ಪಿ.ಎಸ್. ಪಾಟೀಲ
ಕನ್ನಡಪ್ರಭ ವಾರ್ತೆ ರೋಣತಾಲೂಕಿನ ಮೆಣಸಗಿ ಆಸರೆ ನವಗ್ರಾಮ ಮನೆ ಹಂಚಿಕೆ, ಹಕ್ಕುಪತ್ರ ವಿತರಣೆ ತಾರತಮ್ಮ, ನೀರು, ರಸ್ತೆ, ಶೌಚಾಲಯ, ಬೀದಿ ದೀಪ, ಸಾರಿಗೆ ಸೇರಿದಂತೆ ಮೂಲ ಸೌಕರ್ಯಕ್ಕಾಗಿ ಸಂತ್ರಸ್ತರು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
ಈ ಭಾಗದಲ್ಲಿ ಸ್ಥಳಾಂತರಗೊಂಡ 11 ಗ್ರಾಮಗಳ ಪೈಕಿ ಮೆಣಸಗಿ ಅತ್ಯಂತ ದೊಡ್ಡ ಗ್ರಾಮವಾಗಿದೆ.ಇಲ್ಲಿ ಒಟ್ಟು 1313 ಮನೆಗಳ ನಿರ್ಮಿಸುವ ಗುರಿ ಜಿಲ್ಲಾಡಳಿತ ಹೊಂದಿತ್ತು. ಆದರೆ ಇದರ ಗುತ್ತಿಗೆ ಪಡೆದ ಬೆಂಗಳೂರು ನಿರ್ಮಿತಿ ಕೇಂದ್ರ 211 ಮನೆಗಳ ನಿರ್ಮಾಣ ಕೈಬಿಟ್ಟು (ಅಡಿಪಾಯ ಹಾಕಲಾಗಿದೆ.) ಒಟ್ಟು 1102 ಮನೆಗಳನ್ನು ನಿರ್ಮಿಸಿ ಸರ್ಕಾರಕ್ಕೆ ಹಸ್ತಾಂತರಿಸಿತು.
ಆಸರೆ ನವಗ್ರಾಮಮವೂ ಮೂಲ ಗ್ರಾಮದಿಂದ ದಕ್ಷಿಣಕ್ಕೆ 4 ಕಿಮೀ ದೂರದಲ್ಲಿದೆ.ಸರ್ಕಾರ 43 ಎಕರೆ, ರೈತರಿಂದ ಒಟ್ಟು 127 ಎಕರೆ ಜಮೀನು (ಎಕರೆಗೆ ₹ 22.5 ಲಕ್ಷದಿಂದ ₹42.80 ಲಕ್ಷದವರೆಗೆ) ಖರೀದಿಸಿ, ಈ ಪ್ರದೇಶದಲ್ಲಿ 1313 ಮನೆಗಳು ಸೇರಿ ರಸ್ತೆ, ಉದ್ಯಾನವನ, ಶಾಲೆ, ಅಂಗನವಾಡಿ, ಆಸ್ಪತ್ರೆ, ಬಸ್ ನಿಲ್ದಾಣ, ಮಾರುಕಟ್ಟೆ, ದೇವಸ್ಥಾನ ಸೇರಿದಂತೆ ಅಗತ್ಯ ನಾಗರಿಕ ಸೌಲಭ್ಯ ಕಲ್ಪಿಸುವಲ್ಲಿ ಯೋಜನೆ ಹಾಕಿಕೊಂಡಿತು. ಆದರೆ ಇಲ್ಲಿ ಅದ್ಯಾವುದು ಸಮರ್ಪಕವಾಗಿಲ್ಲ. ಮೂಲಗ್ರಾಮದಲ್ಲಿನ ಕುಟುಂಬಗಳಿಗಿಂತ ಹೆಚ್ಚುವರಿ ಮನೆಗಳನ್ನು ಇಲ್ಲಿ ನಿರ್ಮಿಸಲಾಗಿದೆ.
ವಸತಿ ಸಚಿವರಿಂದ ಚಾಲನೆ: 2011ರಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಿ.ಸಿ. ಪಾಟೀಲ ಅವರು, ವಸತಿ ಸಚಿವರಾಗಿದ್ದ ವಿ. ಸೋಮಣ್ಣ ಅವರು ಸಂತ್ರಸ್ತರಿಗೆ ಮನೆ ಹಕ್ಕುಪತ್ರ ಮತ್ತು ಕೀ ಕೊಡುವ ಮೂಲಕ ಚಾಲನೆ ನೀಡಿದರು.2007 ಮತ್ತು 2009ರಿಂದ 2019ರ ವರೆಗೆ ಕೇವಲ 40 ಕುಟುಂಬಗಳು ಇಲ್ಲಿ ವಾಸವಿದ್ದರು. ಆದರೆ 2019ರಲ್ಲಿನ ನದಿ ಪ್ರವಾಹದಿಂದ ಮತ್ತೆ ತೊಂದರೆ ಅನುಭವಿಸಿದ ಮೂಲ ಗ್ರಾಮದ ಜನತೆ ನವಗ್ರಾಮದತ್ತ ಮುಖ ಮಾಡಿದರು. ಸದ್ಯ ನವಗ್ರಾಮದಲ್ಲಿ ಶೇ.70ರಷ್ಟು ಕುಟುಂಬಗಳು ವಾಸವಾಗಿದ್ದು, ಇನ್ನೂ ಶೇ. 30ರಷ್ಟು ಕುಟುಂಬಗಳು ಮೂಲ ಗ್ರಾಮದಲ್ಲಿದ್ದಾರೆ.
ಸಮಸ್ಯೆ ಆಗರ: ನವಗ್ರಾಮದಲ್ಲಿ ಉಳ್ಳವರಿಗೆ ಹೆಚ್ಚಿಗೆ ಮನೆ ಕೊಟ್ಟಿರುವುದು, ಅರ್ಹ ಫಲಾನುಭವಿಗಳನ್ನು ಕಡೆಗಣಿಸಿರುವದು. ಗ್ರಾಪಂನಲ್ಲಿ ಹಕ್ಕುಪತ್ರ ನೋಂದಣಿ ಮಾಡಿಸದಿರುವುದು, ಹಕ್ಕಪತ್ರ ವಿತರಣೆ ತಾರತಮ್ಯ ನಿವಾರಿಸದೇ ಇರುವುದು, ಆಸ್ಪತ್ರೆ ಕೊರತೆ, ಬ್ಯಾಂಕ್, ಸೊಸೈಟಿ, ಸ್ವಸಹಾಯ ಸಂಘ, ನ್ಯಾಯಬೆಲೆ ಅಂಗಡಿ, ದೇವಸ್ಥಾನಗಳು, ಗ್ರಾಪಂ ಕಾರ್ಯಾಲಯ ಮೂಲ ಗ್ರಾಮದಲ್ಲಿ ಇವೆ. ಪ್ರೌಢಶಾಲೆ, ಹಾಸ್ಟೆಲ್ ಮೂಲ ಗ್ರಾಮದಲ್ಲಿದ್ದು, ನವಗ್ರಾಮಕ್ಕೆ ಸಾರಿಗೆ ಬಸ್ ಸೌಕರ್ಯವಿಲ್ಲ. ಮನೆಗಳು ಮಳೆಗಾಲದಲ್ಲಿ ಸೋರುತ್ತಿವೆ. ಶೌಚಾಲಯಗಳು ಬಿದ್ದಿವೆ. ಜನ ವಸತಿ ಇಲ್ಲದೆ ಬಹುತೇಕ ಮನೆಗಳ ಕಿಟಕಿ, ಕದ, ಬಾಗಿಲು ಕಳುವಾಗಿದ್ದು, ಈಗಲೂ ದುರಸ್ತಿಗೊಂಡಿಲ್ಲ. ರಸ್ತೆಗಳು ಹದಗೆಟ್ಟಿವೆ. ಗಟಾರ ನಿರ್ಮಿಸಿಲ್ಲ. ಗ್ರಾಪಂ ಕಟ್ಟಡ 6 ವರ್ಷದಿಂದ ಅರ್ಧಕ್ಕೆ ನಿಂತಿದೆ. ಹೀಗೆ ನವಗ್ರಾಮದಲ್ಲಿ ನೂರಾರು ಸಮಸ್ಯೆಗಳಿವೆ.ಆಗಾಗ್ಗೆ ನೀರಿನ ಸಮಸ್ಯೆ: ₹1.91 ಕೋಟಿ ವೆಚ್ಚದಲ್ಲಿ 1 ಲಕ್ಷ ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್, 15 ಸಾವಿರ ಲೀಟರ್ ಸಾಮರ್ಥ್ಯದ ಶುದ್ಧನೀರಿನ ಘಟಕವಿದೆ. ಬಹುಗ್ರಾಮ ಕುಡಿವ ನೀರಿನ ಯೋಜನೆಯಡಿ ಪ್ರತಿ ಮನೆಗೂ ನಳ ಮೂಲಕ ನೀರು ಪೂರೈಸಲು 15250 ಮೀಟರ್ ಪೈಪ್ ಲೈನ್ ಆಳವಡಿಸಲಾಗಿದೆ. ಅಲ್ಲದೇ 2021-22ನೇ ಸಾಲಿನ 2215 ಜಲಜೀವನ ಮಷಿನ್ ಯೋಜನೆಯಡಿ ₹ 99.81 ಲಕ್ಷ ವೆಚ್ಚದಲ್ಲಿ 670 ಮನೆಗಳಿಗೆ ನಳ ಸಂಪರ್ಕ ಕಲ್ಪಿಸಲಾಗಿದೆ. ಆದರೆ ಈ ವರೆಗೂ ಜೆಜೆಎಂ ನಳ ಮೂಲಕ ನೀರು ಪೂರೈಕೆ ಮಾಡಿಲ್ಲ. ಜೆಜೆಎಂ ಬಹುತೇಕ ನಳಗಳು, ಮೀಟರ್ಗಳು ಕಿತ್ತೊಗಿವೆ. ಬಹುಗ್ರಾಮ ನೀರಿನ ಯೋಜನೆಯಡಿ ನೀರು ಪೂರೈಸುತ್ತಿದ್ದು, ವಾರದಲ್ಲಿ 2 ಸಾರಿ ಕುಡಿವ ನೀರು ಪೂರೈಸಲಾಗುತ್ತಿದೆ. ಬಳಕೆಗೆ ಕಾಟಾಚಾರಕ್ಕೆ ಎಂಬಂತೆ ನಿತ್ಯ ನೀರು ಪೂರೈಸಲಾಗುತ್ತಿದೆ. ಆದರೆ ನೀರು ಸಾಲುತ್ತಿಲ್ಲ. ಬಳಕೆ ಪೂರೈಸುವ ನೀರನ್ನು ಜಾನುವಾರುಗಳು ಕುಡಿಯುತ್ತಿಲ್ಲವಂತೆ. ಶುದ್ಧ ನೀರಿನ ಘಟಕ 4 ವರ್ಣದಿಂದ ಕೆಟ್ಟಿದ್ದು, ಈವರೆಗೂ ರಿಪೇರಿ ಮಾಡಿಸಿಲ್ಲ. ಶುದ್ಧ ಕುಡಿವ ನೀರು ತರಲು ಇಲ್ಲಿನ ಜನ ಅಪಾಯಕಾರಿ ಮಾರ್ಗ ಅನುಸರಿಸುತ್ತಿದ್ದು, ಮೇಲ್ಮಟ್ಟ ನೀರು ಸಂಗ್ರಹ ಜಲಗಾರದ ಮೇಲೆ ಹತ್ತಿ (40 ಅಡಿ ಎತ್ತರ) ಟ್ಯಾಂಕನೊಳಗೆ ಹಗ್ಗ ಬಿಟ್ಟು ನೀರು ತರುತ್ತಿದ್ದಾರೆ. ಕಳೆದ 6 ತಿಂಗಳ ಹಿಂದೆ ನಿಂಗಪ್ಪ ಈರಪ್ಪ ತೋಟರ ಎಂಬುವರು ಟ್ಯಾಂಕ್ ಮೇಲೆ ಹತ್ತಿ ನೀರು ತರುವ ವೇಳೆ ಆಯಾ ತಪ್ಪಿ 40 ಅಡಿ ಎತ್ತರದಿಂದ ಕೆಳಗೆ ಬಿದ್ದು ತನ್ನ ಎರಡು ಕಾಲಿನ ಚಪ್ಪೆಯನ್ನು ಮುರಿದುಕೊಂಡಿದ್ದು, ಈಗಲೂ ಈ ವ್ಯಕ್ತಿ ಹಾಸಿಗೆ ಹಿಡಿದಿದ್ದಾನೆ. ಇಷ್ಟಾದರೂ ಇಲ್ಲಿನ ಜನ ನೀರಿಗಾಗಿ ಇಂತಹ ಸಾಹಸ ಮಾಡುತ್ತಲೇ ಇದ್ದಾರೆ. ಈಗಲಾದರೂ ಗ್ರಾಪಂ, ತಾಪಂ, ಜಿಪಂ ಎಚ್ಚೆತ್ತುಕೊಂಡು ನವಗ್ರಾಮಕ್ಕೆ ಶುದ್ಧ ಕುಡಿವ ನೀರು ಪೂರೈಕೆಗೆ ಮುಂದಾಗಬೇಕು. ನಮ್ಮ ಸಮಸ್ಯೆ ಕೇಳಾಕ ಗ್ರಾಪಂ ಪಿಡಿಒ ನವಗ್ರಾಮಕ್ಕೆ ಬರುವುದೇ ಇಲ್ಲ. ಹಿಂಗಾದ್ರೆ ನಮ್ಮ ಸಮಸ್ಯೆ ಯಾರ ಹತ್ರ ಹೇಳಿಕೊಳ್ಳಬೇಕ್ರಿ ಎನ್ನುತ್ತಾರೆ ಬಸಲಿಂಗಯ್ಯ ಸಾಲಿಮಠ, ಯಲ್ಲಪ್ಪ ಮಾದರ.
ಮನೆ ಹಂಚಿಕೆ ಗೊಂದಲ: ಮೂಲ ಗ್ರಾಮದ ಮನೆಗಳ ಅನ್ವಯ ತಲಾ 2 ಮನೆಗಳನ್ನು ಹಂಚಕೆ ಮಾಡಿದರೂ ಇನ್ನೂ ಮನೆಗಳು ಉಳಿಯುತ್ತವೆ. ಸಾಕಷ್ಟು ಮನೆಗಳು ಇದ್ದರೂ ಇಲ್ಲಿಯೂ ಮನೆ ಹಂಚಿಕೆಯಲ್ಲಿ ಗೊಂದಲ, ತಾರತಮ್ಯವಿದೆ. ಇದರಿಂದ ಸಂತ್ರಸ್ತರು ಕಣ್ಣಿರಲ್ಲಿ ಕೈ ತೊಳೆಯುವಂತಾಗಿದೆ. ಹಂಚಿಕೆಯಾದ 1102 ಮನೆಗಳ ಪೈಕಿ 30 ಮನೆಗಳು ಮಾತ್ರ ಗ್ರಾಪಂನಲ್ಲಿ ನೊಂದಣಿ ಮಾಡಿಸಿದ್ದಾರೆ.ಹಕ್ಕುಪತ್ರ ಸರಿಯಾಗಿ ಹಂಚಿಲ್ಲ. ನವಗ್ರಾಮದಲ್ಲಿ ಸಾಕಷ್ಡು ಸಮಸ್ಯೆಗಳಿದ್ದು, ಅನೇಕ ವರ್ಷದಿಂದ ನಡುಗಡ್ಡೆಯಲ್ಲಿರುವಂತೆ ಜೀವನ ಸಾಗಿಸುತ್ತಿದ್ದೇವೆ ಎಂದು ನವಗ್ರಾಮ ನಿವಾಸಿ ವೀರಣ್ಣ ಪಟ್ಟಣಶೆಟ್ಟಿ, ವೀರಣ್ಣ ಓಜಗನವರ ಹೇಳಿದರು.
ನಿತ್ಯ ಬೆಳಗ್ಗೆ ಕುಡಿವ ನೀರು, ಸಾಯಂಕಾಲ ಬಳಕೆಗ ನೀರು ಪೂರೈಸಲಾಗುತ್ತಿದೆ. ಅಶುದ್ಧ ನೀರಿನ ಘಟಕ ಶೀಘ್ರದಲ್ಲಿ ದುರಸ್ತಿ ಮಾಡಲಾಗುವುದು. ನವಗ್ರಾಮದಲ್ಲಿ ಅರ್ಧಕ್ಕೆ ನಿಂತಿರುವ ಗ್ರಾಪಂ ಕಾರ್ಯಾಲಯ ಕಟ್ಟಡ ಪೂರ್ಣಗೊಳ್ಳಲು ಖಾತ್ರಿ ಯೋಜನೆಯಡಿ ಅನುದಾನ ಕಾಯ್ದಿರಿಸಲಾಗಿದೆ. ಬಸ್ ಸಂಚಾರಕ್ಕೆ ಸಾರಿಗೆ ಇಲಾಖೆಗೆ ಪತ್ರ ಬರೆಯಲಾಗಿದೆ ಮೆಣಸಗಿ ಪಿಡಿಒ ಎಂ.ಎಸ್. ಜಂಗಣ್ಣವರ ಹೇಳಿದರು.