಣ್ಯ ನಾಶ, ವಿದ್ಯುತ್‌ಮಾರ್ಗಾ ನಿರ್ಮಾಮಣ, ಗಣಿಗಾರಿಕೆ, ರಸ್ತೆ, ಪೈಪ್‌ಲೈನ್, ಸುರಂಗ ಕಾಮಗಾರಿ, ಕಾರ್ಮಿಕರ ಕಾಲನಿಗಳಿಂದ ಇಡೀ ಕಣಿವೆ ಛಿದ್ರವಾಗಲಿದೆ. ಭೂಕುಸಿತ, ಮೇಘಸ್ಫೋಟ ಆಗಲಿದೆ. ವನ್ಯಜೀವಿಗಳು ಅತಂತ್ರವಾಗಲಿವೆ ಎಂದು ವೃಕ್ಷ ಲಕ್ಷ ಆಂದೋಲನ ಆತಂಕ ವ್ಯಕ್ತಪಡಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

''ದ್ವೇಷ ಮಸೂದೆಯಿಂದ ಭಿನ್ನ ದನಿ ದಮನ ಆಗಲ್ಲ ''
3 ವರ್ಷ ಮೊಮ್ಮಗನಿಗೆ ಬಾರಲ್ಲಿ ಹೆಂಡ ಕುಡಿಸಿದ ಅಜ್ಜ: ಆಕ್ರೋಶ