ಹೊಸಪೇಟೆಯಲ್ಲಿ ಕಾರ್ಮಿಕರ ಬೃಹತ್‌ ರ‍್ಯಾಲಿ

KannadaprabhaNewsNetwork |  
Published : Jul 10, 2025, 12:45 AM IST
ಹೊಸಪೇಟೆಯಲ್ಲಿ ಅಖಿಲ ಭಾರತ ಮುಷ್ಕರದ ಹಿನ್ನೆಲೆಯಲ್ಲಿ ಕಾರ್ಮಿಕ ಸಂಘಟನೆಗಳಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು. | Kannada Prabha

ಸಾರಾಂಶ

ಕೇಂದ್ರ ಸರ್ಕಾರದ ನಾಲ್ಕು ಕಾರ್ಮಿಕ ಸಂಹಿತೆ ವಾಪಸಿಗೆ ಆಗ್ರಹಿಸಿ ಬುಧವಾರ ಸಿಐಟಿಯು ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಹಿನ್ನೆಲೆಯಲ್ಲಿ ಹೊಸಪೇಟೆ ನಗರದ ಬಿಎಸ್‌ಎನ್‌ಎಲ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಹೊಸಪೇಟೆ: ಕೇಂದ್ರ ಸರ್ಕಾರದ ನಾಲ್ಕು ಕಾರ್ಮಿಕ ಸಂಹಿತೆ ವಾಪಸಿಗೆ ಆಗ್ರಹಿಸಿ ಬುಧವಾರ ಸಿಐಟಿಯು ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಹಿನ್ನೆಲೆಯಲ್ಲಿ ನಗರದ ಬಿಎಸ್‌ಎನ್‌ಎಲ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಇಲ್ಲಿನ ಗಾಂಧಿ ಚೌಕ್‌ನಿಂದ ಬಿಎಸ್‌ಎನ್‌ಎಲ್ ಕಚೇರಿ ವರೆಗೆ ಕಾರ್ಮಿಕ ಸಂಘಟನೆಗಳ ಮುಖಂಡರು ಬೃಹತ್ ರ‍್ಯಾಲಿ ನಡೆಸಿ, ಬಳಿಕ ಬಹಿರಂಗ ಸಭೆ ನಡೆಸಿದರು. ಆಟೋ ಚಾಲಕರು, ಅಂಗನಾಡಿ ನೌಕರರು, ಕಟ್ಟಡ ಕಾರ್ಮಿಕರು, ಹಮಾಲಿ ಸೇರಿದಂತೆ ಇತರೆ ಕಾರ್ಮಿರು ಪಾಲ್ಗೊಂಡಿದ್ದರು.

ಮುಖಂಡ ಭಾಸ್ಕರ್‌ರೆಡ್ಡಿ ಮಾತನಾಡಿ, ಈಗಿರುವ ೨೯ ಕಾರ್ಮಿಕ ಕಾನೂನುಗಳನ್ನು ಬದಲಿಸಿ ೨೦೧೯ರಲ್ಲಿ ಸಂಸತ್ತಿನಲ್ಲಿ ನಾಲ್ಕು ಕಾರ್ಮಿಕ ಸಂಹಿತೆ ಹೊಸ ಕಾನೂನನ್ನು ಮಾಡಲಾಗಿದೆ. ಈ ನಾಲ್ಕು ಕಾರ್ಮಿಕ ಸಂಹಿತೆ ಜಾರಿಗೆ ಪ್ರಯತ್ನಿಸುತ್ತಿದ್ದು, ಹಿಂಬಾಗಲಿನಿಂದ ರಾಜ್ಯ ಸರ್ಕಾರಗಳ ಮುಖಾಂತರ ಅನುಷ್ಠಾನಕ್ಕೆ ತರಲು ಕೇಂದ್ರ ಸರ್ಕಾರ ಪ್ರತಿ ರಾಜ್ಯಗಳಿಗೆ ಉನ್ನತ ಐಎಎಸ್ ಅಧಿಕಾರಿಯನ್ನು ನೇಮಕ ಮಾಡಿದೆ. ಕರ್ನಾಟಕ ಸರ್ಕಾರ ಇದನ್ನು ಜಾರಿಗೊಳಿಸಲು ಉತ್ಸುಕತೆ ತೋರಿಸಿದ್ದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.ಮುಖಂಡರಾದ ಮರಡಿ ಜಂಬಯ್ಯನಾಯಕ, ಕೆ. ನಾಗರತ್ನಮ್ಮ, ಯಲ್ಲಲಿಂಗ, ಕೆ.ಎಂ. ಸ್ವಪ್ನಾ, ಎಲ್. ಮಂಜುನಾಥ, ಕೆ.ಎಂ. ಸಂತೋಷ್, ಇ. ಮಂಜುನಾಥ, ವಿ. ಸ್ವಾಮಿ, ಶಂಕುತಲಮ್ಮ, ಪವನ್ ಕುಮಾರ್ ಇತರರಿದ್ದರು.

ಪ್ರತಿಭಟನೆ ಮೊಟಕುಗೊಳಿಸಿ ಸ್ಥಳ ಖಾಲಿ ಮಾಡುವಂತೆ ಪೊಲೀಸರು ಒತ್ತಾಯಿಸಿದರು. ಇದಕ್ಕೆ ಆಕ್ರೋಶಗೊಂಡ ಪ್ರತಿಭಟನಾಕಾರರು, ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಪೊಲೀಸ್ ಠಾಣೆಯತ್ತ ತೆರಳಿದರು.

ಹೂವಿನಹಡಗಲಿಯಲ್ಲಿ ಪ್ರತಿಭಟನೆ:ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನಾನಾ ಸಂಘಟನೆಗಳ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಹೂವಿನಹಡಗಲಿ ಪಟ್ಟಣದ ಲಾಲ್‌ ಬಹದ್ಧೂರ್‌ ಶಾಸ್ತ್ರಿ ವೃತ್ತದಲ್ಲಿ ಪ್ರತಿಭಟನೆ ಮಾಡಿದರು.

ಇಲ್ಲಿನ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್‌, ಎಐಟಿಯುಸಿ, ಕಾರ್ಮಿಕ ಸಂಘಟನೆ, ವಸತಿ ಶಾಲೆಯ ಅಡುಗೆ ತಯಾರಿಕರ ಸಂಘಟನೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಮಿಕ ವಿರೋಧಿ ಕಾನೂನು ಜಾರಿ ವಿರುದ್ಧ ಘೋಷಣೆ ಕೂಗಿದರು.ಫೆಡರೇಷನ್‌ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಮಲಾಕ್ಷಮ್ಮ ಮಾತನಾಡಿ, ಕೇಂದ್ರ ಸರ್ಕಾರ ಕಾರ್ಮಿಕರ ವೇಳಾ ಪಟ್ಟಿ ತಿದ್ದುಪಡಿ ಕಾನೂನು ವಿರುದ್ಧ ಹೋರಾಟ ಅನಿವಾರ್ಯವಾಗಿದೆ. ಸರ್ಕಾರಗಳು ಅಪೌಷ್ಟಿಕ ಆಹಾರಗಳನ್ನು ವಿತರಿಸುವಾಗ ಸಾರ್ವಜನಿಕರಿಂದ ವಿನಾಕಾರಣ ತಾವು ತೊಂದರೆ ಅನುಭವಿಸಬೇಕಿದೆ. 3ನೇ ದರ್ಜೆಯ ಮೊಬೈಲ್ ನೀಡಿ ಅವೈಜ್ಞಾನಿಕ ಕೆವೈಸಿ ತಾಂತ್ರಿಕತೆಯನ್ನು ಅಳವಡಿಸಿಕೊಳ್ಳುವಂತೆ ಆದೇಶಿಸುತ್ತಾರೆ. ಇದರಿಂದ ಕಾರ್ಯಕರ್ತೆಯರು ಮಾನಸಿಕ ಕಿರಿಕಿರಿ ಅನುಭವಿಸುವಂತಾಗಿದೆ. ಕೂಡಲೇ ಕಾನೂನು ತಿದ್ದುಪಡಿ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಫೆಡರೇಷನ್ ತಾಲೂಕು ಅಧ್ಯಕ್ಷೆ ಜಿ. ಜಯಲಕ್ಷ್ಮಿ ಮಾತನಾಡಿ, ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರಿಗೆ ₹25 ರಿಂದ ₹36 ಸಾವಿರ ವರೆಗೆ ವೇತನ ಹೆಚ್ಚಳ ಮಾಡುವ ಜತೆಗೆ, ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ವಿವಿಧ ರಂಗಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಸಂಘಟಿತ ವಲಯಗಳ ಕಾರ್ಮಿಕರಿಗೆ, ಜೀವನ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದರು.ಎಐಎಸ್ಎಫ್ ಸಂಚಾಲಕ ಬಸವರಾಜ ಸಂಶಿ, ಎನ್. ಮಂಜುಳಾ ಮಾತನಾಡಿದರು. ಸವಿತಾ ಹರವಿ ಇತರರು ತಹಸೀಲ್ದಾರ್‌ ಜಿ. ಸಂತೋಷಕುಮಾರ್‌ ಮತ್ತು ಸಿಡಿಪಿಒ ರಾಮನಗೌಡ ಅವರಿಗೆ ಮನವಿ ಸಲ್ಲಿಸಿದರು.

PREV

Recommended Stories

ಕಾರ್ಮಿಕರು ಒಪ್ಪಿದ್ರೆ 10 ಗಂಟೆ ಕೆಲಸಕ್ಕೆ ಓಕೆ : ಲಾಡ್‌
‘ಸಾವಿರಾರು ಶವ ಹೂಳಲು ಧರ್ಮಸ್ಥಳ ಗ್ರಾಮದಲ್ಲಿ ಮಹಾಭಾರತ ಯುದ್ಧ ನಡೆದಿಲ್ಲ’