ಕನ್ನಡಪ್ರಭ ವಾರ್ತೆ ಪಾಲಿಬೆಟ್ಟ
ಕೂರ್ಗ್ ಕ್ರಿಕೆಟ್ ಫೌಂಡೇಶನ್ ವತಿಯಿಂದ ಪಾಲಿಬೆಟ್ಟದಲ್ಲಿ ನಡೆಯುತ್ತಿರುವ ಕೊಡವ ಕ್ರಿಕೆಟ್ ಲೆದರ್ ಬಾಲ್ ಕ್ರಿಕೆಟ್ ಪ್ರೀಮಿಯರ್ ಲೀಗ್ ಪಂದ್ಯಾವಳಿಯಲ್ಲಿ ಆಯೋಜಿಸಿದ್ದ ಪತ್ರಕರ್ತರು ಹಾಗೂ ಆಯೋಜಕರ ನಡುವಿನ ಸೌಹಾರ್ದ ಪಂದ್ಯ ಮಳೆಯ ಕಾರಣದಿಂದ ಡ್ರಾದಲ್ಲಿ ಅಂತ್ಯಗೊಂಡಿತು.ಕ್ರಿಕೆಟ್ ಪ್ರೀಮಿಯರ್ ಲೀಗ್ ಸೀಸನ್ – 2ರ ಸೆಮಿಫೈನಲ್ ಪಂದ್ಯಾಟದ ನಂತರ ಕೂರ್ಗ್ ಕ್ರಿಕೆಟ್ ಫೌಂಡೇಶನ್ (ಟೀಂ ಸಿ.ಸಿ.ಎಫ್) ಹಾಗೂ ಕೊಡಗು ಪತ್ರಕರ್ತರ ಸಂಘದ (ಟೀಂ ಕೆಪಿಎಸ್) ನಡುವೆ ಸೌಹಾರ್ದ ಪ್ರದರ್ಶನ ಪಂದ್ಯ ನಡೆಯಿತು.ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಸಿಸಿಎಫ್ ತಂಡ 10 ಓವರ್ ಗಳಲ್ಲಿ 84 ರನ್ ಕಲೆ ಹಾಕಿತು. ಈ ಮೊತ್ತವನ್ನು ಬೆನ್ನಟ್ಟಿದ ಕೆಪಿಎಸ್ ತಂಡ 7.3 ಓವರ್ ಗಳಲ್ಲಿ 56 ರನ್ ಗಳಿಸಿತ್ತು. ಆದರೆ ಮಳೆ ಸುರಿದ ಕಾರಣ ಪಂದ್ಯವನ್ನು ಡ್ರಾ ಮಾಡಲಾಯಿತು. ಕೆಪಿಎಸ್ ತಂಡದ ಪರ ಕುಡೆಕಲ್ ಸಂತೋಷ್ ನಾಯಕತ್ವದಲ್ಲಿ ನಾಸೀರ್, ಖಲೀಲ್, ವಿಘ್ನೇಶ್ ಭೂತನಕಾಡು, ಸುರೇಶ್ ಬಿಳಿಗೇರಿ, ಸೈನುಲ್ಲ, ಟಿ.ಎಲ್.ಶ್ರೀನಿವಾಸ್, ಲತೀಶ್ ಪೂಜಾರಿ, ಕೌಸರ್, ಸುರೇಶ್ ಸಿದ್ದಾಪುರ, ಅಶೋಕ್, ನಿಹಾಲ್ ಕುಡೆಕಲ್ ಆಟವಾಡಿದರು.ಸಿಸಿಎಫ್ ತಂಡದ ಪರ ಪಾಲಚಂಡ ಜಗನ್ ಉತ್ತಪ್ಪ, ಪೊರುಕೊಂಡ ಸುನಿಲ್, ಕೀತಿಮಂಡ ಗಣಪತಿ, ಕುಲ್ಲೇಟಿರ ಶಾಂತಕಾಳಪ್ಪ, ಅಣ್ಣಳಮಾಡ ರಾಯ್ ಚಿಣ್ಣಪ್ಪ, ಬಲ್ಲಂಡ ರೇಣ, ರಚನ್ ಚಿಣ್ಣಪ್ಪ, ಮಡ್ಲಂಡ ದರ್ಶನ್, ಅಣ್ಣಳಮಾಡ ಬೆನಿತ್ ಅಚ್ಚಯ್ಯ, ಬಾಚೆಟ್ಟಿರ ಬ್ರಿಜೇಶ್ ಗಣಪತಿ, ಕೊಕ್ಕಲೇರ ಧ್ಯಾನ್ ಆಟವಾಡಿದರು. ತೀರ್ಪುಗಾರರಾಗಿ ಪುತ್ತೂರಿನ ಕೃಷ್ಣ ಹಾಗೂ ದಿನೇಶ್ ಕಾರ್ಯನಿರ್ವಹಿಸಿದರು.ಬಹುಮಾನ ವಿತರಣೆ ಸಂದರ್ಭ ಮಾತನಾಡಿದ, ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಅನಿಲ್ ಎಚ್.ಟಿ., ಅತ್ಯುತ್ತಮ ಮೈದಾನದಲ್ಲಿ ನಡೆದ ಪಂದ್ಯಾವಳಿ ನೂರಾರು ಯುವ ಆಟಗಾರರು ಕ್ರಿಕೆಟ್ ಕ್ರೀಡಾ ಪ್ರತಿಭೆಯನ್ನು ತೋರಲು ಸಹಕಾರಿಯಾಗಿದೆ ಎಂದು ಶ್ಲಾಘಿಸಿದರು.ಕೊಡಗು ಪತ್ರಕರ್ತರ ಸಂಘದ ಖಜಾಂಚಿ ಟಿ.ಕೆ.ಸಂತೋಷ್, ಸಹಕಾರ್ಯದರ್ಶಿ ಪ್ರಸಾದ್ ಸಂಪಿಗೆಕಟ್ಟೆ, ಗೌರವ ಸಲಹೆಗಾರ ಬಿ.ಜಿ.ಅನಂತಶಯನ ಇದ್ದರು.