ಕುಮಟಾ: ಮಾನವನು ಪಿತೃ, ದೇವ ಹಾಗೂ ಗುರು(ಋಷಿ)ಋಣವೆಂಬ ಋಣತೃಯಗಳಿಂದ ಮುಕ್ತರಾಗಬೇಕು. ಬದುಕಿನಲ್ಲಿ ಗುರುವು ಶಿಷ್ಯನನ್ನು ಜೀವನದ ವಿವಿಧ ಹಂತಗಳಲ್ಲಿ ಬದುಕನ್ನು ಸಾಗಿಸಲು ಸಮರ್ಥನನ್ನಾಗಿಸುತ್ತಾನೆ ಎಂದು ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ಪ್ರೀತಿ ಪಿ. ಭಂಡಾರಕರ ತಿಳಿಸಿದರು.ಇಲ್ಲಿನ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ೧೯೮೯- ೯೦ನೇ ಸಾಲಿನ ಪೂರ್ವ ಶಿಕ್ಷಕ ವಿದ್ಯಾರ್ಥಿಗಳಿಂದ ಗುರುನಮನ ಮತ್ತು ಸ್ನೇಹ ಬಂಧು ಸಮಾಗಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಪ್ರೇರಣಾ ಟ್ರಸ್ಟ್ ಅಧ್ಯಕ್ಷ ವಸಂತ ಭಟ್ಟ ಮಾತನಾಡಿ, ಸಮಾಜದಲ್ಲಿ ಶಿಕ್ಷಕ ವೃತ್ತಿ ಬಹಳ ಪವಿತ್ರವಾದುದು. ಜ್ಞಾನದ ವರ್ಗಾವಣೆಯನ್ನು ಮಾಡುವುದರ ಮೂಲಕ ಶಿಕ್ಷಕ ಸೇವೆಯಲ್ಲಿ ಸಂತೃಪ್ತಿ ಪಡೆಯಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪ್ರಾಚಾರ್ಯ ಡಾ. ಕೆ.ಎನ್. ಬೈಲಕೇರಿ ಮಾತನಾಡಿ, ಈ ಗುರುವಂದನಾ ಕಾರ್ಯಕ್ರಮ ಇಂದಿನ ಪೀಳಿಗೆಗೆ ಪ್ರೇರಣೆ. ನಮ್ಮೆಲ್ಲರ ಜನ್ಮದ ಗುರಿ ಮನುಷ್ಯತ್ವವನ್ನು ಎತ್ತಿ ಹಿಡಿಯುವುದಾಗಿದೆ ಎಂದರು. ಕಮಲಾ ಬಾಳಿಗಾ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯರಾದ ಡಾ. ಕೆ.ಎನ್. ಬೈಲ್ಕೇರಿ, ಡಾ. ಎಸ್ ಜಿ. ರಾಯ್ಕರ್, ನಿವೃತ್ತ ಸಹ ಪ್ರಾಧ್ಯಾಪಕರಾದ ಪ್ರೊ. ಎಲ್.ಆರ್. ಕುಲಕರ್ಣಿ, ಡಾ. ಜಿ.ಪಿ. ಶೇಟ್, ಗೀತಾ ಶಿರಾಲಿ ಅವರನ್ನು ೧೯೮೯- ೯೦ನೇ ಸಾಲಿನ ಪೂರ್ವ ಶಿಕ್ಷಕ ವಿದ್ಯಾರ್ಥಿಗಳು ಸನ್ಮಾನಿಸಿದರು. ತಮ್ಮ ಕಲಿಕೆಗೆ ಪೂರಕವಾಗಿ ಹಿಂದೆ ಕಾರ್ಯನಿರ್ವಹಿಸಿ ನಿವೃತ್ತರಾಗಿರುವ ಬೋಧಕೇತರ ಸಿಬ್ಬಂದಿ ಹಾಗೂ ಹಾಲಿ ಕಾರ್ಯನಿರ್ವಹಿಸುತ್ತಿರುವ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.೧೯೮೯-೯೦ನೇ ಸಾಲಿನ ಪೂರ್ವ ಶಿಕ್ಷಕ ವಿದ್ಯಾರ್ಥಿಗಳಾದ ಕೃಷ್ಣ ಭಟ್, ವಿಜಯಲಕ್ಷ್ಮಿ ಭಟ್, ಪಾಂಡುರಂಗ ವಾಗ್ರೇಕರ, ಪ್ರಭಾಕರ ನಾಯರ ಇತರರು ಅನಿಸಿಕೆ ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಅಗಲಿದ ಗುರುಗಳಿಗೆ ಮತ್ತು ೧೯೮೯- ೯೦ನೇ ಸಾಲಿನ ಸಹಪಾಠಿ ಸ್ನೇಹಿತರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಮಂಗಲಾ ಪಾಟೀಲ ಪ್ರಾರ್ಥಿಸಿದರು. ಶ್ರೀಕಾಂತ ಹೆಗಡೆ ಸ್ವಾಗತಿಸಿದರು. ಎಲ್.ಎಂ. ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ತಿಮ್ಮಣ್ಣ ಭಟ್ ವಂದಿಸಿದರು. ಸರ್ವೋತ್ತಮ ಭಟ್ ಮತ್ತು ಕಲ್ಪನಾ ಶೇಟ ನಿರೂಪಿಸಿದರು.