ಹೊಸಪೇಟೆ: ಹಿಂದೂ ಧರ್ಮದ ರಕ್ಷಣೆಗಾಗಿ ಈ ನೆಲೆದ ಪ್ರತಿಯೊಬ್ಬ ಹಿಂದೂ ಧರ್ಮ ರಕ್ಷಕನಾಗಬೇಕು ಎಂದು ಹಿಂದೂ ಜಾಗರಣ ವೇದಿಕೆಯ ಮಧ್ಯ ಕ್ಷೇತ್ರದ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಕಾರಂತ್ ಹೇಳಿದರು.
ಸಿಂಧೂ ನಾಗರಿಕತೆಯಿಂದ ಉಗಮಿಸಿರುವ ಹಿಂದೂ ಧರ್ಮವನ್ನು ಯಾರಿಂದಲೂ ನಾಶಪಡಿಸಲು ಸಾಧ್ಯವಿಲ್ಲ. ನಾಲ್ಕು ಯುಗಗಳಿಂದ ಹಿಂದೂ ಧರ್ಮಕ್ಕೆ ಕಂಟಕ ಎದುರಾದಾಗಲೆಲ್ಲ ಭಗವಂತ ನಾನಾ ಅವತಾರದಲ್ಲಿ ರಕ್ಷಿಸಿದ್ದಾನೆ. ಇಸ್ಲಾಂ, ಕ್ರಿಶ್ಚಿಯನ್ನರ ದಾಳಿಗೆ ಒಳಗಾಗಿದ್ದ ವಿವಿಧ ರಾಷ್ಟ್ರಗಳು ಮತಾಂತರಕ್ಕೆ ಬಲಿಯಾಗಿದ್ದು ಇತಿಹಾಸ. ಆದರೆ, ಗ್ರೀಕ್, ಮೊಘಲ್, ಖಿಲ್ಜಿ, ಘೋರಿ ಸೇರಿದಂತೆ ಅನೇಕರ ಆಕ್ರಮಣವನ್ನು ಛತ್ರಪತಿ ಶಿವಾಜಿ ಮಹಾರಾಜ್, ಮಹಾರಾಣ ಪ್ರತಾತ್ ಸಿಂಗ್ ತಮ್ಮ ಕತ್ತಿಯಿಂದ ಹಿಮ್ಮೆಟ್ಟಿಸಿದರು ಎಂದರು.
ಸೂರ್ಯ ಮುಳುಗದ ಸಾಮ್ರಾಜ್ಯ ಎಂದು ಮೆರೆಯುತ್ತಿದ್ದ ಬ್ರಿಟಿಷರ ಸೊಕ್ಕು ಮುರಿದಿದ್ದೂ ಕೂಡ ಭಾರತ. ನೇತಾಜಿ ನೇತಾಜಿ ಅವರ ಹಿಂದ್ ಫೌಸ್ ಗೆ ಬೆದರಿ ಬ್ರಿಟಿಷರು ಕಾಲ್ಕಿತ್ತರು. ಮಹಾತ್ಮ ಗಾಂಧಿ ಕೂಡ ರಾಮರಾಜ್ಯದ ಕನಸಿನೊಂದಿಗೆ ಸ್ವಾತಂತ್ರ್ಯ ಸಂಗ್ರಾಮ ನಡೆಸಿದರು. ಬಾಲ ಗಂಗಾಧರ ತಿಲಕರು ಗಣೇಶೋತ್ಸವ ಹೆಸರಲ್ಲಿ ಜನರನ್ನು ಸಂಗ್ರಾಮಕ್ಕೆ ಧುಮ್ಮುಕ್ಕುವಂತೆ ಮಾಡಿದರು. ಭಾರತದ ಸ್ವತಂತ್ರ ಚಳವಳಿಗೂ ಹಿಂದುತ್ವವೇ ಪ್ರೇರಣೆ. ಸುಮಾರು ೮೦೦ ವರ್ಷ ಅನ್ಯರ ಆಡಳಿತಕ್ಕೆ ಒಳಗಾಗಿದ್ದರೂ ಭಾರತ ಎಂದೂ ಅನ್ಯ ಧರ್ಮವನ್ನು ಒಪ್ಪಿಕೊಳ್ಳದ ಏಕೈಕ ಪರಾಕ್ರಮಿ ರಾಷ್ಟ್ರ ಭಾರತ ಎಂದರು.ಭಾರತದಿಂದ ಇಬ್ಭಾಗವಾಗಿ ಮೊದಲ ಬಾರಿಗೆ ಪಾಕಿಸ್ತಾನದ ಸ್ವಾತಂತ್ರೋತ್ಸವ ಆಚರಣ ವೇಳೆ ಅಧ್ಯಕ್ಷ ಮೊಹಮ್ಮದ್ ಅಲಿ ಜಿನ್ನಾ, ಈಗ ನಗುನಗುತ್ತಾ ಪಾಕ್ ಪಡೆದಿದ್ದೇವೆ. ಮುಂದೆ ದಾಳಿ ನಡೆಸಿ ಭಾರತವನ್ನು ಗೆಲ್ಲಬೇಕು ಎಂಬ ಹೇಳಿಕೆಯನ್ನು ಮರೆಯುವಂತಿಲ್ಲ. ಆ ಘೋಷಣೆಯನ್ನು ನನಸಾಗಿಸಲು ಕೇರಳ, ಅಸ್ಸಾಂ, ಬಂಗಾಳವನ್ನು ಇಸ್ಲಾಮೀಕರಣಗೊಳಿಸಲಾಗುತ್ತಿದೆ. ಭಾರತವನ್ನು ಇಸ್ಲಾಂ ದೇಶವನ್ನಾಗಿ ಘೋಷಿಸಲು ಲೋಕಸಭಾ ಕ್ಷೇತ್ರಗಳನ್ನು ಗೆಲ್ಲಲು ಹಸಿರು ಬಣ್ಣದಿಂದ ಗುರುತಿಸಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಹಂಪಿ ಉತ್ಸವದಲ್ಲಿ ಎತ್ತಿನಬಂಡಿ ಎತ್ತಿದ ವಿಜೇತರನ್ನು ಇದೇ ವೇಳೆ ಸನ್ಮಾನಿಸಲಾಯಿತು.
ಇದಕ್ಕೂ ಮುನ್ನ ನಗರದ ಥಿಯೋಸೋಫಿಕಲ್ ಕಾಲೇಜಿನಿಂದ ಆರಂಭಗೊಂಡ ಗಣವೇಷಧಾರಿಗಳ ಪಥ ಸಂಚಲನ ನಗರದ ವಿವಿಧ ರಸ್ತೆಗಳಲ್ಲಿ ಸಂಚರಿಸಿ, ಸಮಾವೇಶ ಸ್ಥಳಕ್ಕೆ ತಲುಪಿ ಸಂಪನ್ನಗೊಂಡಿತು.ಆರ್ಎಸ್ಎಸ್ ನಗರ ಸಂಘಚಾಲಕ ರಾಜಾ ಕೃಷ್ಣದೇವರಾಯ ಅಧ್ಯಕ್ಷತೆ ವಹಿಸಿದ್ದರು. ವಿಜ್ಞಾನ ಕಾಲೇಜಿನ ಅಧ್ಯಕ್ಷ ಜಿ.ವಿದ್ಯಾಧರ ವೇದಿಕೆಯಲ್ಲಿ ಉಪಸ್ಥಿತರಿದ್ದರು.