ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಪ್ರತಿಯೊಬ್ಬರೂ ಲಿಂಗಪೂಜೆ, ದಾಸೋಹದ ಮಹತ್ವ ತಿಳಿದುಕೊಳ್ಳಬೇಕು. ಜೀವನದಲ್ಲಿ ಪುರಾಣ ಪ್ರವಚನಗಳಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂದು ಇಂಗಳೇಶ್ವರ ವಚನ ಶಿಲಾ ಮಂಟಪದ ಚನ್ನಬಸವ ಸ್ವಾಮೀಜಿ ಹೇಳಿದರು.ಪಟ್ಟಣದ ವಿರಕ್ತಮಠದಲ್ಲಿ ಬಸವ ಜಯಂತಿ ಅಂಗವಾಗಿ ಶನಿವಾರ ಸಂಜೆ ಮಠದ ವತಿಯಿಂದ 11 ದಿನಗಳ ಕಾಲ ಹಮ್ಮಿಕೊಂಡಿರುವ ವಚನ ದರ್ಶನ ಪ್ರವಚನ ಪ್ರಾರಂಭೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಇಲ್ಲಿನ ಮಠದಲ್ಲಿ ನಿರಂತರವಾಗಿ ದಾಸೋಹ ನಡೆಯುವಂತಾಗಬೇಕು. ಬಸವಣ್ಣನವರ ಜನ್ಮಸ್ಥಳ ಬಸವನವಾಗೇವಾಡಿಯಲ್ಲಿ ಬಸವ ಜಯಂತಿ ಅದ್ಧೂರಿಯಾಗಿ ಆಚರಿಸಬೇಕು ಎಂದರು. ಇಂದು ಮಕ್ಕಳಲ್ಲಿ ಸಂಸ್ಕಾರ ಕಡಿಮೆಯಾಗುತ್ತಿದೆ. ಪಾಲಕರು ಮಕ್ಕಳ ಕೈಗೆ ಮೊಬೈಲ್ ಕೊಡದೇ ಉತ್ತಮ ಸಂಸ್ಕಾರ ಕೊಡುವ ಅಗತ್ಯತೆ ಇದೆ ಎಂದರು.
ಪ್ರವಚನಕಾರ ಬಳೂಟಗಿಯ ಶಿವಕುಮಾರ ಸ್ವಾಮೀಜಿ ಮಾತನಾಡಿ, 12ನೇ ಶತಮಾನದಲ್ಲಿ ಬಸವಣ್ಣನವರು ಮೇಲು-ಕೀಳು ಹೋಗಲಾಡಿಸಲು ಶ್ರಮಿಸಿದರು. ಶರಣರು ಸಂಸ್ಕಾರವಂತರಾಗಿ ಅದ್ಭುತವಾದ ಅನುಭವ ಮಂಟಪ ಕಟ್ಟಿದರು. ಇಲ್ಲಿನ ಸಿದ್ಧಲಿಂಗ ಶ್ರೀಗಳು ಮಕ್ಕಳಿಗೆ ಸಂಸ್ಕಾರ ಶಿಬಿರ ಆರಂಭಿಸುವ ಮೂಲಕ ಮಕ್ಕಳಲ್ಲಿ ನೈತಿಕ, ಆಧ್ಯಾತ್ಮಿಕ ಮೌಲ್ಯ ತಿಳಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ. ಬದುಕು ಸಾರ್ಥಕವಾಗಬೇಕಾದರೆ ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ನಿರಂತರವಾಗಿ ಪಾಲ್ಗೊಳ್ಳಬೇಕು. ಜೀವನಕ್ಕೆ ಆಧಾರ ಸ್ಥಂಭಗಳೇ 12ನೇ ಶತಮಾನದ ಶರಣರ ವಚನಗಳು. ಜೀವನ ಸುಂದರವಾಗಬೇಕಾದರೆ ವಚನಗಳ ದರ್ಶನ ಮಾಡಿಕೊಳ್ಳಬೇಕು ಎಂದು ಹೇಳಿದರು.ಕಾರ್ಯಕ್ರಮ ಉದ್ಘಾಟಿಸಿದ ಪುರಸಭೆ ಅಧ್ಯಕ್ಷೆ ಜಗದೇವಿ ಗುಂಡಳ್ಳಿ, ಅಧ್ಯಕ್ಷತೆ ವಹಿಸಿದ್ದ ಸಹಕಾರ ಮಹಾಮಂಡಳ ನಿರ್ದೇಶಕ ಐ.ಸಿ.ಪಟ್ಟಣಶೆಟ್ಟಿ, ಕೃಷಿಕ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಶಿವನಗೌಡ ಬಿರಾದಾರ, ಮುಖಂಡ ಬಿ.ಕೆ.ಕಲ್ಲೂರ, ನಿವೃತ್ತ ಪ್ರಾಧ್ಯಾಪಕ ಪಿ.ಎಲ್.ಹಿರೇಮಠ ಮಾತನಾಡಿದರು. ಸ್ಥಳೀಯ ವಿರಕ್ತಮಠದ ಸಿದ್ಧಲಿಂಗ ಸ್ವಾಮೀಜಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ, ಮುಖಂಡರಾದ ಬಸವರಾಜ ಗೊಳಸಂಗಿ, ಬಸವರಾಜ ಹಾರಿವಾಳ, ಶೇಖರ ಗೊಳಸಂಗಿ, ಸಂಗಮೇಶ ಓಲೇಕಾರ, ಶೇಖರಗೌಡ ಪಾಟೀಲ,ಸಂಗಮೇಶ ಹೂಗಾರ, ಪಂಚಾಕ್ಷರಿ ಹೂಗಾರ ಇತರರು ಇದ್ದರು. ವಿನೂತ ಕಲ್ಲೂರ ಸ್ವಾಗತಿಸಿದರು. ಎಚ್.ಬಿ.ಬಾರಿಕಾಯಿ ನಿರೂಪಿಸಿದರು. ಕೊಟ್ರೇಶ ಹೆಗಡ್ಯಾಳ ವಂದಿಸಿದರು.ಬೆಳಗ್ಗೆ ಶ್ರೀಮಠದಲ್ಲಿ ಮಕ್ಕಳಿಗಾಗಿ ಸಂಸ್ಕಾರ ಶಿಬಿರಕ್ಕೆ ಸಿದ್ಧಲಿಂಗ ಸ್ಬಾಮೀಜಿ ಚಾಲನೆ ನೀಡಿದರು.