ಗದಗ: ನಗರದ ಗಂಗಾಪೂರ ಪೇಟೆಯಲ್ಲಿರುವ ಅಂಗನವಾಡಿ ಕೇಂದ್ರ ಸಂಖ್ಯೆ೧೭೮ರಲ್ಲಿ ಕಳಪೆ ಆಹಾರ ನೀಡುತ್ತಿರುವ ಬಗ್ಗೆ ಮಾಹಿತಿ ತಿಳಿದು ಬಂದ ಮೇರೆಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ. ಗುರುಪ್ರಸಾದ ಭೇಟಿ ನೀಡಿ ಪರಿಶೀಲಿಸಿದರು.
ಈ ಸಮಯದಲ್ಲಿ ೧೬ ಮಕ್ಕಳ ಪೈಕಿ ೧೦ ಮಕ್ಕಳು ಮಾತ್ರ ಇದ್ದರು, ಇಂತಹ ಕಳಪೆ ಆಹಾರ ನೀಡುತ್ತಿರುವುದರಿಂದ ಬಹಳಷ್ಟು ಪಾಲಕರು ತಮ್ಮ ಮಕ್ಕಳನ್ನು ಅಂಗನವಾಡಿಗೆ ಕಳುಹಿಸಿರುವುದಿಲ್ಲ ಎಂದು ಅಲ್ಲಿ ನೆರೆದ ಪಾಲಕರು ತಿಳಿಸಿದರು.
ಈ ವೇಳೆ ನ್ಯಾಯಾಧೀಶ ಕೆ.ಗುರುಪ್ರಸಾದ ಅವರು, ಅವಧಿ ಮೀರಿದ ತೊಗರಿ ಬೇಳೆಗಳ ಪ್ಯಾಕೆಟ್ಗಳು ಕಂಡುಬಂದಿದ್ದು ಅವುಗಳನ್ನು ನಾಶ ಪಡಿಸಲು, ಹಾಜರಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರೂಪಣಾಧಿಕಾರಿ ರಾಧಾ ಮಣ್ಣೂರ ಅವರಿಗೆ ನಿರ್ದೇಶಿಸಿ, ಅವಧಿ ಮೀರುವ ಮೊದಲೇ ಆಹಾರ ಸಾಮಗ್ರಿಗಳನ್ನು ಉಪಯೋಗಿಸಲು ಸೂಚಿಸಿದರು. ಅಂಗನವಾಡಿ ಕೇಂದ್ರ ಬಾಡಿಗೆ ಮನೆಯ ಕಟ್ಟಡದಲ್ಲಿ ಇದ್ದು, ಬೆಳಕಿನ ವ್ಯವಸ್ಥೆ ಇರಲಿಲ್ಲ, ಸಂಬಂಧಪಟ್ಟವರಿಗೆ ತಿಳಿಸಿ ಬೆಳಕಿನ ವ್ಯವಸ್ಥೆ ಕಲ್ಪಿಸಲಾಯಿತು. ಅಂಗನವಾಡಿ ಕೇಂದ್ರದ ಸ್ವಚ್ಛತೆ ಬಗ್ಗೆ ಗಮನ ಹರಿಸಲು, ಪೌಷ್ಟಿಕವಾದ ಸ್ವಚ್ಛತೆಯಿಂದ ಕೂಡಿದ ಆಹಾರವನ್ನು ಮಕ್ಕಳಿಗೆ ನೀಡಲು ಸೂಚಿಸಿದರು.ಅಂಗನವಾಡಿ ಶಿಕ್ಷಕಿ ಅಕ್ಕಮ್ಮ ಎಸ್. ಅಮರಗಟ್ಟಿ ಅವರನ್ನು ಅಮಾನತುಗೊಳಿಸಿ ಅವರ ಜಾಗಕ್ಕೆ ಪ್ರಭಾರಿಯಾಗಿ ಮಂಜುಳಾ ಬೆಟಗೇರಿ ಶಿಕ್ಷಕಿ ಅವರನ್ನು ವಾರಕ್ಕೆ ಮೂರು ದಿನಗಳ ಕಾಲ ಇಲ್ಲಿಗೆ ನಿಯೋಜಿಸಲಾಗಿದೆ ಎಂದು ನಿರೂಪಣಾಧಿಕಾರಿಗಳು ತಿಳಿಸಿದರು.