ಔಷಧೀಯ ಗುಣವುಳ್ಳ ಸಸ್ಯ ಸಂರಕ್ಷಣೆ ಅಗತ್ಯ: ಡಾ.ಸಿದ್ದಪ್ಪ

KannadaprabhaNewsNetwork | Published : Jul 1, 2024 1:50 AM

ಸಾರಾಂಶ

ಸಸ್ಯದಲ್ಲಿ ಆಯುರ್ವೇದ ಔಷಧ ಗುಣ ಹೇರಳವಾಗಿ ಇರುವುದರಿಂದ ಪ್ರಸಕ್ತ ದಿನದಲ್ಲಿ ಸಸ್ಯ ಸಂರಕ್ಷಣೆ ಅಗತ್ಯ ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ಸಸ್ಯಶಾಸ್ತ್ರ ಅಧ್ಯಯನ ವಿಭಾಗ ಸಹಾಯಕ ಪ್ರಾಧ್ಯಾಪಕ ಡಾ.ಸಿದ್ದಪ್ಪ ಬಿ. ಕಕ್ಕಳಮೇಲಿ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಶ್ರೀ ಅನ್ನದಾನೇಶ್ವರ ಮಠದಲ್ಲಿ 270ನೇ ಶಿವಾನುಭವ ಸಂಪದ-ಪರಿಸರ ದಿನಾಚರಣೆ - - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಸಸ್ಯದಲ್ಲಿ ಆಯುರ್ವೇದ ಔಷಧ ಗುಣ ಹೇರಳವಾಗಿ ಇರುವುದರಿಂದ ಪ್ರಸಕ್ತ ದಿನದಲ್ಲಿ ಸಸ್ಯ ಸಂರಕ್ಷಣೆ ಅಗತ್ಯ ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ಸಸ್ಯಶಾಸ್ತ್ರ ಅಧ್ಯಯನ ವಿಭಾಗ ಸಹಾಯಕ ಪ್ರಾಧ್ಯಾಪಕ ಡಾ.ಸಿದ್ದಪ್ಪ ಬಿ. ಕಕ್ಕಳಮೇಲಿ ಹೇಳಿದರು.

ನಗರದ ದೇವರಾಜ ಅರಸು ಬಡಾವಣೆಯ ಹಾಲಕೆರೆ ಶ್ರೀ ಅನ್ನದಾನೇಶ್ವರ ಶಾಖಾ ಮಠದಲ್ಲಿ ಏರ್ಪಡಿಸಿದ್ದ 270ನೇ ಶಿವಾನುಭವ ಸಂಪದ ಹಾಗೂ ಪರಿಸರ ದಿನಾಚರಣೆಯಲ್ಲಿ ಉಪನ್ಯಾಸ ನೀಡಿದ ಅವರು, ಪ್ರತಿಯೊಬ್ಬರ ಮನೆಯಿಂದಲೂ ಪರಿಸರ ಉಳಿಸಿ, ಬೆಳೆಸುವ ಕರ್ತವ್ಯ ಪಾಲನೆ ಆಗಬೇಕಿದೆ ಎಂದರು.

ವಿವಿಧ ರೀತಿಯ ಪ್ರಾಣಿ ಸಂಕುಲದ ಜೊತೆ ಬದುಕಬೇಕೆಂದರೆ ಅದು ಈ ಭೂಮಂಡಲದಲ್ಲಿ ಮಾತ್ರ. ಇಂಥ ಸ್ಥಿತಿಯಲ್ಲಿ ಗುಡ್ಡಗಾಡುಗಳನ್ನು ಹಾಳು ಮಾಡದೇ ಸಸಿ ನೆಡುವ ಕಾರ್ಯಕ್ರಮದ ಮೂಲಕ ಮನುಷ್ಯ ಜೀವಕುಲವನ್ನು ಉಳಿಸುವಲ್ಲಿ ಎಲ್ಲರೂ ಶ್ರಮಿಸಬೇಕು. ದೇವರು ಇದ್ದಾನೋ, ಇಲ್ಲವೋ ಎಂಬ ಚರ್ಚೆ ಅನಗತ್ಯ. ಅದು ಅವರವರ ಭಾವ-ಭಕ್ತಿಕ್ಕೆ ಬಿಡಬೇಕು. ಪ್ರತಿಯೊಂದು ಜೀವರಾಶಿ ಮನುಷ್ಯ ಕುಲದಲ್ಲಿ ದೇವರಿದ್ದಾನೆ, ಇಲ್ಲದಿದ್ದರೆ ಮನುಷ್ಯ ಕಾಯಂ ಜೀವಂತವಾಗಿರಲು ಇಷ್ಟಪಡುತ್ತಿದ್ದ ಎಂದು ಹೇಳಿದರು.

ಶ್ರೀ ಹಾಲಕೆರೆ ಸಂಸ್ಥಾನ ಜಗದ್ಗುರು ಶ್ರೀ ಮುಪ್ಪಿನ ಬಸವಲಿಂಗ ಮಹಾಸ್ವಾಮೀಜಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ, ಕಣ್ಣಿಗೆ ಕಾಣುವ ವಸ್ತುಗಳೆಲ್ಲವೂ ಮಾಯವಾಗುತ್ತದೆ. ಆದ್ದರಿಂದ ಮನುಷ್ಯನಿಗೆ ಅರಿವು ಅಗತ್ಯ. ನಮ್ಮ ಸುತ್ತಲಿನ ಪರಿಸರದಲ್ಲಿ ಎಷ್ಟು ಅಂಧಕಾರವಿದೆ ಎನ್ನುವುದಕ್ಕಿಂತ ಅದರ ಬಗ್ಗೆ ಅರಿವು ಎಷ್ಟಿದೆ ಎಂಬುದನ್ನು ಚಿಂತಿಸಬೇಕು. ನಮ್ಮ ಜೀವನದ ದುಃಖದ ತಾಪಮಾನ ಕಡಿಮೆ ಮಾಡಬೇಕೆಂದರೆ ನಮ್ಮ ಅರಿವಿನ ಜ್ಞಾನ ಹೆಚ್ಚಾಗಬೇಕು ಎಂದರು.

ಹರಿಹರ ಪುರಸಭೆ ಮಾಜಿ ಅಧ್ಯಕ್ಷ ಲಿಂ. ಯಜಮಾನ್ ಟಿ.ಜಯದೇವಪ್ಪ, ಲಿಂ.ತಿಪ್ಪಮ್ಮ ಸ್ಮರಣಾರ್ಥ ಪುತ್ರರಾದ ಬಕ್ಕಪ್ಪ, ರುದ್ರೇಶ್, ಸುರೇಶ್ ಅವರು ಭಕ್ತಿಸೇವೆ ವಹಿಸಿಕೊಂಡಿದ್ದರು. ಶ್ರೀಮಠದ ಉಪಾಧ್ಯಕ್ಷ ಅಮರಯ್ಯ ಗುರುವಿನ ಮಠ, ಕಾರ್ಯದರ್ಶಿ ಎನ್.ಅಡಿವೆಪ್ಪ, ಟ್ರಸ್ಟಿಗಳಾದ ಹಿರಿಯ ಪತ್ರಕರ್ತ ವೀರಪ್ಪ ಎಂ.ಭಾವಿ, ನಾಗರಾಜ ಯರಗಲ್ ಮತ್ತಿತರರು ಇದ್ದರು.

ಕಾರ್ಯಕ್ರಮದಲ್ಲಿ ಟಿ.ಎಚ್.ಎಂ. ಶಿವಕುಮಾರ ಸ್ವಾಮಿ ಮತ್ತು ಸಂಗಡಿಗರಿಂದ ವಚನ ಗಾಯನ, ನಿವೃತ್ತ ಶಿಕ್ಷಕ ಮಹಾರುದ್ರಪ್ಪ ಮೆಣಸಿನಕಾಯಿ ಸ್ವಾಗತಿಸಿದರು. ಸಹ ಶಿಕ್ಷಕಿ ವಿ.ಬಿ.ತನುಜ ಕಾರ್ಯಕ್ರಮ ನಿರೂಪಿಸಿದರು. ಸಹಶಿಕ್ಷಕಿ ಸುಜಾತ ವಂದಿಸಿದರು.

- - - -30ಕೆಡಿವಿಜಿ33ಃ:

ದಾವಣಗೆರೆಯಲ್ಲಿ ಅನ್ನದಾನೇಶ್ವರ ಮಠದಲ್ಲಿ ನಡೆದ ಶಿವಾನುಭವ ಸಂಪದ ಕಾರ್ಯಕ್ರಮವನ್ನು ಶ್ರೀ ಮುಪ್ಪಿನ ಬಸವಲಿಂಗ ಮಹಾಸ್ವಾಮೀಜಿ ಉದ್ಘಾಟಿಸಿದರು.

Share this article