ಧಾರ್ಮಿಕ ಸಾನ್ನಿಧ್ಯದ ಶಕ್ತಿ ಕುಂದದಂತೆ ಚೈತನ್ಯ ನೀಡುವ ಕಾರ್ಯವಾಗಲಿ: ಸುಬ್ರಹ್ಮಣ್ಯ ಶ್ರೀ

KannadaprabhaNewsNetwork | Published : Jan 25, 2025 1:02 AM

ಸಾರಾಂಶ

ಕಟ್‌ಬೇಲ್ತೂರು ಶ್ರೀ ಭದ್ರಮಹಾಕಾಳಿ ದೈವಸ್ಥಾನದಲ್ಲಿ ಶ್ರೀ ಭದ್ರಮಹಾಕಾಳಿ ದೇವಿಯ ರಕ್ತ ಚಂದನದ ನೂತನ ದಾರುಬಿಂಬದ ಪ್ರತಿಷ್ಠೆ ಹಾಗೂ ಸಪರಿವಾರ ದೈವಗಳ ಪುನ‌ರ್ ಪ್ರತಿಷ್ಠೆ ಮತ್ತು ಬ್ರಹ್ಮಕುಂಭಾಭಿಷೇಕ ಮಹೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು.

ಕಟ್‌ಬೇಲ್ತೂರು ದೈವಸ್ಥಾನದಲ್ಲಿ ಶ್ರೀ ಭದ್ರಮಹಾಕಾಳಿ ದೇವಿಯ ರಕ್ತ ಚಂದನದ ನೂತನ ದಾರುಬಿಂಬದ ಪ್ರತಿಷ್ಠೆ

ಕನ್ನಡಪ್ರಭ ವಾರ್ತೆ ಕುಂದಾಪುರ

ಉರಿಯುತ್ತಿರುವ ದೀಪದಂತೆ ಧಾರ್ಮಿಕ ಕ್ಷೇತ್ರಗಳಲ್ಲಿ ಸಾನ್ನಿಧ್ಯದ ಶಕ್ತಿ ಕುಂದದಂತೆ ಕಾಲಕಾಲಕ್ಕೆ ಸೂಕ್ತ ಚೈತನ್ಯ ನೀಡುವ ಕಾರ್ಯಗಳನ್ನು ನಿರ್ವಹಿಸಬೇಕು. ಇದರಿಂದ ಕ್ಷೇತ್ರದಲ್ಲಿ ಶಕ್ತಿ ವೃದ್ಧಿಯಾಗಿ ನಂಬಿದ ಭಕ್ತರಿಗೆ ದೇವರ ಅನುಗ್ರಹವಾಗುತ್ತದೆ ಎಂದು ಶ್ರೀ ಕ್ಷೇತ್ರ ಸುಬ್ರಹ್ಮಣ್ಯ ಸಂಪುಟ ನರಸಿಂಹ ಸ್ವಾಮಿ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.ಅವರು ಕಟ್‌ಬೇಲ್ತೂರು ಶ್ರೀ ಭದ್ರಮಹಾಕಾಳಿ ದೈವಸ್ಥಾನದಲ್ಲಿ ಶ್ರೀ ಭದ್ರಮಹಾಕಾಳಿ ದೇವಿಯ ರಕ್ತ ಚಂದನದ ನೂತನ ದಾರುಬಿಂಬದ ಪ್ರತಿಷ್ಠೆ ಹಾಗೂ ಸಪರಿವಾರ ದೈವಗಳ ಪುನ‌ರ್ ಪ್ರತಿಷ್ಠೆ ಮತ್ತು ಬ್ರಹ್ಮಕುಂಭಾಭಿಷೇಕ ಮಹೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಕಟ್ ಬೇಲ್ತೂರಿನಲ್ಲಿ ಇಂತಹ ದೇವತಾ ಕಾರ್ಯಗಳು ನಿರಂತರವಾಗಿ ನಡೆಯುತ್ತಲೇ ಇದೆ. ರಕ್ತಚಂದನ ವೃಕ್ಷದ ಸಣ್ಣ ಸಣ್ಣ ವಿಗ್ರಹಗಳನ್ನು ಬೇರೆ ಬೇರೆ ಕಡೆ ನೋಡಬಹುದು. ಆದರೆ ಇಲ್ಲಿರುವ ಬೃಹತ್, ಭವ್ಯವಾದ ರಕ್ತಚಂದನದ ವಿಗ್ರಹ ಬೇರೆಲ್ಲೂ ಇಲ್ಲ. ಹಿಂದಿನ ವಿಗ್ರಹದಂತೆ ಭವ್ಯವಾದ ವಿಗ್ರಹ ನಿರ್ಮಾಣವಾಗಿದೆ ಎಂದರು.

ವೇ.ಮೂ.ಬ್ರಹ್ಮಶ್ರೀ ಕೆ.ಎಸ್ ಲಕ್ಷ್ಮೀನಾರಾಯಣ ಸೋಮಯಾಜಿ ಕಮ್ಮರಡಿ ಧಾರ್ಮಿಕ ಉಪನ್ಯಾಸ ನೀಡಿ, ಕಷ್ಟ, ನಷ್ಟ, ರೋಗ ರುಜಿನ, ವ್ಯಥೆ ಮನುಷ್ಯ ಸಹಜವಾದುದು. ಪುಣ್ಯ ಕಾರ್ಯದಿಂದ ಸುಖದ ಅಪೇಕ್ಷೆ ಪಡುತ್ತೇವೆ. ಪುಣ್ಯದ ಫಲವಾಗಿ ಸುಖ ಪ್ರಾಪ್ತವಾಗಬೇಕಾದರೆ ಭಗವಂತನ ಅನುಗ್ರಹ ಅಗತ್ಯ. ಪ್ರಾಮಾಣಿಕತೆ, ಸತ್ಯ, ಧರ್ಮಶ್ರದ್ಧೆ ಅನುಸರಿಸುವುದರಿಂದ ಜನ್ಮ ಸಾರ್ಥಕತೆಯಾಗುತ್ತದೆ ಎಂದರು.ಆಡಳಿತ ಸಮಿತಿ ಗೌರವಾಧ್ಯಕ್ಷ,‌ ಮಾಜಿ‌ ಶಾಸಕ ಕೆ.ಗೋಪಾಲ ಪೂಜಾರಿ ಅಧ್ಯಕ್ಷತೆ ವಹಿಸಿ, ಈ ದೈವಸ್ಥಾನ ಪುರಾತನವಾದ ಧಾರ್ಮಿಕ ಹಿನ್ನೆಲೆಯುಳ್ಳ ಕ್ಷೇತ್ರ. ಈ ಹಿಂದೆ ಭದ್ರಮಹಾಕಾಳಿಯ ಮೂರ್ತಿಯನ್ನು ರಕ್ತ ಚಂದನ ಮರದಿಂದಲೇ ನಿರ್ಮಿಸಲಾಗಿದ್ದು, ಇತ್ತೀಚೆಗೆ ಈ ವಿಗ್ರಹವನ್ನು ಬದಲಾಯಿಸಬೇಕಾದ ಅನಿವಾರ್ಯತೆ ಎದುರಾದ ಸಂದರ್ಭ ಮೂರು ವರ್ಷಗಳ ಕಾಲ ಸೂಕ್ತವಾದ ರಕ್ತಚಂದನ ಮರಕ್ಕಾಗಿ ಶೋಧ ನಡೆಸಿ ಕೊನೆಗೆ ಶಿವಮೊಗ್ಗದಲ್ಲಿ ರಕ್ತಚಂದನ ಮರ ದೊರಕಿತು. ರಥಶಿಲ್ಪಿ ಲಕ್ಷ್ಮೀನಾರಾಯಣ ಆಚಾರ್ಯ ಹಾಗೂ ರಾಜಗೋಪಾಲ ಆಚಾರ್ಯರು ಭದ್ರಮಹಾಕಾಳಿ ದೇವಿಯ ವಿಗ್ರಹವನ್ನು ನಿರ್ಮಿಸಿದ್ದಾರೆ ಎಂದು ಹೇಳಿದರು.

ಈ ಸಂದರ್ಭ ಆಡಳಿತ ಸಮಿತಿ ಗೌರವಾಧ್ಯಕ್ಷ ಕೆ.ಗೋಪಾಲ ಪೂಜಾರಿ ಹಾಗೂ 25 ವರ್ಷ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಆಡಳಿತ ಸಮಿತಿ ಅಧ್ಯಕ್ಷ ಕೆ.ಆನಂದ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ಮೊಕ್ತೇಸರ ಬಿ. ವಿಠಲ ಶೆಟ್ಟಿ, ರಥಶಿಲ್ಪಿ ಲಕ್ಷ್ಮೀನಾರಾಯಣ ಆಚಾರ್ಯ ಕೋಟೇಶ್ವರ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ, ಮುಂಬೈ ದೀಪಕ್ ಹಾಸ್ಪಿಟಲ್‌ನ ಡಾ.ಭಾಸ್ಕರ ಶೆಟ್ಟಿ ಕೂಕನಾಡು, ವಿಜಯ ಬ್ಯಾಂಕ್ ನಿವೃತ್ತ ಸೀನಿಯರ್ ಮ್ಯಾನೇಜರ್ ಕೆ.ವಿಠಲ ಶೆಟ್ಟಿ ಕಟ್ ಬೇಲ್ತೂರು, ಉದಯ ನಾರಾಯಣ ಪೂಜಾರಿ, ಪಾಂಡುರಂಗ ಪೂಜಾರಿ, ನಿವೃತ್ತ ಮುಖ್ಯೋಪಾಧ್ಯಾಯ ಶಂಕರ ಶೆಟ್ಟಿ ಕೂಕನಾಡು, ಚಂದ್ರಶೇಖರ ಶೆಟ್ಟಿ, ಪ್ರಭಾಕರ ಪೂಜಾರಿ, ಸಂದೀಪ ಪೂಜಾರಿ, ಸಂಜಯ ಪೂಜಾರಿ, ಸತೀಶ್ ಶೆಟ್ಟಿ ಹೆಗ್ಡೆಯವರಮನೆ, ಅನಿಲ್‌ ಸುನೀಲ್‌, ಡಾ.ರಾಮಕೃಷ್ಣ ಕುಲಾಲ್ ಬೆಂಗಳೂರು, ಜಗದೀಶ ಶ್ರೀಯಾನ್ ಬಟ್ಟೆಕುದ್ರು, ಸುರೇಶ, ಮಾಧವ ಪೂಜಾರಿ, ಡಾ.ಭಾಸ್ಕರ ಶೆಟ್ಟಿ ಕೂಕನಾಡು, ಉದ್ಯಮಿ ದಿನೇಶ ಹೆಗ್ಡೆ ಮೊಳಹಳ್ಳಿ, ಸುಬ್ಬಣ್ಣ ಶೆಟ್ಟಿ ನಾಗಯ್ಯ ಶೆಟ್ರಮನೆ, ಬಿ.ಭಾಸ್ಕರ ಶೆಟ್ಟಿ ವಾಸ ಶೆಟ್ರಮನೆ, ಹೈಗುಳಿ ಪಾತ್ರಿಗಳಾದ ರವಿ ನಾಯ್ಕ, ಅಮ್ಮನವರ ಪಾತ್ರಿ ಗೋವಿಂದ ಪೂಜಾರಿ, ಅರ್ಚಕರಾದ ದೊಟ್ಟ ಪೂಜಾರಿ, ಜೋಗಿ ಸಮಾಜದ ಶೇಖರ ಬಳೆಗಾರ್, ಚಂದ್ರ ನಾಯ್ಕ್ ಉಪಸ್ಥಿತರಿದ್ದರು.

ವಿನಯ ಆಚಾರ್ಯ ಪ್ರಾರ್ಥಿಸಿದರು. ಆಡಳಿತ ಸಮಿತಿ ಅಧ್ಯಕ್ಷ ಕೆ.ಆನಂದ ಶೆಟ್ಟಿ ಸ್ವಾಗತಿಸಿದರು. ಸೀತಾರಾಮ ಶೆಟ್ಟಿ ಹೆಗ್ಡೆಯವರ ಮನೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮುಖ್ಯಶಿಕ್ಷಕ ಡಾ.ಕಿಶೋರ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕ ಜಗದೀಶ್ ಶೆಟ್ಟಿ ಸಹಕರಿಸಿದರು.

ಜ.23ರಂದು ಶ್ರೀ ಭದ್ರಮಹಾಕಾಳಿ ಮೊದಲ್ಗೊಂಡು 39 ಬಿಂಬಗಳಿಗೆ ಅಧಿವಾಸ ಪೂಜೆ, ಪ್ರತಿಷ್ಠಾಧಿವಾಸ ಹೋಮ, ಪೀಠಾಧಿವಾಸ ಹೋಮ, ನಪುಂಸಕ ಶಿಲಾಧಿವಾಸ ಹೋಮ, ಶಕ್ತಿ ಹೋಮ, ಸಂಜೆ ಬ್ರಹ್ಮಕುಂಭ ಪ್ರತಿಷ್ಠೆ, ಅಧಿವಾಸ ಹೋಮ ನಡೆಯಿತು. ಜ.24ರಂದು ಬೆಳಗ್ಗೆ ಶ್ರೀ ಭದ್ರಮಹಾಕಾಳಿ ದೇವಿಯ ಭವ್ಯವಾದ ರಕ್ತ ಚಂದನದ ದಾರು ಬಿಂಬ ಪ್ರತಿಷ್ಠಾಪನೆ ನಡೆಯಿತು. ಬ್ರಹ್ಮಕುಂಭಾಭಿಷೇಕ, ಮಹಾಪೂಜೆ, ಅಮ್ಮನವರ ದರ್ಶನ, ಮಧ್ಯಾಹ್ನ ಮಹಾಅನ್ನಸಂತರ್ಪಣೆ ನಡೆಯಿತು. ಬಳಿಕ‌ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

Share this article