)
ಕನ್ನಡಪ್ರಭ ವಾರ್ತೆ ಬೆಂಗಳೂರು
ವಾಜರಹಳ್ಳಿಯ ಬಿಸಿಸಿಎಚ್ಎಸ್ ಲೇಔಟ್ ನಿವಾಸಿ ರಾಮಲಿಂಗಪ್ಪ ದಂಪತಿ ಮಕ್ಕಳು ಹತ್ಯೆಗೀಡಾಗಿದ್ದು, ಆತ್ಮಹತ್ಯೆಗೆ ಯತ್ನಿಸಿದ್ದ ಅವರ ಪತ್ನಿ ಉಮಾದೇವಿಯನ್ನು ರಕ್ಷಿಸಿ ಕುಟುಂಬಬದವರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮನೆಯಲ್ಲಿ ತನ್ನ ಇಬ್ಬರು ಮಕ್ಕಳನ್ನು ಕೊಂದು ಉಮಾದೇವಿ ನೇಣು ಬಿಗಿದುಕೊಂಡು ಪ್ರಾಣ ತ್ಯಾಗಕ್ಕೆ ಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ.
ಮಾನಸಿಕ ಖಿನ್ನತೆಯೇ ಕಾರಣರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿರುವ ರಾಮಲಿಂಗಪ್ಪ ಅವರಿಗೆ ಹತ್ತು ವರ್ಷಗಳ ಹಿಂದೆ ಉಮಾದೇವಿ ಜತೆ ವಿವಾಹವಾಗಿತ್ತು. ಆದರೆ ಮದುವೆಯಾಗಿ ದಶಕ ಕಳೆದರೂ ದಂಪತಿಗೆ ಸಂತಾನವಾಗಿರಲಿಲ್ಲ. ನಾಲ್ಕು ತಿಂಗಳ ಹಿಂದೆ ಖಾಸಗಿ ಆಸ್ಪತ್ರೆಯಲ್ಲಿ ಐವಿಎಫ್ ಮೂಲಕ ಇಬ್ಬರು ಹೆಣ್ಣು ಕಂದಮ್ಮಗಳಿಗೆ ಉಮಾದೇವಿ ಜನ್ಮ ನೀಡಿದ್ದರು. ಆದರೆ ಹೆರಿಗೆ ನಂತರ ಅವರಿಗೆ ಮಾನಸಿಕ ಖಿನ್ನತೆ ಕಾಡಿತು. ಕೊನೆಗೆ ಇದೇ ಯಾತನೆಯೂ ಆ ಕಂದ್ಮಮಗಳನ್ನು ಬಲಿ ಪಡೆದಿದೆ.
ಕೆಲಸದ ನಿಮಿತ್ತ ಹೊರ ಹೋಗಿದ್ದ ನಾನು ಮಧ್ಯಾಹ್ನ ಮನೆಗೆ ಮರಳಿದೆ. ಆಗ ಪತ್ನಿ ಕೊಠಡಿಯ ಬಾಗಿಲು ಹಾಕಿಕೊಂಡಿದ್ದಳು. ಆಗ ಬಲವಂತದಿಂದ ಕೋಣೆ ಬಾಗಿಲು ತೆರೆದಾಗ ದುಪ್ಪಟ್ಟದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಯತ್ನಿಸಿದ್ದ ಆಕೆಯನ್ನು ರಕ್ಷಿಸಲಾಯಿತು. ಅದೇ ಕೊಠಡಿಯಲ್ಲಿ 4 ತಿಂಗಳ ಅವಳಿ ಹೆಣ್ಣು ಮಕ್ಕಳು ಪ್ರಜ್ಞಾಹೀನಾರಾಗಿದ್ದರು. ಕೂಡಲೇ ಸಮೀಪದ ಖಾಸಗಿ ಆಸ್ಪತ್ರೆಗೆ ಶಿಶುಗಳನ್ನು ಕರೆದುಕೊಂಡು ಹೋಗಲಾಯಿತು. ಆಗ ತಪಾಸಣೆ ನಡೆಸಿದ ವೈದ್ಯರು, ಹಸುಗೂಸುಗಳು ನೀರಿನಲ್ಲಿ ಮುಳುಗಿದ ಪರಿಣಾಮ ಮೃತಪಟ್ಟಿವೆ ಎಂದು ಹೇಳಿದರು. ಹೀಗಾಗಿ ತನ್ನ ಪತ್ನಿಯೇ ಮಕ್ಕಳನ್ನು ನೀರಿನಲ್ಲಿ ಮುಳುಗಿಸಿ ಕೊಂದು ನಂತರ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ ಎಂದು ರಾಮಲಿಂಗಪ್ಪ ದೂರಿನಲ್ಲಿ ವಿವರಿಸಿದ್ದಾರೆ. ಈ ದೂರಿನ ಮೇರೆಗೆ ಮೃತ ಮಕ್ಕಳ ತಾಯಿ ವಿರುದ್ಧ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.