ನರಗುಂದ: ಸಮಾಜದಲ್ಲಿ ಪ್ರತಿಯೊಬ್ಬ ಮನುಷ್ಯ ಕಾಯಕ ಮಾಡಿದರೆ ಮಾತ್ರ ಶ್ರೇಷ್ಠ ವ್ಯಕ್ತಿಯಾಗಲು ಸಾಧ್ಯವೆಂದು ಸಾರಿದ ವಿಶ್ವಗುರು ಬಸವಣ್ಣವರ ಜಯಂತಿಯನ್ನು ಸರ್ಕಾರ ರಜೆ ನೀಡಿದೆ. ಅಂದು ರಜೆ ರದ್ದು ಮಾಡಿ ಎಲ್ಲಾ ಸರ್ಕಾರಿ ನೌಕರರಿಗೆ ಕಾಯಕ ಮಾಡಲು ಅನುಕೂಲ ಮಾಡಿ ಕೊಡಬೇಕೆಂದು ಮಾಜಿ ಶಾಸಕರ ಪುತ್ರ ಹಾಗೂ ಲಿಂಗಾಯತ ಸಮಾಜದ ಮುಖಂಡ ಸಿ.ಎಸ್. ಪಾಟೀಲ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಮನುಕುಲಕ್ಕೆ ಸಮಾನತೆಯ ಸಂದೇಶ ಸಾರಿದ ಬಸವಣ್ಣನವರು ಯಾವುದೇ ಒಂದು ಜಾತಿ,ಧರ್ಮಕ್ಕೆ ಸೀಮಿತವಲ್ಲ. ಅವರು 12ನೇ ಶತಮಾನದಲ್ಲಿ ಅನುಭವ ಮಂಟಪದ ಮೂಲಕ ಜಗತ್ತಿಗೆ ಪ್ರಜಾಪ್ರಭುತ್ವದ ಕಲ್ಪನೆ ನೀಡಿದ ಮಹಾನ್ ಮಾನವತಾವಾದಿ ಎಂದರು.
ಜಾತ್ಯತೀತ ತತ್ವವನ್ನು ನಾವೆಲ್ಲ ನಿಜ ಅರ್ಥದಲ್ಲಿ ಪಾಲಿಸಬೇಕು. ಆ ಮೂಲಕ ಸಾಮಾಜಿಕ ಸಾಮರಸ್ಯ, ಸೌಹಾರ್ದತೆ ಕಾಪಾಡಲು ಸಾಧ್ಯ. ನಾಡಿನ, ದೇಶದ ಮಹಾನ ಚೇತನಗಳ ಜಯಂತಿಗಳ ಆಚರಣೆಗಳು ಸಾಮಾಜಿಕ ಸ್ವಾಸ್ಥ್ಯ ಕಾಪಾಡಲು ಪೂರಕ ಎಂದರು. ಕಾಯಕವೇ ಕೈಲಾಸ ಎಂದು ಸಾರಿದ ಬಸವಣ್ಣನವರ ಜಯಂತಿ ದಿನ ಸರ್ಕಾರ ರಜೆ ರದ್ದು ಪಡಿಸಿ ಬಸವ ಜಯಂತಿ ಆಚರಿಸಿ ಎಂದಿನಂತೆ ಸರ್ಕಾರಿ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಣೆ ಮೂಲಕ ಬಸವ ಜಯಂತಿಯನ್ನು ಇನ್ನಷ್ಟು ಅರ್ಥಪೂರ್ಣಗೊಳಿಸಬೇಕೆಂದು ಮನವಿ ಮಾಡಿಕೊಂಡರು.